ನೆಮ್ಮದಿ ಹಾಳುಗೆಡಹುವ ಚಲನಚಿತ್ರ ಯಾರಿಗೆ ಬೇಕು?
ಕೆಲವೊಂದು ಸಿನಿಮಾ ನಿರ್ದೇಶಕರದ್ದು ಸಿಂಪಲ್ ಲೆಕ್ಕಾಚಾರವಿರುತ್ತೆ. ಚಿತ್ರ ಬಿಡುಗಡೆಗೆ ಮುನ್ನ ಅಥವಾ ಚಿತ್ರದಲ್ಲಿ ಯಾವುದಾದರೂ ಜಾತಿಯ, ಕೋಮಿನ ಬಗ್ಗೆ ವಿವಾದಕಾರಿ ಸನ್ನಿವೇಶಗಳನ್ನು ಹುಟ್ಟು ಹಾಕಿ ಪುಕ್ಸಟೆ ಪಬ್ಲಿಸಿಟಿ ಪಡೆದುಕೊಳ್ಳುವುದು.
ಇಂತಹ ಕೆಲವು ನಿರ್ದೇಶಕರು ಕಂಡುಕೊಂಡ ಈ ರೀತಿಯ ಮನೆಹಾಳು ಫಾರ್ಮುಲಾಗೆ ಕನ್ನಡ ಚಿತ್ರೋದ್ಯಮವೇನೂ ಹೊರತಾಗಿಲ್ಲ. ಜೋಗಿ ಪ್ರೇಮ್ ಅವರದ್ದು ಒಂದು ರೀತಿಯ ಗಿಮಿಕ್ ಆದರೆ, ಕೆಲವರದ್ದು ಜಾತಿ, ಕೋಮಿನ ಹೆಸರಿನಲ್ಲಿ ಅವಹೇಳನಕಾರಿಯಾಗಿ ಚಿತ್ರೀಕರಿಸಿ ಲಾಭ ಮಾಡಿಕೊಳ್ಳುವುದು.
ಅವಹೇಳನಕ್ಕೊಳಗಾಗುವ ಕೋಮಿನವರ ಪ್ರತಿಭಟನೆ ಹತೋಟಿಗೆ ಬರದೇ, ಚಿತ್ರ ಪ್ರದರ್ಶನ ನಿಲ್ಲಿಸುವಂತಹ ಸ್ಥಿತಿಗೆ ಬಂದಾಗ ನಿರ್ಮಾಪಕ ತಾನು ಹಾಕಿದ ಬಂಡವಾಳ ವಾಪಸ್ ಪಡೆದಿರುತ್ತಾನೆ ಮತ್ತು ಹಂಚಿಕೆದಾರ ಕೂಡಾ ಸೇಫ್ ಆಗಿರುತ್ತಾನೆ. ಇದು ವಸ್ತುಸ್ಥಿತಿ. (ಉಪೇಂದ್ರ ಚಿತ್ರಕ್ಕೆ ಹೊಸ ಟೈಟಲ್)
ಇದುವರೆಗೆ ಬಂದ ಈ ರೀತಿಯ ಚಿತ್ರಗಳನ್ನು ಅವಲೋಕಿಸಿದರೆ ಬಹಳಷ್ಟು ಬಾರಿ ಅಪಹಾಸ್ಯಕ್ಕೆ ಗುರಿಯಾಗಿರುವುದು ಬಹುಸಂಖ್ಯಾತ ಸಮುದಾಯವೇ. ಈ ವಿಚಾರದಲ್ಲಿ ಎಲ್ಲೋ ಕೆಲವೊಂದು ಅಪವಾದ ಬಿಟ್ಟರೆ ಹಿಂದೂ ಸಮಾಜದ ನಂಬಿಕೆ, ಧಾರ್ಮಿಕ ಪದ್ದತಿಯ ಬಗ್ಗೆ ಚಿತ್ರೋದ್ಯಮ ಆಟವಾಡುತ್ತಲೇ ಬಂದಿದೆ.

ಶುಕ್ರವಾರ (ಜ 2) ಬಿಡುಗಡೆಯಾದ ಉಪೇಂದ್ರ ಅಭಿನಯದ 'ಶಿವಂ' ಚಿತ್ರ ಟೈಟಲ್ ವಿಚಾರದಲ್ಲಿ ಎಷ್ಟು ವಿವಾದ ಹುಟ್ಟು ಹಾಕಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಟೈಟಲ್ ವಿವಾದದಿಂದಲೇ ಎಷ್ಟು ಪಬ್ಲಿಸಿಟಿ ಪಡೆಯಿತು ಎನ್ನುವುದೂ ಎಲ್ಲರಿಗೆ ಗೊತ್ತು.
