ದೇಶದಲ್ಲಿ ಮಂಗಳವಾರ ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ದಿಢೀರ್ ಇಳಿಕೆ
ನವದೆಹಲಿ, ಜೂ.23: ಸೋಮವಾರ ದಾಖಲೆಯ 88 ಲಕ್ಷ ಕೊರೊನಾ ಲಸಿಕೆಯನ್ನು ದೇಶಾದ್ಯಂತ ಹಾಕಲಾಗಿದೆ. ಆದರೆ ಮಂಗಳವಾರ ಮಧ್ಯರಾತ್ರಿಯವರೆಗೆ 53.86 ಲಕ್ಷ ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದ್ದು ಲಸಿಕೆ ವೇಗವು ಹಠಾತ್ ಇಳಿಕೆ ಕಂಡಿದೆ. ಈ ನಡುವೆ ಈ ಕೊರೊನಾ ಲಸಿಕೆ ದಾಖಲೆಯು ಪ್ರಶ್ನೆ ಹುಟ್ಟಿ ಹಾಕಿದೆ.
ಸೋಮವಾರ ದಾಖಲೆಯ ಪ್ರಮಾಣದ ಕೊರೊನಾ ಲಸಿಕೆ ಹಾಕುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ''ಲಸಿಕೆ ಪ್ರಮಾಣವನ್ನು ಹಲವು ದಿನಗಳವರೆಗೆ ಸಂಗ್ರಹಿಸಿರಿಸಿವೆ'' ಎಂಬ ಆರೋಪಗಳಿವೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿರುವ ದಾಖಲೆ ಹೊಂದಿರುವ ಅಗ್ರ 10 ರಾಜ್ಯಗಳಲ್ಲಿ ಏಳು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯವಾಗಿದೆ.
ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಕೇಂದ್ರದ ಗುರಿಯನ್ನು ಪೂರೈಸಲು, ದಿನಕ್ಕೆ 97 ಲಕ್ಷ ಲಸಿಕೆ ನೀಡಬೇಕಾಗಿತ್ತು. ಪ್ರಸ್ತುತ ಪೂರೈಕೆ ಪರಿಸ್ಥಿತಿಯು ಗುರಿಯನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಸರ್ಕಾರ ದೈನಂದಿನ ಅಗತ್ಯವಿರುವ ಲಸಿಕೆಗಳನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಎನ್ಟಿಎಜಿಐ (ರೋಗನಿರೋಧಕ ಕುರಿತ ರಾಷ್ಟ್ರೀಯ ಸಲಹಾ ಗುಂಪು) ಅಧ್ಯಕ್ಷ ಡಾ.ಎನ್.ಕೆ.ಅರೋರಾ ಮಾತನಾಡಿ, "ಸರ್ಕಾರವು ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಪ್ರತಿದಿನ 1.25 ಕೋಟಿ ಡೋಸ್ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ," ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, "ಈ ವಿಷಯದಲ್ಲಿ ಕೇಂದ್ರವು ರಾಜ್ಯಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂದಿನ 15 ದಿನಗಳಲ್ಲಿ ರಾಜ್ಯಗಳು ಎಷ್ಟು ಪ್ರಮಾಣವನ್ನು ಪಡೆಯುತ್ತಾರೆ ಎಂದು ನಾವು ರಾಜ್ಯಕ್ಕೆ ಮಾಹಿತಿ ನೀಡುತ್ತೇವೆ. ಆದ್ದರಿಂದ ರಾಜ್ಯಗಳು ಉತ್ತಮವಾಗಿ ಯೋಜನೆ ರೂಪಿಸಬಹುದು," ಎಂದಿದ್ದಾರೆ.
ಆದರೆ ಪೂರೈಕೆಯ ಅಂತರವು ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಗೋಚರಿಸಿದೆ. ದಾಖಲೆಯ 17 ಲಕ್ಷ ಕೊರೊನಾ ಲಸಿಕೆಯನ್ನು ನೀಡಿದೆ ಎಂದು ವರದಿಯಾಗಿದೆ. ಸೋಮವಾರದ ದಾಖಲೆಯ ಪ್ರಕಾರ, ಮಧ್ಯಪ್ರದೇಶವು ದೈನಂದಿನ ಲಸಿಕೆ ಪ್ರಮಾಣವು ಇದಕ್ಕೂ ಮೊದಲು ತೀವ್ರವಾಗಿ ಇಳಿಕೆಯಾಗಿತ್ತು. ಜೂನ್ 15 ರಂದು 37,904 ಲಸಿಕೆ ನೀಡಲಾಗಿದ್ದು, ಜೂನ್ 20 ರಂದು ಲಸಿಕೆ ನೀಡಿಕೆ ಪ್ರಮಾಣವು 4,098 ಕ್ಕೆ ಇಳಿದಿದೆ. ಜೂನ್ 21 ರಂದು ರಾಜ್ಯದಲ್ಲಿ 16,95,592 ಲಸಿಕೆ ಪ್ರಮಾಣವನ್ನು ನೀಡಲಾಗಿದೆ.
"ಲಸಿಕೆಗಳನ್ನು ಸಂಗ್ರಹಿಸುವಂತಹ ಯಾವುದೇ ಸಮಸ್ಯೆ ಇಲ್ಲ," ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ. "ಈ ಮೊದಲು ಕೆಲವು ದತ್ತಾಂಶ ನಮೂದು ಸಮಸ್ಯೆಯಿಂದಾಗಿ ಕೊರೊನಾ ಲಸಿಕೆ ಪ್ರಮಾಣ ಕಡಿಮೆ ಸಂಖ್ಯೆಯಲ್ಲಿ ಕಾಣಿಸಿರಬಹುದು. ಸೋಮವಾರ ನಮ್ಮ ಎಲ್ಲಾ ಲಸಿಕೆ ನೀಡಿಕೆಯು ಕಣ್ಣಮುಂದೆ ಮಾಡಲಾಗಿದೆ. ಮರೆಮಾಡಲು ಏನೂ ಇಲ್ಲ. ನೀವು ಈ ರೀತಿ ಪ್ರಶ್ನೆ ಕೇಳಿದ್ದನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ," ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications