8 ತಿಂಗಳ ಹಸುಗೂಸಿನ ಅತ್ಯಾಚಾರ, ಬರ್ಬರ ಕೊಲೆ : ಇಂಥವರಿಗೆ ಏನು ಶಿಕ್ಷೆ?
ಇಂದೋರ್, ಏಪ್ರಿಲ್ 21 : ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವ ದುರುಳರಿಗೆ ಮರಣದಂಡನೆ ವಿಧಿಸಬೇಕೆಂದು ಕೇಂದ್ರ ಸರಕಾರ 'ಚಿಂತನೆ' ನಡೆತ್ತಿರುವಾಗಲೇ, ಹೃದಯ ಬಿರಿಯುವ ಮತ್ತೊಂದು ಹೀನಾಯ ಘಟನೆ ಇಂದೋರ್ ನಲ್ಲಿ ಶುಕ್ರವಾರ ನಡೆದಿದೆ.
ಅಪ್ಪ ಅಮ್ಮನ ಪಕ್ಕದಲ್ಲಿ ನಿಶ್ಚಿಂತೆಯಿಂದ ಮಲಗಿದ್ದ ಕೇವಲ 8 ತಿಂಗಳ ಕಂದಮ್ಮನನ್ನು ಹೊತ್ತೊಯ್ದ ವಿಕೃತ ಕಾಮಿಯೊಬ್ಬ, ಅವರು ಮಲಗಿದ್ದ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿ ಅಂಗಡಿಯೊಂದರ ನೆಲಮಾಳಿಗೆಯಲ್ಲಿ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಬಲೂನು ಮಾರುವವರಾಗಿದ್ದ ಪಾಲಕರಿಗೆ ರಾಜವಾಡಾ ಕೋಟೆ ಬಳಿಯ ಬೀದಿಯೇ ಅರಮನೆ. ಅಲ್ಲಿಯೇ ಅವರ ವಾಸಸ್ಥಳ. ಅವರು ಅಲ್ಲಿ ಮಲಗಿದ್ದಾಗ ಅವರಿಗೆ ಪರಿಚಯವಿದ್ದ 21 ವರ್ಷದ ಯುವಕನೊಬ್ಬ ಮಗುವನ್ನು ಎತ್ತಿಕೊಂಡು ಹೋಗಿ ಇಂಥ ಹೀನ ಕೃತ್ಯ ಎಸಗಿದ್ದಾನೆ.

ಅಳುತ್ತಿದ್ದ ಮಗುವನ್ನು ಹೆಗಲ ಮೇಲೆ ಎತ್ತಿಕೊಂಡು ಯುವಕ ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರ ಬಾಯಿಮುಚ್ಚಿ ಎತ್ತಿಕೊಂಡು ಹೋದ ಯುವಕ, ತನ್ನ ಕೆಲಸ ಮುಗಿಸಿದ ಮೇಲೆ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮಗುವಿನ ಖಾಸಗಿ ಸ್ಥಳದಲ್ಲಿ ಮತ್ತು ತಲೆಯ ಮೇಲೆ ಗಾಯಗಳಾಗಿವೆ. ಬೆಳಗಿನ ಜಾವ 4.45ರ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ, ಮಧ್ಯಾಹ್ನದ ನಂತರವೇ ಅಂಗಡಿ ಮಾಲಿಕ ನೆಲಮಾಳಿಗೆಗೆ ಹೋದಾಗ ಕೊಲೆಯಾಗಿರುವುದು ಪತ್ತೆಯಾಗಿದೆ ಎಂದು ಪಿಟಿಐಗೆ ಉಪ ಪೊಲೀಸ್ ಮಹಾನಿರ್ದೇಶಕ ಎಚ್ ಸಿ ಮಿಶ್ರಾ ಅವರು ತಿಳಿಸಿದ್ದಾರೆ.
ಸಿಸಿಟಿವಿ ಫುಟೇಜನ್ನು ಪರಿಶೀಲಿಸಲಾಗುತ್ತಿದ್ದು, ಮಗು ಅಳುತ್ತಿದ್ದರಿಂದ ನೆಲಕ್ಕಿ ಮಗುವನ್ನು ಎತ್ತಿಹಾಕಿ ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗಡುಕನ ಪತ್ತೆಯಾಗಿದ್ದು, ಆತನನ್ನು ಸದ್ಯದಲ್ಲಿಯೇ ಬಂಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದಿರುವ ಅಪ್ತಾಪ್ತ ವಯಸ್ಕರ ಅತ್ಯಾಚಾರ ಮತ್ತು ಕೊಲೆಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದಿರುವ ಭೀಕರ ಹತ್ಯೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಂತರವೂ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಅಪ್ರಾಪ್ತರ ಮೇಲೆ ದೌರ್ಜನ್ಯ ನಡೆದಿದೆ.
ಉತ್ತರ ಪ್ರದೇಶದ ಈಟಾಹ್ ನಲ್ಲಿ ಮದುವೆಗೆಂದು ಹೋಗಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ. ಇದೇ ರೀತಿ ಛತ್ತೀಸಘಡದಲ್ಲಿ ಕೂಡ 10 ವರ್ಷದ ಬಾಲಕಿಯನ್ನು ಮದುವೆ ಮಂಟಪದಲ್ಲಿಯೇ ಕೊಲೆ ಮಾಡಲಾಗಿದೆ. ಇಂಥವರಿಗೆ ಏನು ಶಿಕ್ಷೆ ನೀಡಬೇಕು?












Click it and Unblock the Notifications