ಛತ್ತೀಸ್ಗಢ: 36 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಛತ್ತಿಸ್ಗಢದಲ್ಲಿ ನಡೆದ ಭಾರಿ ಎನ್ಕೌಂಟರ್ ನಲ್ಲಿ 36 ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ. ನಾರಾಯಣಪುರ - ದಂತೆವಾಡ ಗಡಿಯ ಅರಣ್ಯಪ್ರದೇಶದಲ್ಲಿ ಮಾವೋವಾದಿಗಳು ಮತ್ತು ಡಿಆರ್ಜಿ, ಎಸ್ಟಿಎಫ್ ನಡುವೆ ಎನ್ಕೌಂಟರ್ ನಡೆದಿದ್ದು 36 ಮಂದಿ ನಕ್ಸಲರು ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಗುರುವಾರ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಸತತವಾಗಿ ಕಾರ್ಯಾಚರಣೆ ಬಳಿಕ ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಮಾವೊವಾದಿಗಳು ಮುಖಾಮುಖಿಯಾಗಿದ್ದು ಈ ಘಟನೆ ಸಂಭವಿಸಿದೆ. ಎನ್ಕೌಂಟರ್ ನಲ್ಲಿ ಎಕೆ ಸರಣಿ ಮತ್ತು ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಮಾವೋವಾದಿಗಳು ಇರುವ ಬಗ್ಗೆ ಗುಪ್ತಚರ ವರದಿಗಳು ಸಿಕ್ಕ ಬಳಿಕ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಓರ್ಚಾ ಮತ್ತು ಬಾರ್ಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋವೆಲ್, ನೆಂದೂರು ಮತ್ತು ತುಳುತುಳಿ ಗ್ರಾಮಗಳಿಗೆ ಗುರುವಾರ ಪ್ರತ್ಯೇಕ ತಂಡಗಳನ್ನು ಕಳಿಸಿ ಹುಡುಕಾಟ ಆರಂಭಿಸಲಾಗಿತ್ತು.
ನೆಂದೂರು-ತುಳತುಳಿ ಸಮೀಪದ ಅರಣ್ಯದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಭದ್ರತಾ ಪಡೆಗಳಿಗೆ ಮಾವೋವಾದಿಗಳ ಪಡೆ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದಿದೆ. ಇನ್ನೂ ಹಲವು ಮಾವೊವಾದಿಗಳು ಅರಣ್ಯ ಪ್ರದೇಶಗಳಲ್ಲಿ ತಪ್ಪಿಸಿಕೊಂಡಿದ್ದು, ಬದ್ರತಾಪಡೆಗಳು ಉಳಿದ ಮಾವೋವಾದಿಗಳ ಬೆನ್ನಟ್ಟಿವೆ ಎಂದು ವರದಿಯಾಗಿದೆ.
ನಕ್ಸಲಿಸಂ ಕೊನೆಗೊಳಿಸುವ ಸಂಕಲ್ಪ
ಎನ್ಕೌಂಟರ್ ಬಗ್ಗೆ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣುದೇವ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ದೊಡ್ಡ ಕಾರ್ಯಾಚರಣೆ ಎಂದಿರುವ ಅವರು, ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ವಿಷ್ಣುದೇವ್ , "ನಕ್ಸಲಿಸಂ ಅನ್ನು ಕೊನೆಗೊಳಿಸಲಾಗಿದೆ. ರಾಜ್ಯದಿಂದ ನಕ್ಸಲಿಸಂ ನಿರ್ಮೂಲನೆ ಮಾಡುವುದು ಖಚಿತ, ಕೇಂದ್ರ ಗೃಹ ಅಮಿತ್ ಶಾ, ಕಳೆದ ಒಂಭತ್ತು ತಿಂಗಳ ಅವಧಿಯಲ್ಲಿ ಎರಡು ಬಾರಿ ರಾಜ್ಯಕ್ಕೇ ಭೇಟಿ ನೀಡಿದ್ದು, 2026ರ ಮಾರ್ಚ್ ವೇಳೆಗೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದಾರೆ" ಎಂದು ಹೇಳಿದರು.











Click it and Unblock the Notifications