ಮೋಹನ್ ಲಾಲ್ ಹೇಳಿದ ನೋಟಿನ ಮಾತು ಸಕ್ಕತ್ ವೈರಲ್
ಕೊಚ್ಚಿನ್( ಕೇರಳ), ನವೆಂಬರ್ 23: 'ನಾವು ಸುಮ್ಮನೆ ಮದ್ಯದಂಗಡಿಗಳ ಮುಂದೆ ನಿಲ್ಲುತ್ತೇವೆ, ಧಾರ್ಮಿಕ ಕೇಂದ್ರಗಳ ಮತ್ತು ಚಿತ್ರ ಮಂದಿರಗಳ ಮುಂದೆ ಕ್ಯೂನಲ್ಲಿ ನಿಲ್ಲುತ್ತೇವೆ. ಅದಕ್ಕೆ ಹೋಲಿಸಿದರೆ ಬ್ಯಾಂಕು ಮತ್ತು ಎಟಿಎಂಗಳ ಮುಂದೆ ನಿಲ್ಲುವುದು ಅಪರಾಧವೇ ಅಲ್ಲ, ಒಳ್ಳೆಯ ಕೆಲಸ' ಎಂದು ಕೇರಳ ಚಿತ್ರನಟ ಮೋಹನ್ ಲಾಲ್ ಹೇಳಿರುವ ಮಾತು ಜಾಲತಾಣದಲ್ಲಿ ವೈರಲ್ ಆಗಿದೆ.
ಮೋದಿ ಸರ್ಕಾರದ ಅಪನಗದೀಕರಣ ಪರವಾಗಿ ಅನೇಕ ಉದಾಹರಣೆಗಳನ್ನು ಕೊಟ್ಟು ಮದ್ಯದಂಗಡಿಯ ಸಾಲಿಗೆ ಹೋಲಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿ ಪರಿಣಮಿಸಿದೆ.[ಮದ್ಯ ಪ್ರಿಯರಿಗಾಗಿ ಎಂಎಸ್ಐಎಲ್ ನಿಂದ 900 ಮಳಿಗೆ ಪ್ರಾರಂಭ]
ಅವರು ನ. 21 ರಂದು ತಮ್ಮ ಬ್ಲಾಗಿನಲ್ಲಿ ಅಪನಗದೀಕರಣಕ್ಕೆ ಸಂಬಂಧಿಸಿದಂತೆ ಮೋದಿಯವರು ಕಪ್ಪುಹಣದ ಮೇಲೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಆ ವೇಳೆಗಾಗಲೇ ಕೇರಳದಲ್ಲಿ ಇಬ್ಬರು ಸರತಿಯಲ್ಲಿ ನಿಂತವರು ಸಾವಿಗೀಡಾಗಿದ್ದರು. ಅಲ್ಲದೆ ಹಣಕ್ಕಾಗಿ ನಿಲ್ಲುವಂತಹ ಪರಿಸ್ಥಿತಿಯನ್ನು ಮದ್ಯದಂಗಡಿಯಲ್ಲಿ ನಿಲ್ಲುವ ಜನರಿಗೆ ಹೋಲಿಸಿರುವ ಬಗ್ಗೆ ಚಿಂತಕರು ಕಿಡಿಕಾರಿದ್ದಾರೆ.
ಮೋಹನ್ ಲಾಲ್ ಅವರು ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಗೆ ಜನರು ವಿರೋಧವನ್ನು ವ್ಯಕ್ತಪಡಿಸದ್ದು, ಕೆಲವರು ನಟನ ತನ್ನ ಭಾವನೆ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಕೆಲವು ಅನುಯಾಯಿಗಳು ಮೋಹನ್ ಲಾಲ್ ಅವರ ಹೇಳಿಕೆಯನ್ನು ಜನರು ತಿರುಚುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮೋಹನ್ ಲಾಲ್ ಅವರು ಪ್ರಸ್ತುತ ರಾಜಾಸ್ತಾನದಲ್ಲಿ ಚಿತ್ರೀಕರಣದಲ್ಲಿದ್ದಾರೆ. ಅವರ ಬ್ಲಾಗಿನ ಸುತ್ತ ನಡೆಯುತ್ತಿರುವ ಈ ವಾದ ಪ್ರತಿವಾದಗಳ ಬಗ್ಗೆ ಏನಂತಾರೆ?, ಕಾದು ನೋಡಬೇಕು.