Breaking: ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಸಂಬಂಧ 3 ಅಧಿಕಾರಿಗಳು ವಜಾ
ನವದೆಹಲಿ, ಆಗಸ್ಟ್ 23: ಬ್ರಹ್ಮೋಸ್ ಕ್ಷಿಪಣಿ ಮಿಸ್ಫೈರ್ ಘಟನೆಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ (ಐಎಎಫ್) ಮೂವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಮಂಗಳವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಗ್ರೂಪ್ ಕ್ಯಾಪ್ಟನ್ ಮತ್ತು ಇಬ್ಬರು ವಿಂಗ್ ಕಮಾಂಡರ್ಗಳನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.
ಕಳೆದ ಮಾರ್ಚ್ 9, 2022 ರಂದು ಬ್ರಹ್ಮೋಸ್ ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಘಟನೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪ್ರಕರಣದ ಸತ್ಯಗಳನ್ನು ಪತ್ತೆ ಮಾಡಿತು. ಈ ವೇಳೆ ಮೂರು ಅಧಿಕಾರಿಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOP) ಉಲ್ಲಂಘನೆ ಆಗಿರುವುದೇ ಕ್ಷಿಪಣಿಯ ಆಕಸ್ಮಿಕ ಗುಂಡಿನ ದಾಳಿಗೆ ಕಾರಣವಾಯಿತು ಎಂಬುದನ್ನು ಕಂಡು ಹಿಡಿದಿದೆ.
ಫಿಲಿಪೈನ್ಸ್ ಜೊತೆ ಭಾರತ-ರಷ್ಯಾ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿ ಡೀಲ್
ಈ ಘಟನೆಯ ಹಿನ್ನೆಲೆ ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ. ಬ್ರಹ್ಮೋಸ್ ಕ್ಷಿಪಣಿಯು ಆಕಸ್ಮಿಕವಾಗಿ ಭಾರತದ ವಾಯುನೆಲೆಯಿಂದ ಉಡಾಯಿಸಲ್ಪಟ್ಟಿದ್ದು, ಪಾಕಿಸ್ತಾನದ ಮಿಯಾನ್ ಚನ್ನು ಎಂಬ ಸ್ಥಳದಲ್ಲಿ ಇಳಿದಿತ್ತು. ಈ ಘಟನೆಯ ಬಗ್ಗೆ ಪಾಕಿಸ್ತಾನ ಸರ್ಕಾರ ತನ್ನ ಆಕ್ಷೇಪಣೆಯನ್ನು ದಾಖಲಿಸಿತ್ತು, ಆದರೆ ಅದಕ್ಕಿಂತ ಮುಂಚೆಯೇ ಭಾರತವು ತನಿಖೆಯನ್ನು ಪ್ರಾರಂಭಿಸಿತ್ತು.
ಉನ್ನತ ಮಟ್ಟದ ತನಿಖೆ:
ಪಾಕಿಸ್ತಾನದ ಭೂಪ್ರದೇಶಕ್ಕೆ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಮಾಡಿದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆದ ಮಾರ್ಚ್ 15ರಂದು ಘೋಷಿಸಿದ್ದರು.
ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ:
ರಾಜ್ಯಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ದುರದೃಷ್ಟವಶಾತ್ ಮಾರ್ಚ್ 9ರಂದು ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾವಣೆ ಮಾಡಲಾಯಿತು. ಸಾಮಾನ್ಯ ತಪಾಸಣೆ ವೇಳೆ ಈ ಘಟನೆ ಸಂಭವಿಸಿದೆ. ನಂತರ ಅದು ಪಾಕಿಸ್ತಾನದಲ್ಲಿ ಇಳಿದಿರುವುದು ನಮಗೆ ತಿಳಿಯಿತು. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸದನಕ್ಕೆ ತಿಳಿಸಲು ಬಯಸುತ್ತೇನೆ. ಔಪಚಾರಿಕ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ತನಿಖೆಯಿಂದ ಅಪಘಾತಕ್ಕೆ ನಿಖರ ಕಾರಣ ತಿಳಿಯಲಿದೆ,'' ಎಂದು ಹೇಳಿದರು. "ಅದೃಷ್ಟವಶಾತ್, ಕ್ಷಿಪಣಿಯ ಆಕಸ್ಮಿಕ ಉಡಾವಣೆಯಿಂದಾಗಿ ಯಾವುದೇ ಹಾನಿ ವರದಿಯಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದರು.