ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; 9 ಪ್ರವಾಸಿಗರ ಸಾವು
ಹಿಮಾಚಲ ಪ್ರದೇಶ, ಜುಲೈ 26: ಪ್ರವಾಸಿಗರು ತೆರಳುತ್ತಿದ್ದ ಟೆಂಪೊ ಟ್ರಾವೆಲರ್ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ಒಂಬತ್ತು ಪ್ರವಾಸಿಗರು ಸಾವನ್ನಪ್ಪಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಸ್ತೇರಿ ಬಳಿ ಸಂಭವಿಸಿದೆ.
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಕಿನ್ನೌರ್ನ ಸಾಂಗ್ಲಾ- ಚಿಟ್ಕುಲ್ ರಸ್ತೆಯ ಬಸ್ತೇರಿ ಬಳಿ ಭೂಕುಸಿತ ಸಂಭವಿಸಿತ್ತು. ಭೂಕುಸಿತದಿಂದ ಬಂಡೆಗಳು ಉರುಳಿದ್ದು, ಸೇತುವೆ ಕುಸಿದುಬಿದ್ದಿದೆ. ಪ್ರವಾಸಿಗರು ಚಿಟ್ಕುಲ್ನಿಂದ ಸಾಂಗ್ಲಾಕ್ಕೆ ಹೋಗುವ ವೇಳೆ ಬಂಡೆಗಳು ಉರುಳಿಬಿದ್ದು ಈ ಅನಾಹುತ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಮೃತಪಟ್ಟ ಎಲ್ಲಾ ಪ್ರವಾಸಿಗರ ಮೃತದೇಹಗಳು ದೊರೆತಿವೆ" ಎಂದು ಕಿನ್ನೌರ್ನ ಎಸ್ಪಿ ಸರ್ಜು ರಾಮ್ ರಾಣಾ ತಿಳಿಸಿದ್ದಾರೆ.
ಕಿನ್ನೌರ್ ಜಿಲ್ಲೆಯ ಈ ಪರ್ವತಗಳಲ್ಲಿ ಭಾರೀ ಮಳೆಯಿಂದಾಗಿ ಎರಡು ದಿನಗಳ ಹಿಂದೆ ಭೂಕುಸಿತ ಸಂಭವಿಸಿತ್ತು. ಬಸ್ತೇರಿಯಲ್ಲಿ ಸೇತುವೆ ಕುಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಹಾರಾಷ್ಟ್ರದಲ್ಲಿ ಭಾರೀ ಮಳೆ; 112 ಸಾವು, 99 ಜನರು ನಾಪತ್ತೆ
ಕಿನ್ನೌರ್ನಲ್ಲಿ ಭೂಕುಸಿತದಿಂದ ಜನರು ಸಾವನ್ನಪ್ಪಿರುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ. "ಈ ಘಟನೆಯಿಂದ ತೀವ್ರ ಬೇಸರವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.