ಭಾರತದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ
ನವದೆಹಲಿ, ಸೆಪ್ಟೆಂಬರ್ 10: ಭಾರತದಲ್ಲಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದ್ದು, ಸೋಂಕಿತರ ಚೇತರಿಕೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸಕ್ರಿಯ ಕೋವಿಡ್ ಪ್ರಕರಣಗಳು 4 ಲಕ್ಷಕ್ಕಿಂತ ಕಡಿಮೆ ಇವೆ.
24 ಗಂಟೆಗಳಲ್ಲಿ ಇಡೀ ಭಾರತದಲ್ಲಿ 34,973 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದರೆ, 260 ಸೋಂಕಿತರು ಕೋವಿಡ್ನಿಂದಾಗಿ ಸಾವುವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಒಟ್ಟು ಹೊಸ ಪ್ರಕರಣಗಳ ಪೈಕಿ ಕೇರಳ ರಾಜ್ಯದಲ್ಲೇ 26,200 ಹೊಸ ಕೊವಿಡ್ ಪ್ರಕರಣಗಳು ದಾಖಲೆಯಾಗಿದೆ. ಮಹಾರಾಷ್ಟ್ರದಲ್ಲಿ ಗುರುವಾರ 4,912 ಪ್ರಕರಣಗಳು ದಾಖಲಾಗಿವೆ. ದೇಶದಲ್ಲೀಗ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,31,74,954ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 3,90,646ಕ್ಕೆ ಇಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇದೇ ವೇಳೆ ಒಟ್ಟು ಸಾವಿನ ಸಂಖ್ಯೆ 4,42,009ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡಾ 1.18 ರಷ್ಟಿದ್ದು, ರಾಷ್ಟ್ರೀಯ ಕೋವಿಡ್- 19 ಚೇತರಿಕೆಯ ಪ್ರಮಾಣವು ಶೇಕಡಾ 97.49 ರಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಈವರೆಗೆ 72,37,84,586 ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದರ ಮಧ್ಯೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಹಾರಾಷ್ಟ್ರದಲ್ಲಿ ಸತತ ಎರಡನೇ ವರ್ಷವೂ ಅದ್ಧೂರಿಯಿಲ್ಲದ ಗಣೇಶ ಚತುರ್ಥಿ ಆಚರಣೆಗೆ ಸಾಕ್ಷಿಯಾಗುತ್ತಿದೆ. ಮುಂಬೈನಲ್ಲಿ ನಗರ ಪೊಲೀಸರು ಸೆಪ್ಟೆಂಬರ್ 10 ಮತ್ತು 19ರ ನಡುವೆ ನಾಲ್ಕಕ್ಕಿಂತ ಹೆಚ್ಚು ಜನರ ಕೂಟಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ. ಗಣೇಶ ಹಬ್ಬದ ಪೆಂಡಾಲ್ಗಳಿಗೆ ಭೇಟಿ ನೀಡುವ ಬದಲು ಭಕ್ತರಿಗೆ ವರ್ಚುವಲ್ ದರ್ಶನಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ಶಾಲೆಗಳು ಮತ್ತೆ ತೆರೆಯುತ್ತಿರುವ ಹೊತ್ತಿನಲ್ಲಿ ಸೋಂಕಿನ ಬೆದರಿಕೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ನೀತಿ ಆಯೋಗದ ಸದಸ್ಯ ಸದಸ್ಯ ಆರೋಗ್ಯ ವಿ.ಕೆ. ಪೌಲ್, "ಮಕ್ಕಳಿಗೆ ಲಸಿಕೆ ಹಾಕುವುದರಿಂದ ಶಾಲೆಗಳನ್ನು ಪುನಃ ತೆರೆಯುವ ಸ್ಥಿತಿಯಲ್ಲ. ಈ ಮಾನದಂಡವು ಪ್ರಪಂಚದಲ್ಲಿ ಎಲ್ಲಿಯೂ ಸ್ವೀಕಾರಾರ್ಹವಲ್ಲ, ಆದಾಗ್ಯೂ ಸಿಬ್ಬಂದಿಗಳ ವ್ಯಾಕ್ಸಿನೇಷನ್ ಅಪೇಕ್ಷಣೀಯವಾಗಿದೆ ಎಂದಿದ್ದಾರೆ.

ಥಾಣೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,53,920 ಕ್ಕೆ ಏರಿಕೆ
286 ಹೊಸ ಕೊರೊನಾ ವೈರಸ್ ಪ್ರಕರಣಗಳ ಸೇರ್ಪಡೆಯೊಂದಿಗೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,53,920ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಇನ್ನೂ ಮೂವರು ರೋಗಿಗಳು ಸೋಂಕಿಗೆ ಬಲಿಯಾಗಿದ್ದು, ಥಾಣೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11,333ಕ್ಕೆ ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಕೊವಿಡ್- 19 ಪ್ರಕರಣಗಳ ಸಂಖ್ಯೆ 1,34,992 ಆಗಿದ್ದು, ಸಾವಿನ ಸಂಖ್ಯೆ 3,294 ಎಂದು ಮತ್ತೊಂದು ಅಧಿಕಾರಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ವಾರದ ಎಲ್ಲ ದಿನ ನೈಟ್ ಕರ್ಫ್ಯೂ ಜಾರಿ
ನೆರೆಯ ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಅಂತರ್ ರಾಜ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ವಾರದ ಎಲ್ಲ ದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ರಾಜ್ಯದಲ್ಲಿ ಕೋವಿಡ್- 19 ಸೋಂಕು ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಆಧರಿಸಿ, ಕೊಡಗು ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೊಡಗು ಜಿಲ್ಲೆಯಲ್ಲಿ ಹಾಲಿ ಜಾರಿಯಲ್ಲಿರುವ ಲಾಕ್ಡೌನ್ ನಿಯಮಗಳಿಗೆ ಕೆಳಕಂಡ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಇಂದಿನಿಂದ ಅನ್ವಯವಾಗುವಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅದೇಶ ಹೊರಡಿಸಿದ್ದಾರೆ.
ಜಿಲ್ಲಾಡಳಿತದ ಪ್ರಮುಖ ಅಂಶಗಳು
* ಕಂಟೈನ್ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆಳಿಗೆ ಅವಕಾಶ ಇಲ್ಲ
* ವಾರದ ಎಲ್ಲ ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
* ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5ರಿಂದ ರಾತ್ರಿ 9 ಗಂಟೆಯವರೆಗೆ ಕೋವಿಡ್ ಸಮುಚಿತ ವರ್ತನೆಗಳೊಂದಿಗೆ ಕಾರ್ಯಾಚರಿಸಲು ಅನುಮತಿಸಿದೆ.
* ಜಿಲ್ಲೆಯ ಗಡಿಭಾಗಗಳಲ್ಲಿ ಮತ್ತು ಚೆಕ್ ಪೋಸ್ಟ್ ಗಳಲ್ಲಿ ನಡೆಸುತ್ತಿರುವ ಸರ್ವೇಕ್ಷಣಾ ಕ್ರಮಗಳು, ನಿರ್ಬಂಧಗಳು ಯಥಾವತ್ತಾಗಿ ಮುಂದುವರೆಯುತ್ತವೆ.
* ಸಾರ್ವಜನಿಕರು ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
*ಎಲ್ಲ ಶಿಕ್ಷಣ ಸಂಸ್ಥೆಗಳು, ನರ್ಸಿಂಗ್, ಪ್ಯಾರಾ ಮೆಡಿಕಲ್ ಸಂಸ್ಥೆಗಳ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಕರ್ನಾಟಕಕ್ಕೆ ಇದುವರೆಗೆ ಹಿಂದಿರುಗದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಪ್ರಯಾಣವನ್ನು ಅಕ್ಟೋಬರ್-2021ರ ಅಂತ್ಯದವರೆಗೆ ಮುಂದೂಡುವಂತೆ ಸೂಚಿಸುವುದು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಅಕ್ಟೋಬರ್-2021ರ ಅಂತ್ಯದವರೆಗೆ ಕೇರಳಕ್ಕೆ ಪ್ರಯಾಣ ಮಾಡದಂತೆ ಸೂಚಿಸುವುದು.
* ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಕಚೇರಿಗಳು, ಹೋಟೆಲ್ಗಳು, ಕಾರ್ಖಾನೆಗಳು ಹಾಗೂ ಇತರ ಉದ್ಯಮಗಳ ಆಡಳಿತಾಧಿಕಾರಿಗಳು, ಮಾಲೀಕರು ಕರ್ನಾಟಕಕ್ಕೆ ಇದುವರೆಗೆ ಹಿಂದಿರುಗದ ಉದ್ಯೋಗಿಗಳ ಪ್ರಯಾಣವನ್ನು ಅಕ್ಟೋಬರ್-2021ರ ಅಂತ್ಯದವರೆಗೆ ಮುಂದೂಡುವಂತೆ ಸೂಚಿಸುವುದು. ಉದ್ಯೋಗಿಗಳು ಅಕ್ಟೋಬರ್-2021ರ ಅಂತ್ಯದವರೆಗೆ ಕೇರಳಕ್ಕೆ ಪ್ರಯಾಣ ಮಾಡದಂತೆ ಸೂಚಿಸುವುದು.
*ನಿರೀಕ್ಷಿತ ಕೋವಿಡ್ 3ನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತುರ್ತು, ಅವಶ್ಯಕತೆ ಇಲ್ಲದಿದ್ದರೆ ಸಾರ್ವಜನಿಕರೂ ಕೇರಳ ಪ್ರಯಾಣವನ್ನು ಅಕ್ಟೋಬರ್ 2021ರ ಅಂತ್ಯದವರೆಗೆ ಮುಂದೂಡಬೇಕು.












Click it and Unblock the Notifications