ಪಂಜಾಬ್: ಒಂದೇ ರಾಜ್ಯಕ್ಕೆ ಎಎಪಿಯಿಂದ ನಾಲ್ಕು ಪ್ರಣಾಳಿಕೆ!
ಪಂಜಾಬಿನಲ್ಲಿ ಅಧಿಕಾರಕ್ಕೇರುವ ಹವಣಿಕೆಯಲ್ಲಿರುವ ಎಎಪಿ ನಾಲ್ಕು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ. ರೈತರು, ವ್ಯಾಪಾರಿಗಳು, ಯುವ ಜನತೆ ಮತ್ತು ದಲಿತರಿಗಾಗಿ ಬೇರೆ ಬೇರೆ ಪ್ರಣಾಳಿಕೆಗಳನ್ನು ಆಮ್ ಆದ್ಮಿ ಪಕ್ಷ ನೀಡಿದೆ.
ಚಂಡೀಗಢ, ಜನವರಿ 27: ಹೇಗಾದರು ಮಾಡಿ ಪಂಜಾಬಿನಲ್ಲಿ ಅಧಿಕಾರಕ್ಕೇರಬೇಕು ಎಂದು ಹವಣಿಸುತ್ತಿರುವ ಎಎಪಿ ಏಕಕಾಲಕ್ಕೆ ನಾಲ್ಕು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ಸುದ್ದಿಯಲ್ಲಿದೆ. ರಾಜ್ಯದಲ್ಲಿ ರೈತರು, ಯುವಜನರು, ದಲಿತರು ಮತ್ತು ವ್ಯಾಪಾರಿಗಳಿಗೆ ಬೇರೆ ಬೇರೆ ಪ್ರಣಾಳಿಕೆಗಳನ್ನು ಅದು ಮುಂದಿಟ್ಟಿದೆ.[ಪಂಜಾಬ್: ಕಾಂಗ್ರೆಸಿನಲ್ಲಿ ಸಿದ್ದು-ಅಮರಿಂದರ್ ಜಟಾಪಟಿ]
ಪಂಚರಾಜ್ಯಗಳಲ್ಲಿ ಎಎಪಿ ಅಧಿಕಾರಕ್ಕೇರುವ ಎಲ್ಲಾ ಸಾಧ್ಯತೆಗಳಿರುವ ರಾಜ್ಯ ಪಂಜಾಬ್. ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬರಬೇಕು ಎನ್ನುವುದು ಅರವಿಂದ್ ಕೇಜ್ರಿವಾಲ್ ಕನಸು. ಕಳೆದ 15 ವರ್ಷಗಳಿಂದ ಅಕಾಲಿದಳ-ಬಿಜೆಪಿ ಮತ್ರಿ ಕೂಟ ಅಧಿಕಾರದಲ್ಲಿರುವ ಪಂಜಾಬಿನಲ್ಲಿ ಅಧಿಕಾರಕ್ಕೇರಲು ಎಎಪಿ ಭಿನ್ನ ರಾಜಕೀಯ ಸಮೀಕರಣದ ಮೂಲಕ ಹೊರಟಿದೆ. ಅದು ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯಲ್ಲೂ ವ್ಯಕ್ತವಾಗಿದೆ.[ಪಂಜಾಬ್: ಮನೆಗೊಂದು ನೌಕರಿ, ಬಿಜೆಪಿ ಪ್ರಣಾಳಿಕೆಯ ಹೈಲೈಟ್]

