ನನ್ನ ಸಹೋದರನನ್ನು ಖರೀದಿಸಲು ಅದಾನಿ, ಅಂಬಾನಿಗೆ ಸಾಧ್ಯವಿಲ್ಲ: ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಗಾಂಧಿ
ನವದೆಹಲಿ, ಡಿಸೆಂಬರ್ 03: ಸತ್ಯದ ಕವಚ ಧರಿಸಿರುವ ರಾಹುಲ್ ಗಾಂಧಿಗೆ ಚಳಿಯಾಗುವುದಿಲ್ಲವೆಂದು ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಉತ್ತರ ಪ್ರದೇಶಕ್ಕೆ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
'ರಾಹುಲ್ ಗಾಂಧಿಗೆ ಚಳಿಯಾಗುವುದಿಲ್ಲ. ಕಾರಣ ಅವರು ಸತ್ಯತ ಕವಚ ಧರಿಸಿಕೊಂಡಿದ್ದಾರೆ' ಎಂದರು.
ಕೊರೆಯುವ ಚಳಿಯಲ್ಲೂ ರಾಹುಲ್ ಗಾಂಧಿ ಅವರು ಕೇವಲ ಟೀ ಶರ್ಟ್ ಧರಿಸಿಕೊಂಡು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಜನರ ಅಚ್ಚರಿಗೆ ಕಾರಣವಾಗಿದೆ.

'ಅದಾನಿ, ಅಂಬಾನಿ ಎಲ್ಲರನ್ನೂ ಖರೀದಿಸಿದ್ದಾರೆ. ಆದರೆ, ನನ್ನ ಸಹೋದರನನ್ನು ಎಂದಿಗೂ ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಅವನು ಸತ್ಯದ ಪರವಾಗಿ ನಿಂತಿದ್ದಾನೆ' ಎಂದು ರಾಹುಲ್ ಬಗ್ಗೆ ಪ್ರಿಯಾಂಕಾ ಪ್ರಶಂಸೆಯ ಮಾತುಗಳನ್ನು ಹೇಳಿದರು.
LIVE: #BharatJodoYatra | Kashmiri Gate to Pavi Sadakpur | Delhi to Uttar Pradesh https://t.co/eNsuwgQ9eR
— Bharat Jodo (@bharatjodo) January 3, 2023
'ಕೇಂದ್ರ ಸರ್ಕಾರ ತನ್ನ ಶಕ್ತಿಯನ್ನು ಬಳಸಿಕೊಂಡಿತು. ಕೋಟಿಗಟ್ಟಲೆ ಖರ್ಚು ಮಾಡಿ ಆತನ ಪ್ರತಿಷ್ಠೆಯನ್ನು ನಾಶಪಡಿಸಿತು. ಆದರೆ ಅವನೊಬ್ಬ ಯೋಧ, ಸತ್ಯದ ಹಾದಿಯಿಂದ ಹಿಂದೆ ಸರಿಯಲಿಲ್ಲ' ಎಂದೂ ತಿಳಿಸಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಉತ್ತರ ಪ್ರದೇಶ ಪ್ರವೇಶಿಸಿದೆ. ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಗೊಂಡಿದೆ. ಜಮ್ಮು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.
ಈಗಾಗಲೇ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿಗಳಲ್ಲಿ ಯಾತ್ರೆ ಸಂಚರಿಸಿದೆ.
ಯಾತ್ರೆಯುದ್ದಕ್ಕೂ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಆರ್ಎಸ್ಎಸ್ ಅನ್ನು ಗುರಿಯಾಗಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿಗಳ ಕೈಕೆಳಗೆ ಕೆಲಸ ಮಾಡುತ್ತದೆ ಎಂಬ ಗಂಭೀರ ಆರೋಪವನ್ನು ರಾಹುಲ್ ಗಾಂಧಿ ಮಾಡುತ್ತಲೇ ಬಂದಿದ್ದಾರೆ.
ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಉಪಟಳ ಹೆಚ್ಚಾಗಿದೆ. ಆದರೆ, ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ರಾಹುಲ್ ಆರೋಪಿಸಿದ್ದಾರೆ.
ಯಾತ್ರೆಗೆ ಜನಬೆಂಬಲ ದೊರೆತಿದೆ. ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ವಿರೋಧ ಪಕ್ಷಗಳ ನಾಯಕರು, ಕಾರ್ಮಿಕರು, ವಿಕಲಚೇತನರು ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ಗೆ ಬೆಂಬಲ ಸೂಚಿಸಿದ್ದಾರೆ.
ಈ ಯಾತ್ರೆ ಮುಗಿದ ಮೇಲೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ 'ಹಾಥ್ ಸೇ ಹಾಥ್ ಜೋಡೋ' ಯಾತ್ರೆಯನ್ನು ಕೈಗೊಳ್ಳಲಾಗುತ್ತದೆ. ಆ ಮೂಲಕ 'ಭಾರತ್ ಜೋಡೊ ಯಾತ್ರೆಯ' ಸಂದೇಶವನ್ನು ಜನರಿಗೆ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications