ಡಿ. 30ರ ಡೆಡ್ ಲೈನಿಗೆ ಐದೇ ದಿನ, ನಿಂತಿಲ್ಲ ಹಣಕ್ಕೆ ಹಾಹಾಕಾರ
ಬೆಂಗಳೂರು, ಡಿಸೆಂಬರ್ 26 : ನವೆಂಬರ್ 8ರಂದು ಸಂಜೆ ಎಳೆದಿರುವ ಉಲ್ಲಾಳ್ ಉಪನಗರದ ಕರ್ನಾಟಕ ಬ್ಯಾಂಕ್ ಎಟಿಎಂ ಶಟರ್ ಅನ್ನು ಇನ್ನೂ ಮೇಲಕ್ಕೆತ್ತಿಲ್ಲ. ಬೆಂಗಳೂರಿನಲ್ಲಿರುವ ಎಷ್ಟೋ ಬ್ಯಾಂಕ್ ಗಳು 'ನೋ ಕ್ಯಾಶ್' ಎಂಬ ಫಲಕವನ್ನು ಇನ್ನೂ ತೆಗೆದಿಲ್ಲ.
ಇವೆರಡೇ ನಿದರ್ಶನಗಳು ಸಾಕು ಬೆಂಗಳೂರಿನಂಥ ಮಹಾನಗರಿಯಲ್ಲಿ ಪರಿಸ್ಥಿತಿ ಹೇಗಿದೆಯೆಂದು ವಿವರಿಸಲು. ಇಂಥ ನಗರದಲ್ಲೇ ಈ ಪರಿಸ್ಥಿತಿಯಾದರೆ ಭಾರತದಾದ್ಯಂತ ಬ್ಯಾಂಕ್ ಸ್ಥಿತಿಗತಿಗಳು, ಗ್ರಾಹಕರ ಸೇವೆಗಳು ಹೇಗಿರಬಹುದೆಂದು ಕಲ್ಪನೆ ಮಾಡಿಕೊಳ್ಳಬಹುದು.
ಸೆಪ್ಟೆಂಬರ್ 8ರಂದು 500 ರುಪಾಯಿ ಮತ್ತು 1000 ರುಪಾಯಿ ಹಳೆ ನೋಟುಗಳನ್ನು ರದ್ದುಪಡಿಸಿ ಪ್ರಚಂಡ ನಿರ್ಧಾರವನ್ನು ನರೇಂದ್ರ ಮೋದಿ ಪ್ರಕಟಿಸಿದ ನಂತರ ಡಿಸೆಂಬರ್ 30ರ ಡೆಡ್ ಲೈನನ್ನು ತಾವೇ ಹಾಕಿಕೊಂಡಿದ್ದರು. ಈ ಡೆಡ್ ಲೈನ್ ಮುಗಿಯಲು ಕೇವಲ ಐದೇ ದಿನಗಳು ಬಾಕಿಯಿವೆ. [ಡಿಸೆಂಬರ್ 30ರ ನಂತರವೂ ವಿಥ್ ಡ್ರಾ ಮಿತಿ ಮುಂದುವರಿಕೆ?!]

ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ಭಾರೀ ಕುಳಗಳು ಕೋಟ್ಯಂತರ ನಗದು, ಚಿನ್ನದ ಒಡವೆ, ಬಂಗಾರದ ಬಿಸ್ಕತ್ತುಗಳ ಸಮೇತ ಸಿಕ್ಕಿಬಿದ್ದಿದ್ದಾರೆ. ಐಟಿ, ಇಡಿ ರೇಡುಗಳು ಕಾಳಧನಿಕರನ್ನು ಗಡಗಡ ನಡುಗಿಸಿವೆ, ಹವಾಲ ದಂಧೆ ಬಾಯಿಮುಚ್ಚಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾಶ್ಲೆಸ್ ವಹಿವಾಟುಗಳು ಸಾಕಷ್ಟು ಚಿಗಿತುಕೊಂಡಿವೆ. [ನೋಟು ನಿಷೇಧ ನಂತರದ 9 ಮಹತ್ವದ ಬದಲಾವಣೆಗಳು!]
ಆದರೆ, ಜನರಿಗೆ ಬ್ಯಾಂಕಿನಿಂದ ನಗದು ಸಿಗುತ್ತಿಲ್ಲ. ಜನ ಈಗಲೂ ಪರದಾಡುತ್ತಿದ್ದಾರೆ. ಈ ಬಗ್ಗೆ ಬ್ಯಾಂಕಲ್ಲಿ ವಿಚಾರಿಸಿದರೆ, ಬ್ಯಾಂಕ್ ಮ್ಯಾನೇಜರುಗಳಿಂದ ಅಸಡ್ಡೆಯ ಉತ್ತರಗಳು ಸಿಗುತ್ತಿವೆ. 500 ರುಪಾಯಿ ಹೊಸ ನೋಟುಗಳ ಮುದ್ರಣವನ್ನು ಮೂರು ಪಟ್ಟು ಹೆಚ್ಚಿಸಲಾಗುತ್ತಿದೆ ಎಂದು ಹೇಳಲಾಗಿದೆಯಾದರೂ ಅವು ಜನರ ಕೈಗೆ ಸಿಗುವುದು ಎಂದೋ?
ಈ ನಿಟ್ಟಿನಲ್ಲಿ ಅಪನಗದೀಕರಣದ ಲಾಭನಷ್ಟಗಳನ್ನು ಅಳೆಯಲು, ಮುಂದೆ ಆಗಬೇಕಾಗಿರುವುದೇನೆಂದು ಚರ್ಚಿಸಲು ಆರ್ಥಿಕತಜ್ಞರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಕರೆಯಲಿದ್ದಾರೆ. ಈ ಮಹತ್ವದ ಸಭೆಯನ್ನು ನೀತಿ ಆಯೋಗ ಆಯೋಜಿಸಿದೆ. [ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]
ಬ್ಯಾಂಕಿನಲ್ಲಿ ಹಣ ಹಿಂಪಡೆಯಲು ಇರುವ ಮಿತಿ ಡಿಸೆಂಬರ್ 30ರ ನಂತರವೂ ಮುಂದುವರಿಯಲಿದೆ ಎಂಬುದು ಕಳವಳಕರ ಸಂಗತಿ. ಇನ್ನು ಐವತ್ತೇ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದ ಮಾತು ಸುಳ್ಳಾಗಿದೆ. ಆ ಐವತ್ತು ದಿನಗಳ ಡೆಡ್ ಲೈನ್ ಡಿಸೆಂಬರ್ 30ಕ್ಕೆ ಮುಗಿಯಲಿದೆ.
ನಗದಿನ ಕೊರತೆಯಿಂದಾಗಿ ವಾರಕ್ಕೆ 24 ಸಾವಿರ ರುಪಾಯಿನಷ್ಟು ಕೂಡ ಗ್ರಾಹಕರಿಗೆ ಹಣ ನೀಡಲು ಹಲವಾರು ಬ್ಯಾಂಕ್ ಗಳಿಗೆ ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಗಳಿಗೆ ಹೆಚ್ಚಿನ ಹಣ ಸಿಗದೆ ವಿತ್ ಡ್ರಾ ಮಾಡಲು ಹೇರಲಾಗಿದ್ದ ಮಿತಿಯನ್ನು ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ಎಸ್ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
ನವೆಂಬರ್ 9ರಿಂದ ಡಿಸೆಂಬರ್ 19ರೊಳಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5.92 ಲಕ್ಷ ಕೋಟಿಯಷ್ಟು ಹಣವನ್ನು ದೇಶಾದ್ಯಂತ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. ಆದರೆ, 15.92 ಲಕ್ಷ ಕೋಟಿಯಷ್ಟು ಹಳೆಯ ನಗದನ್ನು ಹಿಂದಕ್ಕೆ ಪಡೆಯಲಾಗಿದೆ. [ಬೆಂಗಳೂರಿನಲ್ಲಿ ಹಣವಿಲ್ಲದ ಎಟಿಎಂಗಳ ಅಂತ್ಯಸಂಸ್ಕಾರ]












Click it and Unblock the Notifications