ಬಸವಣ್ಣ, ಬ್ರಾಹ್ಮಣ ಎಂದು ಹೆಸರಿಡಲು ಮುಂದಾಗಿದ್ದ ನಿರ್ದೇಶಕ ಶ್ರೀನಿವಾಸ ರಾಜು ಅವರಿಗೆ ಬೇರೆ ಕೋಮಿನ ಹೆಸರನ್ನು ಇಟ್ಟು ಚಿತ್ರ ಬಿಡುಗಡೆ ಮಾಡಲು ಧೈರ್ಯವಿರಲಿಲ್ಲವೇ ಎನ್ನುವುದು ಹಲವರ ಪ್ರಶ್ನೆಯಾಗಿತ್ತು ಕೂಡಾ.
ವಿಚಾರಕ್ಕೆ ಬರುವುದಾದರೆ, ಚಿತ್ರವೊಂದು ಜಾತಿ, ಧರ್ಮದ ವಿಚಾರದಲ್ಲಿ ಸುದ್ದಿಯಾದ ಸಂದರ್ಭದಲ್ಲಿ, ಅಂತಹ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವರಲ್ಲಿ ನಮ್ಮ ರಾಜಕಾರಣಿಗಳು ನಿಸ್ಸೀಮರು. ಜಾತಿ ಓಲೈಕೆ ಎನ್ನುವುದನ್ನು ಎಲ್ಲಿ ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ನಮ್ಮ ರಾಜಕಾರಣಿಗಳಿಂದ ಕಲಿಯಬೇಕು.
ಶಿವಂ ಚಿತ್ರದ ಹಾಗೇ ವಿವಾದಕ್ಕೊಳಗಾದ ಇನ್ನೊಂದು ಚಿತ್ರ ಅಮೀರ್ ಖಾನ್ ಅಭಿನಯದ, ರಾಜಕುಮಾರ್ ಹಿರಾನಿ ನಿರ್ದೇಶನದ 'ಪಿಕೆ'. ಹಿಂದೂ ದೇವತೆಗಳನ್ನು ಚಿತ್ರದಲ್ಲಿ ಅವಹೇಳನಕಾರಿಯಾಗಿ ಚಿತ್ರೀಸಲಾಗಿದೆ. ಅಂತಹ ದೃಶ್ಯಗಳಿಗೆ ಕತ್ತರಿ ಹಾಕಿ ಇಲ್ಲವೇ ಚಿತ್ರ ಪ್ರದರ್ಶನ ನಿಷೇಧಿಸಿ ಎನ್ನುವುದು ವಿವಿಧ ಹಿಂದೂಪರ ಸಂಘಟನೆಗಳ ಆಗ್ರಹ. (ಪಿಕೆ ಚಿತ್ರ ವಿಮರ್ಶೆ)
ಚಿತ್ರದಲ್ಲಿ ಕತ್ತರಿ ಪ್ರಯೋಗಿಸ ಬೇಕಾದ ಯಾವುದೇ ದೃಶ್ಯಗಳು ಕಂಡು ಬರುತ್ತಿಲ್ಲ ಎಂದು ಸೆನ್ಸಾರ್ ಮಂಡಳಿ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಸೊಪ್ಪು ಹಾಕಲಿಲ್ಲ. ಹಾಗಾಗಿ ಪ್ರತಿಭಟನೆ ಮುಂದುವರಿಯುತ್ತಲೇ ಇದೆ. ಚಿತ್ರಕ್ಕೆ ಇನ್ನೂ ಪ್ರಚಾರ ಸಿಗುತ್ತಿದೆ, ಭರ್ಜರಿ ಕಲೆಕ್ಸನಿಗೂ ಮೋಸವಿಲ್ಲ.
ಸೆನ್ಸಾರ್ ಮಂಡಳಿಯ ಹಾಲಿ ಅಧ್ಯಕ್ಷೆಯಾಗಿರುವ ಲೀಲಾ ಸಾಮ್ಸನ್ ಹಿಂದೆ ಪ್ರಿಯಾಂಕಾ ಗಾಂಧಿಗೆ ಡ್ಯಾನ್ಸ್ ಟೀಚರ್ ಆಗಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ತಪಸ್ಸಿಗೆ ಕುಳಿತ ಭಕ್ತನಿಗೆ ದರ್ಶನ ನೀಡಿ ದೇವರು ಮಾಯವಾಗುವ ಸನ್ನಿವೇಶಗಳಿರುವ ಹಲವು ಚಿತ್ರಗಳನ್ನು ನಾವು ನೋಡಿರುತ್ತೇವೆ. ಜಾತಿ, ಕೋಮಿನಂತಹ ಸೂಕ್ಷ್ಮ ವಿಚಾರಗಳ ಚಿತ್ರ ತೆರೆಗೆ ಬಂದಾಗ ಅದನ್ನು ಸ್ವೀಕರಿಸುವುದು ಅಥವಾ ನಿರಾಕರಿಸುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಆದರೆ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಮಾತ್ರ ಖಂಡನೀಯ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಿಕೆ ಚಿತ್ರದ ವಿವಾದವನ್ನೇ ಲಾಭವಾಗಿ ಬಳಸಿಕೊಂಡು ಚಿತ್ರಕ್ಕೆ ಸಂಪೂರ್ಣ ತೆರಿಗೆ ವಿನಾಯತಿ ಘೋಷಿಸಿದ್ದಾರೆ.