ದಲಿತರಿಗೇನು?
ರಾಜ್ಯದ ಪ್ರಮುಖ ಮತದಾರರಾದ ದಲಿತರಿಗೆ ಎಎಪಿ ಹಲವು ಭರವಸೆಗಳನ್ನು ನೀಡಿದೆ. ಎಲ್ಲಾ ದಲಿತರಿಗೆ ಮನೆ ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ. ಗ್ರಾಮೀಣ ಭಾಗದಲ್ಲಿ ದಲಿತರಿಗಾಗಿ ಮೀಸಲಾಗಿಟ್ಟ ಭೂಮಿಯನ್ನು ಶ್ರೀಮಂತರಿಗೆ ಮಾರಾಟವಾಗುವುದನ್ನು ತಡೆಯುವುದು, ಕಳೆದ 5 ವರ್ಷಗಳಲ್ಲಿ ದಾಖಲಾಗಿರುವ ಜಾತಿ ನಿಂದನೆ ಮತ್ತು ಸುಳ್ಳು ಕೇಸುಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದು ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಲಾಗಿವೆ. ದಲಿತರಿಗೆ ಸಣ್ಣ ಉದ್ದಿಮೆ ಆರಂಭಿಸಲು ಎರಡು ಲಕ್ಷದವರೆಗೆ ಸಾಲ ನೀಡುವುದಾಗಿಯೂ ಎಎಪಿ ಹೇಳಿದೆ.

ರೈತರಿಗೆ ಏನಿದೆ?
ಡಿಸೆಂಬರ್ 2017ರ ಅಂತ್ಯಕ್ಕೆ ರೈತರ ಎಲ್ಲಾ ಸಾಲ ಮನ್ನಾ. ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಾಶವಾದರೆ ಎಕರೆಗೆ 20,000 ರೂಪಾಯಿ ಪರಿಹಾರ. ಕೆಲಸ ಕಳೆದುಕೊಳ್ಳುವ ಕೃಷಿ ಕಾರ್ಮಿಕರಿಗೆ ತಿಂಗಳಿಗೆ 10,000 ರೂಪಾಯಿ ಭತ್ಯೆ. 12 ಗಂಟೆಗಳ ವಿದ್ಯುತ್ ಮತ್ತು ಉಚಿತ ಆರೋಗ್ಯ ಸೇವೆಗಳನ್ನು ನೀಡುವುದಾಗಿ ಎಎಪಿ ಹೇಳಿದೆ.
ಜತೆಗೆ ಅಕಾಲಿ ದಳದ ಕೃಷಿ ಮಂತ್ರಿ ತೋಟಾ ಸಿಂಗ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಆದೇಶ್ ಪ್ರತಾಪ್ ಸಿಂಗ್ರನ್ನು ಜೈಲಿಗಟ್ಟುವುದಾಗಿಯೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 5 ಲಕ್ಷ ಪರಿಹಾರ ಮತ್ತು ಮನೆಯ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಭರವಸೆ ನೀಡಿದೆ.

ಕೈಗಾರಿಕೆ, ಸಾರಿಗೆ, ವ್ಯಾಪಾರಿಗಳ ಪ್ರಣಾಳಿಕೆ
ಭ್ರಷ್ಟಾಚಾರ ಮುಕ್ತ ವ್ಯಾಪಾರ, ಸಾರಿಗೆ, ಮತ್ತು ಕೈಗಾರಿಕೆ ಪಕ್ಷದ ಮೊದಲ ಆಯ್ಕೆ ಎಂದು ಎಎಪಿ ಹೇಳಿದೆ. ಸುಲಭ ತೆರಿಗೆ, ವ್ಯಾಟ್ ಇಳಿಕೆ, ಏಕಗವಾಕ್ಷಿ ಯೋಜನೆಯಲ್ಲಿ ಲೈಸನ್ಸ್ ಗಳ ವಿತರಣೆ ಮತ್ತು ನವೀಕರಣ. ದೆಹಲಿಯಂತೆ ವಿದ್ಯುತ್ ದರ ಇಳಿಕೆ, ಹೊಸ ಟೌನ್ ಶಿಪ್ ನಿರ್ಮಾಣ, ಗೂಂಡಾ ತೆರಿಗೆ ನಿವಾರಣೆ, ಶೇಕಡಾ 80 ಪಂಜಾಬಿಗರಿರುವ ಕೃಷಿ ಘಟಕಗಳಿಗೆ ಬಡ್ಡಿ ರಹಿತ ಸಾಲ ಹೀಗೆ ಹತ್ತು ಹಲವು ಕೊಡುಗೆಗಳನ್ನು ನೀಡುವುದಾಗಿ ಎಎಪಿ ಭರವಸೆ ನೀಡಿದೆ.
ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸಲಾಗುವುದು, ರಿಯಲ್ ಎಸ್ಟೇಟ್ ವಲಯದ ಪುನರುಜ್ಜೀವನ, ವಿದೇಶಿ ನೇರ ಹೂಡಿಕೆಯಿಂದ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಟೇಲುಗಳಿಗೆ ಪ್ರೋತ್ಸಾಹ , ವಿವಿಧ ಜಿಲ್ಲೆಗಳಲ್ಲಿ ವ್ಯಾಪಾರ ಉತ್ತೇಜನಕ್ಕೆ ಪ್ರದರ್ಶನ ಸಭಾಂಗಣಗಳನ್ನು ನಿರ್ಮಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಯುವ ಜನತೆ ಸೆಳೆಯುವ ಯತ್ನ
ಎಲ್ಲಾ ಪ್ರಣಾಳಿಕೆಗಳಿಗಿಂತ ಹೆಚ್ಚು ಗಮನ ಸೆಳೆಯುವುದು ಯುವಕರ ಪ್ರಣಾಳಿಕೆ. ರಾಜ್ಯದಲ್ಲಿ ಯುವಕರೇ ಹೆಚ್ಚಿನ ಮತದಾರರಾಗಿದ್ದು, ಎಎಪಿ ಯುವಕರತ್ತಲೇ ಹೆಚ್ಚು ದೃಷ್ಟಿ ನೆಟ್ಟಿದೆ ಎಂಬುದು ಪ್ರಣಾಳಿಕೆಗಳಿಂದ ತಿಳಿದು ಬರುತ್ತದೆ. ಮಾದಕ ದ್ರವ್ಯ ವಿರೋಧಿ ಅಭಿಯಾನ, ಕ್ರೀಡೆ, ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಎಎಪಿ ಹೇಳಿದೆ.

