ಸಿಂಗ್ ಹೆಸರು ಕೈಬಿಡಲು ಬಂದಿತ್ತಂತೆ ಒತ್ತಡ
ನವದೆಹಲಿ, ಸೆ. 12 : 2ಜಿ ತರಾಂಗತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರು ಕೈಬಿಡುವಂತೆ ಕಾಂಗ್ರೆಸ್ ನಾಯಕರು ಅನೇಕ ಸಾರಿ ಒತ್ತಡ ಹೇರಿದ್ದರು ಎಂದು ನಿವೃತ್ತ ಸಿಎಜಿ ವಿನೋದ್ ರೈ ಹೊಸ ಬಾಂಬ್ ಸಿಡಿಸಿದ್ದಾರೆ.
2ಜಿ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿ ಹಗರಣದ ಸಂಬಂಧಿಸಿ ನಡೆಸಲಾದ ಲೆಕ್ಕ ಪರಿಶೋಧನಾ ವರದಿಯಲ್ಲಿ ಮನಮೋಹನ್ ಸಿಂಗ್ ಹೆಸರು ಸೇರಿಸದಂತೆ ಅಂದಿನ ಕಾಂಗ್ರೆಸ್ ಸಂಸದರಲ್ಲಿ ಕೆಲವರು ನನ್ನ ಮೇಲೆ ಒತ್ತಡ ತಂದಿದ್ದರು ಎಂದು ಹೇಳಿದ್ದಾರೆ.
ನಾನು ಅನೇಕ ಬಾರಿ ಪ್ರಕರಣದ ಬಗ್ಗೆ ನಡೆಸಿದ ತನಿಖಾ ವರದಿಯಲ್ಲಿ ಮನಮೋಹನ್ ಸಿಂಗ್ ಹೆಸರು ಪ್ರಸ್ತಾಪಿಸಿದ್ದೆ. ಆದರೆ, ಅದನ್ನು ಕಾಂಗ್ರೆಸ್ ನಾಯಕರು ಗಣನೆಗೆ ತೆಗೆದುಕೊಳ್ಳಲಿಲ್ಲ. 2ಜಿ ಹಗರಣ ಸಂಬಂಧಿಸಿ ನಡೆದ ಪಿಎಸಿ ಸಭೆಯಲ್ಲಿ ವಸ್ತುನಿಷ್ಠ ವರದಿ ಸಲ್ಲಿಸಿದ್ದೆ ಎಂದು ವಿವರಿಸಿದ್ದಾರೆ.
'ನನಗೆ ಒತ್ತಡ ತಂದಿದ್ದವರು ಈಗ ಜನಪ್ರತಿನಿಧಿಗಳಾಗಿ ಉಳಿದಿಲ್ಲ. ಅಧಿಕಾರದ ಮೇಲಿನ ಆಸೆಯಿಂದ ಅವರೋ ಅಥವಾ ಸ್ವತಃ ಮನಮೋಹನ್ ಸಿಂಗ್ ಅವರೋ ಈ ರೀತಿ ನಡೆದುಕೊಂಡಿದ್ದರು' ಎಂದು ಔಟ್ ಲುಕ್ ಪತ್ರಿಕೆಗೆ ನೀಡಿರುವ ಸಂದರ್ಶನದ ವೇಳೆ ಹೇಳಿದ್ದಾರೆ.(11300 ಕೋಟಿ ರೂ ಸ್ಪೆಕ್ಟ್ರಂ ಹರಾಜು: ಆದಾಯ ಯಾರಿಗೆ?)
ಉತ್ತಮ ರಾಜಕಾರಣದಿಂದ ಉತ್ತಮ ಆರ್ಥಿಕ ವ್ಯವಸ್ಥೆ ನಿರ್ಮಾಣವಾಗುತ್ತದೆ. ಉತ್ತಮ ರಾಜಕಾರಣವೆಂದರೆ ಕೇವಲ ಅಧಿಕಾರದಕಲ್ಲಿ ಇರುವುದಲ್ಲ. ನನ್ನ ಫೋನ್ ಸಹ ಯುಪಿಎ ಅಧಿಕಾರ ಅವಧಿಯಲ್ಲಿ ಟ್ಯಾಪ್ ಮಾಡಲಾಗಿತ್ತು, ಕಲ್ಲಿದ್ದಲು ಹಂಚಿಕೆ ಪ್ರಕರಣದಲ್ಲಿ ಮನಮೋಹನ್ ಸಿಂಗ್ ಪಾತ್ರವಿದೆ..ಈ ರೀತಿಯ ಹಲವಾರು ವಿಚಾರಗಳನ್ನು ತಾವು ಬರೆಯಲು ಹೊರಟಿರುವ ಹೊಸ ಪುಸ್ತಕದಲ್ಲಿ ಹೇಳಲಿದ್ದೇನೆ ಎಂದು ವಿನೋದ್ ರೈ ತಿಳಿಸಿದ್ದಾರೆ.