Delhi Assembly Election 2025: ಎಎಪಿಯ ದೋಣಿ ಯಮುನಾ ನದಿಯಲ್ಲಿ ಮುಳುಗಡೆ
ನವದೆಹಲಿ, ಜನವರಿ 30: 70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ಕಾವು ಏರಿದೆ. ಫೆಬ್ರವರಿ 5ರಂದು ದೆಹಲಿ ವಿಧಾನಸಭೆ ಚುನಾವಣೆ-2025ರ ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಷ್ಟ್ರ ರಾಜಧಾನಿಯ ಅಧಿಕಾರ ಯಾವ ಪಕ್ಷಕ್ಕೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಪ್ರಧಾನಿ ನರೇಂದ್ರ ಮೋದಿ ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರ ನಡೆಸಿದರು. ಉಸ್ಮಾನ್ಪುರ್ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ಪಕ್ಷ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಟೀಕೆಗಳನ್ನು ಮಾಡಿದರು.

ಹರ್ಯಾಣದಲ್ಲಿಯೇ ಯಮುನಾ ನದಿ ವಿಷಕಾರಿಯಾಗಿ ಹರಿದು ಬರುತ್ತಿದೆ ಎಂಬ ಅರವಿಂದ ಕೇಜ್ರಿವಾಲ್ ಹೇಳಿಕೆಗೆ ನರೇಂದ್ರ ಮೋದಿ ತಿರುಗೇಟು ನೀಡಿದರು. "ಕೆಲವರು ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಎಪಿಯ ದೋಣಿ ಯಮುನಾ ನದಿಯಲ್ಲಿ ಮುಳುಗಿ ಹೋಗುತ್ತದೆ" ಎಂದು ಮೋದಿ ಹೇಳಿದರು.
ನಾನು ಅದೇ ನೀರು ಕುಡಿಯುವೆ: ಸಮಾವೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, "ದೆಹಲಿಯ ಜನರಂತೆ ನಾನು ಸಹ ಯಮುನಾ ನದಿಯ ನೀರು ಕುಡಿಯುವೆ. ಈ ಚುನಾವಣೆಯ ಬಳಿಕ ಎಎಪಿಯ ದೋಣಿ ಯಮುನಾ ನದಿಯಲ್ಲಿ ಮುಳುಗಿ ಹೋಗಲಿದೆ" ಎಂದು ಮೋದಿ ತಿಳಿಸಿದರು.
"ಚುನಾವಣೆ ಸೋಲುವ ಭಯದಲ್ಲಿ ಕೆಲವು ವ್ಯಕ್ತಿಗಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ದೆಹಲಿಯ ಮಾಜಿ ಸಿಎಂ ಹರ್ಯಾಣದ ಜನರ ಮೇಲೆ ಆರೋಪ ಮಾಡುತ್ತಿದ್ದಾರೆ. ಹರ್ಯಾಣದ ಜನರು ನೀರಿಗೆ ವಿಷವನ್ನು ಬೆರಸುತ್ತಾರೆಯೇ?. ದೆಹಲಿಯಲ್ಲಿರುವ ಎಲ್ಲಾ ನ್ಯಾಯಮೂರ್ತಿಗಳು, ನರೇಂದ್ರ ಮೋದಿ ಆ ನೀರು ಕುಡಿಯುತ್ತಾರೆ. ಮೋದಿ ಕುಡಿಯುವ ನೀರಿಗೆ ಹರ್ಯಾಣದ ಜನರು ವಿಷ ಬೆರಸುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳಲು ಆಗದು" ಎಂದರು.
"ಜನರನ್ನು ಕ್ಷಮಿಸುವ ಗುಣ ದೇಶದ ಜನರ ರಕ್ತದಲ್ಲಿಯೇ ಇದೆ. ಆದರೆ ಪದೇ ಪದೇ ತಿಳಿದು ತಪ್ಪು ಮಾಡುವವರನ್ನು ಜನರು ಕ್ಷಮಿಸುವುದಿಲ್ಲ. ಹರ್ಯಾಣದ ಜನರು ಅಪಾರವಾದ ದೈವ ಭಕ್ತರು, ಇಂತಹ ಆರೋಪ ಹರ್ಯಾಣದ ಜನರು ಮಾತ್ರವಲ್ಲ, ದೇಶದ ಜನರಿಗೆ ಮಾಡಿದ ಅಪಮಾನವಾಗಿದೆ" ಎಂದು ಮೋದಿ ಹೇಳಿದರು.
"ಕುಡಿಯಲು ನೀರು ಕೊಡುವುದು ಉತ್ತಮ ಸಂಸ್ಕೃತಿ ಎಂದು ಜನರು ನಂಬಿದ್ದಾರೆ. ಸೋಲುವ ಭೀತಿಯಲ್ಲಿ ಏನೇನೋ ಹೇಳುತ್ತಿದ್ದಾರೆ. ನನಗೆ ನಂಬಿಕೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕಪಾಠ ಕಲಿಸುತ್ತಾರೆ. ಯಮುನಾ ಶುದ್ಧಗೊಳಿಸುತ್ತೇವೆ ಎಂದು ಭರವಸೆ ನೀಡಿ ಮತಗಳನ್ನು ಪಡೆದ ಎಎಪಿ ಮಾಡಿರುವುದು ಏನು?" ಎಂದು ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
"ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲು ಒಂದು ಅವಕಾಶ ಕೊಡಿ, ಏಕ್ ಬಾರ್ ಕಮಲ್ ಕೋ ದೇಖ್ ಲೀಜಿಯೇ. ಎಎಪಿ, ಕಾಂಗ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಆಡಳಿತ ನಡೆಸಿದರು. ಏನೂ ಬದಲಾವಣೆ ಆಗಿಲ್ಲ" ಎಂದು ಮೋದಿ ಆರೋಪಿಸಿದರು.
2025ರ ದೆಹಲಿ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ 3ನೇ ಬಾರಿಗೆ ಅಧಿಕಾರ ಹಿಡಿಯಬೇಕು ಎಂದು ಎಎಪಿ ತಂತ್ರ ರೂಪಿಸಿದೆ. ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎಎಪಿಗೆ ನೇರ ಎದುರಾಳಿಗಳು. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಸಹ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳದೇ ಎಎಪಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ.












Click it and Unblock the Notifications