ಬಾಬ್ರಿ ಜಾರ್ಜ್ ಶೀಟ್ ಹಾಕಿದ ಮರುದಿನ ಅಯೋಧ್ಯೆಯಲ್ಲಿ ಯೋಗಿ
ಅಯೋಧ್ಯಾ, ಮೇ 31: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪುನರಾರಂಭ ಆದ ಒಂದು ದಿನದ ನಂತರ ಅಂದರೆ ಮೇ ಮೂವತ್ತೊಂದರ ಬುಧವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಯೋಗಿ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
ಮಂಗಳವಾರದಂದು ಯೋಗಿ ಆದಿತ್ಯನಾಥ್ ಬಿಜೆಪಿ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಮಾ ಭಾರತಿ ಅವರನ್ನು ಭೇಟಿಯಾಗಿದ್ದರು. ಈ ಮೂವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಮುಂದೆ ಹಾಜರಾಗಲು ಲಖನೌಗೆ ಬಂದಿದ್ದರು.[ಅಸಲಿಗೆ ಅಯೋಧ್ಯೆಯಲ್ಲಿ ಕರಸೇವಕರನ್ನು ಪ್ರಚೋದಿಸಿದ್ದು ಅಡ್ವಾಣಿಯಲ್ಲ, ನಾನು]
ಈ ಮೂವರು ಸೇರಿದಂತೆ ಒಂಬತ್ತು ಮಂದಿಯು ಪ್ರಕರಣದಿಂದ ತಮ್ಮ ಹೆಸರನ್ನು ಕೈ ಬಿಡಬೇಕು ಎಂದು ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಐಪಿಸಿ ಸೆಕ್ಷನ್ 120 (B) ಅಡಿಯಲ್ಲಿ ಇವರೆಲ್ಲರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಸಿಬಿಐ ಕೋರ್ಟ್ ಆದೇಶದ ವಿರುದ್ಧ ಎಲ್ಲ ಆರೋಪಿಗಳು ಅಲಹಾಬಾದ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಮಂಗಳವಾರ ಎಲ್ಲರಿಗೂ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿತ್ತು.