Haryana Assembly Election 2024: ಹರಿಯಾಣ ಚುನಾವಣಾ ಅಖಾಡಕ್ಕೆ ಅರವಿಂದ್ ಕೇಜ್ರಿವಾಲ್ ಎಂಟ್ರಿ
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರಕ್ಕಿಳಿದಿವೆ. ಇನ್ನು ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಹರಿಯಾಣದಲ್ಲಿ ಹವಾ ಸೃಷ್ಟಿಸಿದ್ದು ದೆಹಲಿ ಮಾಜಿ ಸಿಎಂ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.
ಇಂದು ಹರಿಯಾಣದಲ್ಲಿ ಚುನಾವಣೆ ಪ್ರಚಾರದಲ್ಲಿ ಕೇಜ್ರಿವಾಲ್ ಭಾಗವಹಿಸಲಿದ್ದಾರೆ ಎಂದು ಪಕ್ಷ ಮಾಹಿತಿ ನೀಡಿದೆ. ಇನ್ನು ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ಅರವಿಂದ ಕೇಜ್ರಿವಾಲ್, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ತಮ್ಮದೇ ಸಂಪುಟದ ಅತಿಶಿ ಮರ್ಲೇನಾ ಅವರನ್ನು ಮುಂದಿನ ಸಿಎಂ ಘೋಷಿಸಿದ್ದರು.

ಈ ಬೆಳವಣಿಗೆ ನಡುವೆಯೇ ಅರವಿಂದ್ ಕೇಜ್ರಿವಾಲ್ ಅವರನ್ನು ಬೇರೆ ರಾಜ್ಯಗಳಲ್ಲೂ ತಮ್ಮ ಪಕ್ಷ ಸಂಘಟನೆಗೆ ತೊಡೆತಟ್ಟಿದ್ದಾರೆ. ಅದರಂತೆ ಹರಿಯಾಣದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಹೇಳಿರುವಂತೆ ಕೇಜ್ರಿವಾಲ್ ಅವರು ಜಗಧ್ರಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೇ ಹರಿಯಾಣದ 11 ಜಿಲ್ಲೆಗಳಲ್ಲೂ ಭರ್ಜರಿ ಸಮಾವೇಶಗಳನ್ನೂ ಪಕ್ಷ ಆಯೋಜಿಸಿದ್ದು, ಅಲ್ಲಿಯೂ ಕೇಜ್ರಿವಾಲ್ ಭಾಷಣ ಮಾಡಿ ಮತದಾರರನ್ನು ಸೆಳೆಯಲಿದ್ದಾರೆ ಎಂದು ಹೇಳಲಾಗಿದೆ.

ಹರಿಯಾಣ ಚುನಾವಣೆ ಘೋಷಣೆಯಾಗುವ ಮುನ್ನ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಎಎಪಿ ಮುಂದಾಗಿತ್ತು. ಆದರೆ, ಸೀಟು ಹಂಚಿಕೆ ವಿಚಾರದಿಂದಾಗಿ ಮೈತ್ರಿಯು ಯಶಸ್ವಿಯಾಗಿರಲಿಲ್ಲ. ಹಾಗಾಗಿ ಆಮ್ ಆದ್ಮಿ ಪಕ್ಷವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಹರಿಯಾಣದಲ್ಲೂ ದೆಹಲಿಯಂತೆ ಕೇಜ್ರಿವಾಲ್ ಮಾದರಿಯ ಆಡಳಿತ ತರಬೇಕೆಂಬ ವಿಶ್ವಾಸದೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಸಂದೀಪ್ ಪಾಠಕ್ ಹೇಳಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಸಂಬಂಧ 20 ಅಭ್ಯರ್ಥಿಗಳ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇತ್ತೀಚೆಗೆ ಬಿಜೆಪಿ ತೊರೆದು ಎಎಪಿ ಸೇರಿದ್ದ ಮಾಜಿ ಸಚಿವ ಛತರ್ ಪಾಲ್ ಸಿಂಗ್ ಅವರನ್ನು ಬರ್ವಾಲಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಹರಿಯಾಣದ ಮಾಜಿ ಸಿಎಂ ಕಾಂಗ್ರೆಸ್ನ ಭೂಪಿಂದರ್ ಸಿಂಗ್ ಹೂಡಾ ಎದುರು ಎಎಪಿಯ ಪ್ರವೀಣ್ ಗುಸ್ಖಾನಿ ಅವರನ್ನು ಕಣಕ್ಕಿಳಿಸಿದೆ. ಅಲ್ಲದೆ, ಭೀಮ್ ಸಿಂಗ್ ರಾಠಿ (ರಾಡೌರ್), ಅಮರ್ ಸಿಂಗ್ (ನಿಲೋಖೇರಿ), ಅಮಿತ್ ಕುಮಾರ್ (ಇಸ್ರಾನ), ರಾಜೇಶ್ ಸರೋಹಾ (ರಾಯ್ನ), ಮಂಜೀತ್ ಫರ್ಮಾನ (ಖರ್ಖೌಡಾ), ನರೇಶ್ ಬಗ್ರಿ (ಕಲನೂರ್), ಮಹೇಂದರ್ ದಹಿಯಾ (ಜಜ್ಜರ್), ಸುನೀಲ್ ರಾವ್ (ಅಟೆಲಿ), ಸತೀಶ್ ಯಾದವ್ (ರೆವಾರಿ), ರಾಜೇಂದ್ರ ರಾವತ್ (ಹಾಥಿನ್), ರೀಟಾ ಮಾನಿಯಾ (ಸಧೌರಾ), ಕಿಶನ್ ಬಜಾಜ್ (ಥಾಣೇಶ್ವರ), ಹವಾ ಸಿಂಗ್ (ಇಂದ್ರಿ), ಮುಕ್ತಿಯಾರ್ ಸಿಂಗ್ ಬಾಜಿಗರ್ (ರಾತಿಯಾ), ಭೂಪೇಂದ್ರ ಬೇನಿವಾಲ್ (ಅದಂಪುರ), ಜವಾಹರ್ ಲಾಲ್ (ಬವಾಲ್), ಪ್ರವೇಶ್ ಮೆಹ್ತಾ (ಫರಿದಾಬಾದ್), ಅಬಾಶ್ ಚಂಡೇಲಾ (ಟಿಗೌನ್) ಅವರನ್ನು ಕಣಕ್ಕಿಳಿಸಿದೆ.
ಹರಿಯಾಣ ವಿಧಾನಸಭೆಯ 90 ಸದಸ್ಯ ಸ್ಥಾನಕ್ಕೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.











Click it and Unblock the Notifications