ಚಿತ್ರದ ಪೈರಸಿಯನ್ನು ಡೌನ್ ಲೋಡ್ ಮಾಡಿಕೊಂಡು ಚಿತ್ರ ವೀಕ್ಷಿಸಿ, ಇದೊಂದು ಸಾಮಾಜಿಕ ಕಳಕಳಿ ಬೀರುವ ಚಿತ್ರ ಎಂದು ಅಖಿಲೇಶ್ ಚಿತ್ರಕ್ಕೆ ಮನೋರಂಜನಾ ತೆರಿಗೆ ವಿನಾಯತಿ ಘೋಷಿಸಿದ್ದಾರೆ. (ಪಿಕೆ ಬೆಂಬಲಕ್ಕೆ ಅಖಿಲೇಶ್ ಯಾದವ್)

ಒಂದೆಡೆ ಪೈರಸಿ ನೋಡಿ ಎಡವಟ್ಟು ಮಾಡಿಕೊಂಡ ಅಖಿಲೇಶ್ 'ಪಿಕೆ' ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಿಸಿದ್ದು ಒಂದು ಕೋಮಿನವರನ್ನು ಓಲೈಸಲು ಮಾಡಿದಂತಹ ಕ್ರಮ ಎನ್ನುವುದು ಯಾರಿಗಾದರೂ ತಿಳಿಯದೇ ಇರದು. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ ಎನ್ನೋ ಕಾರಣಕ್ಕಾಗಿಯೋ ಏನೋ ಬಿಹಾರದಲ್ಲೂ ಪಿಕೆ ಚಿತ್ರಕ್ಕೆ ತೆರಿಗೆ ವಿನಾಯತಿ ಸಿಕ್ಕಿದೆ.
ಸುಮಾರು ಎರಡು ವರ್ಷದ ಹಿಂದಿನ ಮಾತು, ಬಹುಭಾಷಾ ನಟ ಕಮಲ್ ಹಾಸನ್ ಅವರ ವಿಶ್ವರೂಪಂ ಚಿತ್ರ ತೆರೆಗೆ ಬಂತು. ಮುಸ್ಲಿಂ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಈ ಚಿತ್ರ ಪ್ರದರ್ಶನವನ್ನೇ ನಿಷೇಧಿಸಿತ್ತು. ಅದಾದ ನಂತರ ಮದ್ರಾಸ್ ಹೈಕೋರ್ಟ್ ನಿಷೇಧವನ್ನು ತೆರವುಗೊಳಿಸಿತು, ಅನ್ನೋದು ಬೇರೆ ಮಾತು. (ವಿಶ್ವರೂಪಂ ವಿರುದ್ಧ ಚಿತ್ರಪ್ರೇಮಿಗಳ ವಿಶ್ವರೂಪ)
ವಿಶ್ವರೂಪಂ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸದೇ ಇದ್ದರೆ ತಾವು ಬೇರಾವುದಾದರೂ 'ಜಾತ್ಯತೀತ' ರಾಜ್ಯಕ್ಕೆ ಹೋಗ ಬೇಕಾಗಬಹುದು, ಅದು ದೇಶದಿಂದ ಹೊರಗಿದ್ದರೂ ಇರಬಹುದು ಎಂದು ಕಮಲ್ ನೋವಿನಿಂದ ಆಡಿದ್ದ ಮಾತನ್ನೂ ಮರೆಯಲಾಗುವುದಿಲ್ಲ.
ಅಂದು ವಿಶ್ವರೂಪಂ ಚಿತ್ರದ ವಿರುದ್ದ ಹರಿಹಾಯ್ದಿದ್ದ ಜಾತ್ಯತೀತ ಮಖವಾಡ ಹಾಕಿಕೊಂಡಿರುವ ರಾಜಕೀಯ ನಾಯಕರುಗಳು ಇಂದು ಪಿಕೆ ಚಿತ್ರದ ಬಗ್ಗೆ ಮೃದುಧೋರಣೆ ತಾಳಿರುವ ಹಿಂದಿನ ರಾಜಕೀಯವೇನು? ವೋಟ್ ಬ್ಯಾಂಕ್?
ನೆಮ್ಮದಿ ಹಾಳುಗೆಡಹುವ ಚಲನಚಿತ್ರ ಯಾರಿಗೆ ಬೇಕು?












Click it and Unblock the Notifications