ಆಮ್ ಆದ್ಮಿ ಅರವಿಂದ್ ಕೇಜ್ರಿವಾಲ್ ಸರ್ವಾಧಿಕಾರಿ ಅಧಿಕಾರದಾಹಿ

ಹಿಂದಿನ ಸುದ್ದಿ: ಆಮ್ ಆದ್ಮಿ ಪಕ್ಷ ಮತ್ತು ಅದರ ನೇತಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಕ್ಷದೊಳಗಿಂದಲೇ ದಿನೇ ದಿನೆ ಆಕ್ರೋಶ ತೀವ್ರವಾಗುತ್ತಿದೆ. ದೆಹಲಿಯ ಲಕ್ಷ್ಮಿ ನಗರ ಕ್ಷೇತ್ರದ AAP ಶಾಸಕ ವಿನೋದ್ ಕುಮಾರ್ ಬಿನ್ನಿ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ, ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ದಿಲ್ಲಿ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಜಾಡಿಸಿದ್ದಾರೆ.
ಈ ಮಧ್ಯೆ, ಎಎಪಿಗೆ ಹೊಸದಾಗಿ ಸೇರಿರುವ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರು ಸಹ ಕೇಜ್ರಿವಾಲಾರ ವಿರುದ್ಧ ಗುಡುಗಿದ್ದಾರೆ. ದೆಹಲಿಯ ರೀಟೇಲ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ನಿಷೇಧಿಸಿರುವುದಕ್ಕೆ ಕೆಂಡಕಾರಿದ್ದಾರೆ. (Foreign Direct Investment in retail sector)
ಅರವಿಂದ್ ಕೇಜ್ರಿವಾಲಾರ ನಿಜ ಬಣ್ಣವನ್ನು ಸುದ್ದಿಗೋಷ್ಠಿಯಲ್ಲಿ ಬಯಲು ಮಾಡುವುದಾಗಿ ಪಕ್ಷ ಅಧಿಕಾರಕ್ಕೆ ಬಂದ ದಿನವೇ ಹೇಳಿದ್ದ ಎಎಪಿ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರನ್ನು ಪಕ್ಷದ ನಾಯಕರು ಆ ತಕ್ಷಣಕ್ಕೆ ಅವರನ್ನು ತಡೆಹಿಡಿದಿದ್ದರಾದರೂ ಇದೀಗ ಶಾಸಕ ಬಿನ್ನಿ, ಕೇಜ್ರಿವಾಲಾರ ನಿಯಂತ್ರಣಕ್ಕೆ ಒಳಪಡದೆ ಪಕ್ಷದ ವಿರುದ್ಧ ಮತ್ತು ಕೇಜ್ರಿವಾಲಾರ ಅಧಿಕಾರ ದಾಹವನ್ನು ಸುದ್ದಿಗೋಷ್ಠಿಯಲ್ಲಿ ಸಾರಾಸಗಟಾಗಿ ಬಹಿರಂಗಪಡಿಸಿದ್ದಾರೆ.
ಕೇಜ್ರಿವಾಲ್ ವಿರುದ್ಧ ಬಿನ್ನಿ ಮಾಡಿರುವ ಗಂಭೀರ ಆರೋಪಗಳು ಹೀಗಿವೆ:
* ಮುಖ್ಯಮಂತ್ರಿ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿ ಮನಸ್ಥಿತಿಯವರು.
* ಚುನಾವಣೆಗೆ ಮುನ್ನ ಪಕ್ಷ ಹೇಳಿದ್ದಕ್ಕೂ ಈಗ ಮಾಡುತ್ತಿರುವುದಕ್ಕೂ ಅಜಗಜಾಂತರವಿದೆ.
* ಮುಖ್ಯಮಂತ್ರಿ ಕೇಜ್ರಿವಾಲ್ ದಿಲ್ಲಿ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ.
* AAP ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿಫಲರಾಗಿದ್ದಾರೆ.
* AAP ಚುನಾವಣಾ ಪ್ರಣಾಳಿಕೆಯನ್ನು ಚೆಂದದ ಶಬ್ದಗಳಿಂದ/ ಅತಿ ಬುದ್ಧಿವಂತಿಕೆಯಿಂದ ಪೋಣಿಸಲಾಗಿತ್ತು.
* AAP ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕಾಪಾಡುವಲ್ಲಿ ವಿಫಲವಾಗಿದೆ.
* AAP ತನ್ನ ಉದ್ದೇಶ/ ಗುರಿಗಳಿಂದ ವಿಮುಖವಾಗುತ್ತಿದೆ.
ಆದರೆ ಇದನ್ನೆಲ್ಲಾ ಅಲ್ಲಗಳೆದಿರುವ ಮುಖ್ಯಮಂತ್ರಿ ಕೇಜ್ರಿವಾಲ್, ನಿನ್ನೆ ಬುಧವಾರ ಸಂಜೆ ಎಲ್ಲಾ ಶಾಸಕರ ಜತೆ ಸಭೆ ನಡೆಸಿದ್ದೇನೆ. ಆಗ ಬಿನ್ನಿ ಮೌನವಾಗಿದ್ದರು. ಆಗೇಕೆ ಅವರು ಬಾಯ್ಬಿಟ್ಟಿರಲಿಲ್ಲ?. ಅಷ್ಟೇ ಬಿನ್ನಿ ನನ್ನ ಮನೆಗೂ ಬಂದಿದ್ದರು. ಲೋಕಸಭಾ ಟಿಕೆಟ್ ನೀಡುವಂತೆ ಕೋರಿದರು' ಎಂದು ಬಿನ್ನಿ ವಿರುದ್ಧ ಕಿಡಿಕಾರಿದ್ದಾರೆ.











Click it and Unblock the Notifications