2ನೇ ಹಂತದ ಲಾಕ್ ಡೌನ್; 400 ಜಿಲ್ಲೆಗಳಿಗೆ ವಿನಾಯಿತಿ?
ನವದೆಹಲಿ, ಏಪ್ರಿಲ್ 12 : ಕೊರೊನಾ ಹರಡದಂತೆ ತಡೆಯಲು ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆಯಾಗುವುದು ಖಚಿತವಾಗಿದೆ. 2ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ.
ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರಗಳ ತಜ್ಞರು, ಹಿರಿಯ ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಶನಿವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ರಾಜ್ಯಗಳ ಬೇಡಿಕೆಗಳನ್ನು ಕೇಳಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆಯಾಗುವುದು ಖಚಿತವಾಗಿದೆ. ಒಡಿಶಾ, ಪಂಜಾಬ್, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿವೆ.

2ನೇ ಹಂತದ ಲಾಕ್ ಡೌನ್ನಲ್ಲಿ ಕೇಂದ್ರ ಸರ್ಕಾರ 3 ವಿಭಾಗ ಮಾಡಲಿದೆ. ಕೆಂಪು, ಹಳದಿ ಮತ್ತು ಹಸಿರು ಎಂದು ಪ್ರದೇಶಗಳನ್ನು ವಿಭಾಗ ಮಾಡಲಾಗುತ್ತದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾದ ಜಿಲ್ಲೆಗಳು ಕೆಂಪು ಪಟ್ಟಿಗೆ ಸೇರಲಿವೆ.
ಹಳದಿ ವಿಭಾಗದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಸೋಂಕಿತ ಪ್ರಕರಣ ದಾಖಲಾದ ಜಿಲ್ಲೆ ಸೇರಲಿದೆ. ಇಲ್ಲಿ ಲಾಕ್ ಡೌನ್ ನಿಯಮ ಸಡಿಲವಾಗಲಿದೆ. ಆದರೆ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಲಾಗುತ್ತದೆ.
ಯಾವುದೇ ಕೊರೊನಾ ಪ್ರಕರಣಗಳು ದಾಖಲಾಗದ ಜಿಲ್ಲೆಗಳನ್ನು ಹಸಿರು ವಿಭಾಗಕ್ಕೆ ಸೇರಿಸಲಾಗುತ್ತದೆ. ಇಲ್ಲಿ ಸಾಮಾನ್ಯ ಜನಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾರ್ಗಸೂಚಿಸ ಸಿದ್ಧಮಾಡಲಾಗಿದೆ. ಆದರೆ, ಬೇರೆ ಜಿಲ್ಲೆಗಳ ಜನರು ಈ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗುತ್ತದೆ.
ವರದಿಗಳ ಪ್ರಕಾರ ದೇಶದ 400 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಂಪೂರ್ಣ ತೆರವುಗೊಳಿಸುವ ನಿರೀಕ್ಷೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕಿದೆ.












Click it and Unblock the Notifications