ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?
ನವದೆಹಲಿ, ಜನವರಿ 06: ಕೊವಿಶೀಲ್ಡ್, ಕೋವ್ಯಾಕ್ಸಿನ್ ಈ ಎರಡು ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ.
ಆದರೂ ಶೇ.69ರಷ್ಟು ಮಂದಿ ಲಸಿಕೆಯನ್ನು ಪಡೆಯಲು ಹಿಂಜರಿಯುತ್ತಿದ್ದಾರೆ ಎನ್ನುವ ವಿಷಯ ಸಮೀಕ್ಷೆ ಮೂಲಕ ತಿಳಿದುಬಂದಿದೆ.
ಕಳೆದ ವಾರ ಆಕ್ಸ್ಫರ್ಡ್-ಆಸ್ಟ್ರಾಜೆನೆಕಾ ಹಾಗೂ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್, ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ಸಿಕ್ಕಿತ್ತು.ಆದರೆ ಭಾರತದಲ್ಲಿ ಎಷ್ಟು ಮಂದಿ ಕೊರೊನಾ ಲಸಿಕೆಯನ್ನು ಪಡೆಯಲು ಮುಂದಾಗಿದ್ದಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಕೊರೊನಾ ಲಸಿಕೆ ಪಡೆಯಲು ಶೇ.9 ಮಂದಿ ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಕುರಿತು 8723 ಅಭಿಪ್ರಾಯಗಳು ಬಂದಿವೆ. ಅದರಲ್ಲಿ ಶೇ.26ರಷ್ಟು ಮಂದಿ ಮಾತ್ರ ಕೊರೊನಾ ಲಸಿಕೆ ಪಡೆಯಲು ಮುಂದಾಗಿದ್ದಾರೆ.

ಅಕ್ಟೋಬರ್ನಿಂದ ಅಭಿಪ್ರಾಯ ಸಂಗ್ರಹ
ಅಕ್ಟೋಬರ್ನಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಅಂದು ನಡೆಸಿದ ಸಮೀಕ್ಷೆಯಲ್ಲಿ ಶೇ.61ರಷ್ಟು ಮಂದಿ ಲಸಿಕೆಯನ್ನು ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿತ್ತು. ಫೈಜರ್ ಹಾಗೂ ಮಾಡೆರ್ನಾ ಲಸಿಕೆಯು ಉತ್ತಮ ಫಲಿತಾಂಶವನ್ನೇ ನೀಡಿತ್ತು. ಬಳಿಕ ನವೆಂಬರ್ ಸಮೀಕ್ಷೆಯಲ್ಲಿ ಶೇ.59ರಷ್ಟು ಮಂದಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದರು. ಇದೀಗ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ದೊರೆತ ಬಳಿಕ ಮಾಡಿದ ಸಮೀಕ್ಷೆಯಲ್ಲಿ ಶೇ.9ರಷ್ಟು ಮಂದಿ ಕೊರೊನಾ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಎರಡು ಲಸಿಕೆಗಳಿಗೆ ಯಾವ ರೀತಿಯ ಅನುಮತಿ ಸಿಕ್ಕಿದೆ?
ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆಗಳಿಗೆ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಿದೆ. ಯುಕೆ ಹಾಗೂ ಅಮೆರಿಕದಲ್ಲಿ ಫೈಜರ್, ಮಾಡೆರ್ನಾ ಹಾಗೂ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.
ಕಂಪನಿಯು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಮುಗಿಸದಿದ್ದರೂ ಕೂಡ ಲಸಿಕೆಗೆ ಅನುಮತಿ ನೀಡಲಾಗಿದೆ. ಕೊವಿಶೀಲ್ಡ್ ಲಸಿಕೆಯನ್ನು 23 ಸಾವಿರ ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗಿದೆ.
ಕೋವ್ಯಾಕ್ಸಿನ್ ರೂಪಾಂತರಿ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು ಎಂಬ ಉದ್ದೇಶದಿಂದ ಈ ಲಸಿಕೆಗೆ ಒಪ್ಪಿಗೆ ನೀಡಲಾಗಿದೆ. ಇದು ಒಂದು ಮತ್ತು ಎರಡನೇ ಹಂತದಲ್ಲಿ ಹೆಚ್ಚು ಪರಿಣಾಮಕಾರಿ ಎನ್ನುವ ಫಲಿತಾಂಶ ಬಂದಿದೆ.

ಜನರು ಲಸಿಕೆ ಪಡೆಯಲು ಹಿಂದೇಟು ಹಾಕಲು ಕಾರಣವೇನು?
ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾಗಬಹುದು, ಹಾಗೆಯೇ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಪ್ರಯೋಗ ನಡೆದಿಲ್ಲ ಅದಕ್ಕೂ ಮುನ್ನವೇ ಲಸಿಕೆಗೆ ಒಪ್ಪಿಗೆ ನೀಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿರುವುದು ಕೂಡ ಒಂದು ಕಾರಣವಾಗಿದೆ.

ಜನರ ಸಂದೇಹಗಳು, ಸರ್ಕಾರದ ಉತ್ತರ
ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಪ್ರಯೋಗಕ್ಕೂ ಮುನ್ನವೇ ಸರ್ಕಾರ ಈ ಲಸಿಕೆಗೆ ಅನುಮತಿ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಲಸಿಕೆ ಆಯ್ಕೆ ಪ್ರಕ್ರಿಯೆ ಬಗ್ಗೆ ವಿರೋಧಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಲ್ಲಿ ಆ ಲಸಿಕೆಯನ್ನು ಸೈನಿಕರಿಗೆ ಹೋಲಿಕೆ ಮಾಡಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ 23 ಸ್ವಯಂಸೇವಕರನ್ನು ತನ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಸೇರಿಸಿಕೊಂಡಿದೆ.
ಸ್ಥಳೀಯ ತಯಾರಕ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕ್ರೆಮ್ಲಿನ್ ಬೆಂಬಲಿತ ಸ್ಪುಟ್ನಿಕ್ ವಿ ಭಾರತದಲ್ಲಿ ಪ್ರಯೋಗಗಳಿಗೆ ಒಳಪಟ್ಟಿದೆ.
ಅಹಮದಾಬಾದ್ ಮೂಲದ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ ಕೂಡ ಸ್ಥಳೀಯ ಕೊವಿಡ್ 19 ಲಸಿಕೆ ಅಭಿವೃದ್ಧಿಪಡಿಸುವ ಸ್ಪರ್ಧೆಯಲ್ಲಿದೆ.












Click it and Unblock the Notifications