ಮೋದಿ ಭೇಟಿ, ನಕ್ಸಲರಿಂದ 300 ಗ್ರಾಮಸ್ಥರ ಒತ್ತೆ
ನವದೆಹಲಿ, ಮೇ 09 : ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಛತ್ತೀಸ್ಗಢಕ್ಕೆ ಭೇಟಿ ನೀಡಿದ್ದಾರೆ. ನಕ್ಸಲರು ಗುಂಪು ಸುಮಾರು 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಘಟನೆ ಸುಕ್ಮಾ ಜಿಲ್ಲೆಯ ಮರೇಂಗಾದಲ್ಲಿ ನಡೆದಿದೆ. ಗ್ರಾಮಸ್ಥರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಂತೇವಾಡಾದಲ್ಲಿ ಸ್ಟೀಲ್ ಪ್ಲಾಂಟ್ ಮತ್ತು 140 ಕಿ.ಮೀ. ರೈಲ್ವೆ ಮಾರ್ಗವನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿಯೇ ಸುಕ್ಮಾ ಗ್ರಾಮಕ್ಕೆ ಆಗಮಿಸಿದ 600ಕ್ಕೂ ಅಧಿಕ ನಕ್ಸಲರು ಮೋದಿ ಕಾರ್ಯಕ್ರಮಕ್ಕೆ ತೆರಳಬೇಕಾಗಿದ್ದ 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. [ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದ ನಕ್ಸಲರು ಯಾರು?]

2,400 ಕೋಟಿ ರೂ. ವೆಚ್ಚದಲ್ಲಿ ದಲ್ಮಿ ಗ್ರಾಮದಲ್ಲಿ ಸ್ಟೀಲ್ ನಿರ್ಮಾಣ ಘಟಕ ಮತ್ತು ರಾಘೋಟ್ನಿಂದ ಜಗದಲ್ಪುರದವರೆಗಿನ 140 ಕಿ.ಮೀ ಉದ್ದದ ರೈಲ್ವೇ ಹಳಿಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ಭೇಟಿಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ನಕ್ಸಲರು ಗ್ರಾಮಸ್ಥರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.
ಪ್ರಚಾರ ತಂತ್ರ : ನಕ್ಸಲರು ಪ್ರಚಾರಕ್ಕಾಗಿ ಇಂತಹ ಕೃತ್ಯ ಮಾಡಿದ್ದಾರೆ. ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಗ್ರಾಮಸ್ಥರನ್ನು ವಶದಲ್ಲಿಟ್ಟುಕೊಂಡಿದ್ದಾರೆ. ಗ್ರಾಮಸ್ಥರೆಲ್ಲ ಸುರಕ್ಷಿತವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ತಪ್ಪಿಸಲು ಇಂತಹ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. [ಚಿತ್ರ : ಮೋದಿಯನ್ನು ಸ್ವಾಗತಿಸಿದ ಸಿಎಂ ರಮಣ್ ಸಿಂಗ್]
ಅಂದಹಾಗೆ ಪ್ರಧಾನಿ ಮೋದಿ ಛತ್ತೀಸ್ಗಢದಿಂದ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ. ಸಂಜೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. [ಮೇ9 ರಂದು ಮೋದಿ ಕೊಲ್ಕತ್ತಾ ಭೇಟಿ, ಭಾರೀ ಭದ್ರತೆ]












Click it and Unblock the Notifications