ನಕ್ಸಲ್ ಬಗ್ಗುಬಡಿಯಲು ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಗೂಢಚರ್ಯೆ
ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹದಲ್ಲಿ ತೊಡಗಿರುವವರ ಬಗ್ಗೆ ಸಮನ್ವಯ ಬೇಕು. ಜತೆಗೆ ಏನೇ ದಾಳಿ, ನಕ್ಸಲರನ್ನು ಬಗ್ಗು ಬಡಿಯುವ ಕೃತ್ಯ ನಡೆದರೂ ಭದ್ರತಾ ಪಡೆಗಳಿಗೆ ಅತೀ ಕಡಿಮೆ ಹಾನಿ ಆಗುವಂತಿರಬೇಕು ಎಂದು ರಾಜನಾಥ್ ಸಿಂಗ್ ತಾಕೀತು ಮಾಡಿದ್ದಾರೆ
ನವದೆಹಲಿ, ಮೇ 9: ನಕ್ಸಲರ ಬಗ್ಗೆ ಮಾಹಿತಿ ಕಲೆ ಹಾಕಲು ಶರಣಾದ ನಕ್ಸಲರನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು. ಇದರ ಜತೆಗೆ ಗೂಢಚರ್ಯೆಯನ್ನು ಇನ್ನೂ ಹೆಚ್ಚು ಮಾಡಬೇಕು. ಹೀಗಂಥ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಕ್ಸಲ್ ನಿಗ್ರಹಕ್ಕೆ ಹೊಸ ಸೂತ್ರ ಮಂಡಿಸಿದ್ದಾರೆ.
ಸುಕ್ಮಾ ದಾಳಿಯ ನಂತರ ನವದೆಹಲಿಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಸಭೆಯಲ್ಲಿ ಅಜಿತ್ ದೋವಲ್ ನಕ್ಸಲರನ್ನು ಬಗ್ಗು ಬಡಿಯಲು ತಂತ್ರಜ್ಞಾನದ ಅಗತ್ಯವಿದೆ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ.
ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹದಲ್ಲಿ ತೊಡಗಿರುವವರ ಬಗ್ಗೆ ಸಮನ್ವಯ ಬೇಕು. ಜತೆಗೆ ಏನೇ ದಾಳಿ, ನಕ್ಸಲರನ್ನು ಬಗ್ಗು ಬಡಿಯುವ ಕೃತ್ಯ ನಡೆದರೂ ಭದ್ರತಾ ಪಡೆಗಳಿಗೆ ಅತೀ ಕಡಿಮೆ ಹಾನಿ ಆಗುವಂತಿರಬೇಕು ಎಂದು ರಾಜನಾಥ್ ಸಿಂಗ್ ತಾಕೀತು ಮಾಡಿದ್ದಾರೆ.
ನಕ್ಸಲರಿಗೆ ಹರಿದು ಬರುತ್ತಿರುವ ಹಣದ ಮೂಲಕ್ಕೆ ತಡೆ ಒಡ್ಡಲು ಹೊಸ ವಿಧಾನಗಳನ್ನು ಅನುಸರಿಸಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
ಇನ್ನು ಸ್ಮಾರ್ಟ್ ಗನ್ ಗಳನ್ನು ಭದ್ರತಾ ಪಡೆಗಳು ಬಳಕೆಗೆ ತರಬೇಕು. ಇದರಿಂದ ಒಂದೊಮ್ಮೆ ನಕ್ಸಲರು ಈ ಗನ್ ಗಳನ್ನು ಹೊತ್ತೊಯ್ದರೂ ಅವು ಎಲ್ಲಿಗೆ ಹೋಗಿವೆ ಎಂಬುದುನ್ನು ಟ್ರಾಕ್ ಮಾಡಬಹುದು. ಈ ಮೂಲಕ ಗನ್ ಗಳನ್ನು ಭದ್ರತಾ ಪಡೆಗಳು ಮಾತ್ರ ಬಳಕೆ ಮಾಡುವಂತಿರಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಇನ್ನು ನಕ್ಸಲರನ್ನು ಬೆನ್ನಟ್ಟಲು ಜಿಪಿಎಸ್, ಮಾನವ ರಹಿತ ಹಾರಾಟ ಯಂತ್ರಗಳು, ಸ್ಯಾಟಲೈಟ್ ಚಿತ್ರಗಳು ರಡಾರ್ ಗಳ ಬಳಕೆಯ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಜತೆಗೆ ಭದ್ರತಾ ಪಡೆಗಳಿಗೆ ಉತ್ತಮ ಗುಣಮಟ್ಟದ ಶೂ, ಬುಲೆಟ್ ಫ್ರೂಪ್ ಜಾಕೆಟ್ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ.
ಇನ್ನು ಗೂಢಚರ್ಯೆ, ರಸ್ತೆ ನಿರ್ಮಾಣ, ಭದ್ರತಾ ಪಡಗಳು ಜಮಾವಣೆ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಯಲ್ಲಿ ಆಕ್ರಮಣಕಾರಿ ನಡೆಗಳನ್ನು ಅನುಸರಿಸುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ತಾಕೀತು ಮಾಡಿದರು.