Explainer: ಕೇಜ್ರಿವಾಲ್ರ ರಾಷ್ಟ್ರ ರಾಜಕಾರಣದ ಕನಸಿಗೆ ಬಲ ತಂದು ಕೊಟ್ಟ ದೆಹಲಿ ಚುನಾವಣೆ ಫಲಿತಾಂಶ
ನವದೆಹಲಿ, ಡಿಸೆಂಬರ್ 07: ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ದೆಹಲಿ ಮಹಾನಗರ ಪಾಲಿಕೆ (MCD) ಚುನಾವಣೆ ಫಲಿತಾಂಶ ಹೊರಬಂದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(AAP) ಭರ್ಜರಿ ಗೆಲುವು ಸಾಧಿಸಿದೆ. ಹದಿನೈದು ವರ್ಷಗಳ ಕಾಲ ದೆಹಲಿ ಮಹಾನಗರ ಪಾಲಿಕೆಯ ಅಧಿಕಾರ ಗದ್ದುಗೆ ಹಿಡಿದಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಕಾಂಗ್ರೆಸ್ ಕನಿಷ್ಠ ಮಟ್ಟದ ಪ್ರದರ್ಶನ ನೀಡಿದೆ. ಈ ಗೆಲುವು ಅರವಿಂದ್ ಕೇಜ್ರಿವಾಲ್ ಅವರ ರಾಷ್ಟ್ರ ರಾಜಕಾರಣದ ಕನಸಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದು ಬಿಜೆಪಿ ವಿರುದ್ಧದ ಪ್ರಥಮ ಗೆಲುವು
ಈ ಬಾರಿಯ ಎಎಪಿ ಗೆಲುವು ಬಿಜೆಪಿ ವಿರುದ್ಧ ನೇರ ಗೆಲುವೆಂದೇ ಹೇಳಬಹುದು. ದೆಹಲಿ ಹಾಗೂ ಪಂಜಾಬ್ನಲ್ಲಿ ಕಾಂಗ್ರೆಸ್ ವಿರುದ್ಧ ನೇರ ಹಣಾಹಣಿಯಲ್ಲಿ ಎಎಪಿ ಜಯ ಸಾಧಿಸಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ ವಿರುದ್ಧ ನೇರ ಪೈಪೋಟಿ ನಡೆಸಿ ಎಎಪಿ ಗೆಲುವು ದಾಖಲಿಸಿದೆ.
ಎಎಪಿಯಂತಹ ಸಣ್ಣ ಪಕ್ಷವು ವಿಶ್ವದ ಅತಿದೊಡ್ಡ ಪಕ್ಷವನ್ನು ಸೋಲಿಸಿದೆ ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಎಎಪಿ ಯಾವಾಗಲೂ ಕಾಂಗ್ರೆಸ್ ಅನ್ನು ಸೋಲಿಸಿ ಅಧಿಕಾರ ಹಿಡಿದಿದೆ ಎಂದು ಬಿಜೆಪಿ ಹೇಳುತ್ತಿತ್ತು. ಈಗ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಸಂಸದ ಸಂಜಯ್ ಸಿಂಗ್ ತಿಳಿಸಿದ್ದಾರೆ. ಎಎಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಬಿಜೆಪಿ ವಿರುದ್ಧ ನೇರ ಪೈಪೋಟಿ ನಡೆಸಿಯೇ ನಾವು ಗೆಲುವು ದಾಖಲಿಸಿದ್ದೇವೆ ಎಂದು ಹೇಳಿದಂತಾಗಿದೆ.

ಒಂದೇ ದಿನ ಮೂರು ಚುನಾವಣೆ ಎದುರಿಸಿದ ಎಎಪಿ
ಬಿಜೆಪಿ ಅಧಿಕಾರದಲ್ಲಿರುವ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಮಾನಾಂತರವಾಗಿ ದೆಹಲಿ ಚುನಾವಣೆ ನಡೆದಿದೆ. ದೆಹಲಿ ಗೆಲುವು ಎಎಪಿಗೆ ಮತ್ತಷ್ಟು ಬಲ ತಂದು ಕೊಟ್ಟಿದೆ. ವಿಶೇಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಎಎಪಿಯ ಗೆದ್ದಿರುವುದು ಪಕ್ಷದ ವರ್ಚಸ್ಸನ್ನು ಹೆಚ್ಚು ಮಾಡಿದೆ.
ಎಎಪಿಯ 'ಕೇಜ್ರಿವಾಲ್ ಸರ್ಕಾರ್, ಕೇಜ್ರಿವಾಲ್ ಕಾರ್ಪೊರೇಟರ್' ಎಂಬ ಎಎಪಿ ಘೋಷಣೆಯು, ಬಿಜೆಪಿಯ 'ಮೋದಿಯ ಡಬಲ್ ಇಂಜಿನ್' ಘೋಷಣೆಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದೆ. ಇದು ರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರಲಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ.

ಗುಜರಾತ್, ಹಿಮಾಚಲದಲ್ಲಿ ಎಎಪಿ ಪರೀಕ್ಷೆ
ದೆಹಲಿಯಂತೆ ಗುಜರಾತ್ ಹಾಗೂ ಹಿಮಾಚಲದಲ್ಲಿಯೂ ಎಎಪಿ ತನ್ನ ನೆಲೆಯನ್ನು ಕಂಡುಕೊಳ್ಳಲು ಯತ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಎಎಪಿ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು 10 ವರ್ಷಗಳನ್ನು ಪೂರೈಸಿದ ಪಕ್ಷಕ್ಕೆ ಗುಜರಾತ್ನಲ್ಲಿ ಶೇಕಡಾ 15-20 ರಷ್ಟು ಮತಗಳನ್ನು ಗಳಿಸುವುದು ದೊಡ್ಡ ಸಾಧನೆಯಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೇಜ್ರಿವಾಲ್ರ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿಗೆ ಇಂಬು ನೀಡಿದ ಚುನಾವಣೆ
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ನೇರ ಪೈಪೋಟಿ ಒಡ್ಡುತ್ತಿರುವ ಕೇಜ್ರಿವಾಲ್ಗೆ ದೆಹಲಿ ಗೆಲುವು ಬಹುಮುಖ್ಯವಾಗಿತ್ತು. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕೇಜ್ರಿವಾಲ್ರ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳು ಮತ್ತಷ್ಟು ಗಟ್ಟಿಯಾದಂತಾಗಿದೆ.
ಬಿಜೆಪಿ ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ ಯಶಸ್ಸು ಕಾಣುತ್ತಿರುವಾಗ, ಕೇಜ್ರಿವಾಲ್ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ದೆಹಲಿಯ ಈ ಗೆಲುವು ಪಕ್ಷದ ಹರಿಯಾಣದ ಮೇಲೆಯೂ ಪ್ರಭಾವ ಬೀರುವ ಎಲ್ಲ ಲಕ್ಷಣಗಳಿವೆ. ಹರಿಯಾಣದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ನೇರವಾಗಿ ಬಿಜೆಪಿಯನ್ನು ಎದುರಿಸುವ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂಬುದು ರಾಜಕೀಯ ವಿಶ್ಲೇಷಕರ ವಾದವಾಗಿದೆ.












Click it and Unblock the Notifications