ಹನಿಪ್ರೀತ್ ನಂತರ, ರಾಮ್ ರಹೀಂ ಮತ್ತೊಬ್ಬ ಆಪ್ತೆ ವಿಪಾಸನಾ ನಾಪತ್ತೆ
ಸಿರ್ಸಾ (ಹರ್ಯಾಣ), ಸೆಪ್ಟೆಂಬರ್ 19: ಸ್ವಯಂ ಘೋಷಿತ ದೇವಮಾನ ರಾಮ್ ರಹೀಂ ಬಾಬಾನ ಶಿಷ್ಯೆಯಾಗಿದ್ದ ಹನಿಪ್ರೀತ್ ಸಿಂಗ್ ಪೊಲೀಸರ ಬಲೆಯಿಂದ ತಪ್ಪಿಸಿಕೊಳ್ಳಲು ನಾಪತ್ತೆಯಾಗಿರುವ ಬೆನ್ನಲ್ಲೇ ರಾಮ್ ರಹೀಂ ನ ಮತ್ತೊಬ್ಬ ಆಪ್ತೆ ಹಾಗೂ ರಾಮ್ ರಹೀಂ ಆಶ್ರಮದ ಮತ್ತೊಬ್ಬ ಪ್ರಭಾವಿ ಮಹಿಳೆ ವಿಪಾಸನಾ ಕೂಡ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ರಾಮ್ ರಹೀಂ ಜೈಲು ಪಾಲಾದ ನಂತರ, ಹನಿಪ್ರೀತ್ ಸಿಂಗ್ ಅವರೇ ರಾಮ್ ರಹೀಂ ನ ಡೇರಾ ಸಚ್ಚಾ ಸೌದಾ ಆಶ್ರಮದ ಉಸ್ತುವಾರಿ ವಹಿಸಿಕೊಳ್ಳುತ್ತಾರೆಂದು ಹೇಳಲಾಗಿತ್ತು. ಆದರೆ, ಪೊಲೀಸರು ಆಕೆಯ ಬಂಧನಕ್ಕೆ ಮುಂದಾಗಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದರು. ಆದರೂ, ಆಕೆ ನಾಪತ್ತೆಯಾದಳು. ಇದೀಗ, ಆಕೆ ನೇಪಾಳ ಗಡಿಯಲ್ಲಿದ್ದು ಪ್ರತಿದಿನ ತನ್ನ ವಾಸ ಸ್ಥಳ ಬದಲಿಸುತ್ತಿದ್ದಾಳೆಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಹೀಗೆ, ಹನಿಪ್ರೀತ್ ಸಿಂಗ್ ನಾಪತ್ತೆಯಾದ ನಂತರ ಇದೀಗ, ವಿಪಾಸನಾ ಕೂಡ ನಾಪತ್ತೆಯಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಮ್ ರಹೀಂ ಅಕ್ರಮಗಳನ್ನು ಎಳೆಎಳೆಯಾಗಿ ತನಿಖೆ ನಡೆಸುತ್ತಿರುವ ಹರ್ಯಾಣ ಪೊಲೀಸರು ಒಂದಿಲ್ಲೊಂದು ದಿನ ತನ್ನನ್ನೂ ಬಂಧಿಸಬಹುದೆಂದು ಹೆದರಿ ಆಕೆ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.