ನಿರೋದ್ಯಗ ನಿವಾರಣೆಗೆ ಪಣ
ರಾಜ್ಯದಲ್ಲಿ 25 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು, ತಂತ್ರಜ್ಞಾನ ಬಳಸಿ ಭ್ರಷ್ಟಾಚಾರ ನಿಲ್ಲಿಸಲಾಗುವುದು, ರಾಜ್ಯದಾದ್ಯಂತ ಫ್ರೀ ವೈ-ಫೈ ಕೇಂದ್ರಗಳನ್ನು ತೆರೆಯಲಾಗುವುದು, ತಿಂಗಳೊಳಗೆ ಡ್ರಗ್ ಸರಬರಾಜು ಜಾಲವನ್ನೇ ಕಡಿದು ಹಾಕಲಾಗುವುದು ಎಂದು ಎಎಪಿ ಘಂಟಾಘೋಷವಾಗಿ ಹೇಳಿದೆ.
ಖಾಸಗಿ ಶಾಲೆ, ಕಾಲೇಜುಗಳಲ್ಲಿ ಶುಲ್ಕ ಏರಿಕೆ ತಡೆಯುತ್ತೇವೆ, 10 ಲಕ್ಷದವರೆಗೆ ಶೈಕ್ಷಣಿಕ ಸಾಲ ನೀಡುತ್ತೇವೆ, ಸರಕಾರಿ ನೌಕರಿಗಳ ಅರ್ಜಿಗೆ ಶುಲ್ಕ ತೆಗೆದು ಹಾಕುತ್ತೇವೆ, 'ಪಂಜಾಬ್ ಒಲಂಪಿಕ್ ಮಿಷನ್' ಆರಂಭಿಸುತ್ತೇವೆ ಎಂದು ಹೇಳಿದೆ ಎಎಪಿ ಹೇಳಿದೆ. ತನ್ನ ವಿಭಿನ್ನ ಪ್ರಣಾಳಿಕೆಯ ಮೂಲಕ ಯುವಜನರನ್ನು ಸೆಳೆಯಬಹುದು ಎಂದು ಎಎಪಿ ಅಂದುಕೊಂಡಿದೆ.
(ಚಿತ್ರ ಕೃಪೆ: ಪಿಟಿಐ, ಅರವಿಂದ್ ಕೇಜ್ರಿವಾಲ್ ಎಫ್ಬಿ)












Click it and Unblock the Notifications