ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಅರೆಸ್ಟ್
ಕಳೆದ ನಾಲ್ಕು ದಿನಗಳಿಂದ ಅವರನ್ನು ದೆಹಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.
ನವದಹೆಲಿ, ಏಪ್ರಿಲ್ 26: ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಹಾಗೂ ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಆರ್.ಕೆ. ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ, ಪಕ್ಷದ ಎರಡೆಲೆ ಚಿಹ್ನೆಯನ್ನು ತಮ್ಮ ಬಣ (ಶಶಿಕಲಾ ಬಣ) ಪರವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪ ಅವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಅವರನ್ನು ದೆಹಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.
ಮಂಗಳವಾರವೂ ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ, ಮಂಗಳವಾರ ಮಧ್ಯರಾತ್ರಿ ಏಕಾಏಕಿ ಅವರನ್ನು ಬಂಧಿಸಲಾಗಿದೆ.
ಸಹಚರನೂ ಅರೆಸ್ಟ್: ದಿನಕರನ್ ಜತೆಗೆ ಇದೇ ಪ್ರಕರಣದಲ್ಲಿ ಅವರಿಗೆ ನೆರವಾಗಿದ್ದ ದಿನಕರನ್ ಅವರ ಸಹಚರ ಮಲ್ಲಿಕಾರ್ಜುನ್ ಅವರನ್ನೂ ಬಂಧಿಸಲಾಗಿದೆ.
ಇಬ್ಬರ ಮೇಲೂ ಐಪಿಸಿ ಸೆಕ್ಷನ್ 170 (ಸರ್ಕಾರಿ ಅಧಿಕಾರಿಯನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ) ಸೆಕ್ಷನ್ 120 ಬಿ (ಕ್ರಿಮಿನಲ್ ಷಡ್ಯಂತ್ರಕ್ಕಾಗಿ ಶಿಕ್ಷೆ) ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಚಾರಣೆಯ ಆರಂಭದಿಂದಲೂ ತಾವು ಸುಖೇಶ್ ನನ್ನು ಭೇಟಿಯಾಗಿಲ್ಲ ಎಂದೇ ಹೇಳಿಕೊಂಡು ಬಂದಿದ್ದ ದಿನಕರನ್, ಕೊನೆಗೆ ಮಂಗಳವಾರ ಅವರನ್ನು ಭೇಟಿ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಇದರ ಆಧಾರದ ಮೇಲೆ ಅವರ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.