231 ಭಾರತೀಯರು ತಾಯ್ನಾಡಿಗೆ, ಸೇನೆಗೆ ಸಲಾಂ!
ನವದೆಹಲಿ: ಸುಡಾನ್ ನೆಲದಲ್ಲಿ ಭಾರತೀಯರನ್ನು ರಕ್ಷಿಸುವ ಕಾರ್ಯ ಮುಂದುವರಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಮೂಲದ ಪ್ರಜೆಗಳನ್ನ ತಾಯ್ನಾಡಿಗೆ ಕರೆತರಲಾಗುತ್ತಿದೆ. ಸಂಕಷ್ಟ ಸ್ಥಿತಿಯಲ್ಲೂ ಮತ್ತೊಂದು ಬ್ಯಾಚ್ನಲ್ಲಿ 231 ಭಾರತ ಮೂಲದ ಪ್ರಜೆಗಳು ತಾಯ್ನಾಡು ತಲುಪಿದ್ದಾರೆ. ಈ ಪೈಕಿ 208 ಮಂದಿ ಗುಜಾರಾತ್ ನಿವಾಸಿಗಳಾಗಿದ್ದು, ಮತ್ತೊಂದ್ಕಡೆ ಸುಡಾನ್ ನೆಲದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಹದಗೆಡುತ್ತಿದೆ.
ವಿವಿಧ ದೇಶಗಳ ಪ್ರಜೆಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿ ಇರುವಾಗಲೇ, ಮತ್ತೊಂದ್ಕಡೆ ರಕ್ಷಣಾ ಕಾರ್ಯಕ್ಕೆ ಸಹಾಯ ಆಗಲಿ ಎಂದು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೊದಲು 72 ಗಂಟೆ ಕಾಲ ಕದನ ವಿರಾಮ ಘೋಷಿಸಲಾಗಿತ್ತು, ಈಗ ಮತ್ತೆ ಇನ್ನೂ 72 ಗಂಟೆ ಕಾಲ ಕದನ ವಿರಾಮ ವಿಸ್ತರಣೆ ಮಾಡಲಾಗಿದೆ. ಆದರೂ ಅಲ್ಲಲ್ಲಿ ಬಾಂಬ್ ಮತ್ತು ಗುಂಡಿನ ಸದ್ದು ಕೇಳಿಬರುತ್ತಿದೆ. ಸುಡಾನ್ ನೆಲದಲ್ಲಿ ಸಾವಿನ ಸಂಖ್ಯೆ ಈವರೆಗೂ 500 ಗಡಿ ದಾಟಿದ್ದು, 600 ತಲುಪುವ ಆತಂಕ ಮೂಡಿದೆ. ಹಾಗೇ 5000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭಾರತೀಯ ಯೋಧರ ಸಾಧನೆ
ಸುಡಾನ್ ನೆಲದಲ್ಲಿ ಖುದ್ದು ಸೇನೆ ಮತ್ತು ಅರೆಸೇನಾ ಪಡೆಗಳು ಕದನ ವಿರಾಮ ಘೋಷಿಸಿದ್ದರೂ ಗುಂಡಿನ ಮೊರೆತ ನಿಂತಿಲ್ಲ. ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದೆ. ಹೀಗಾಗಿ ನಾಗರಿಕರನ್ನ ರಕ್ಷಿಸುವ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಮಾತು ಕೊಟ್ಟಂತೆ ಸುಡಾನ್ನ ಎರಡೂ ಪಡೆಗಳು ನಡೆದುಕೊಂಡಿಲ್ಲ. ಅದರಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಲು ಸುಡಾನ್ ಅರೆಸೇನಾ ಪಡೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಭಾರತದ ವೀರ ಯೋಧ ಪಡೆ, ಭಾರತೀಯರನ್ನ ರಕ್ಷಿಸಿ ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಕರೆತರುತ್ತಿದೆ.
ಭಾರತದ ನೆರವಿಗೆ ನಿಂತ ಸೌದಿ
ಭಾರತದ ರಕ್ಷಣಾ ಕಾರ್ಯಕ್ಕೆ ನಮ್ಮ ದೇಶದ ಮಿತ್ರ ಸೌದಿ ಅರೇಬಿಯಾ ನೆರವಾಗುತ್ತಿದೆ. ಹೇಗೆಂದರೆ ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿದೆ. ಹೀಗಾಗಿ ಸೌದಿ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. ಇದೀಗ ಸೇನಾ ವಿಮಾನದಲ್ಲಿ 231ನರನ್ನ ಸ್ವದೇಶಕ್ಕೆ ತಲುಪಿಸಲಾಗಿದೆ. ಈ ಮೂಲಕ ಸಾವಿರಾರು ಭಾರತೀಯರು ಸುಡಾನ್ ನೆಲದಿಂದ ಸುರಕ್ಷಿತವಾಗಿ ಭಾರತ ತಲುಪಿದಂತಾಗಿದೆ.
ಕನ್ನಡಿಗರ ಜೀವನದಿ ಹೆಸರು!
ಹೌದು, ಕನ್ನಡಿಗರ ಜೀವನದಿ ಹೆಸರನ್ನು ಸುಡಾನ್ ಕಾರ್ಯಾಚರಣೆ ಇಡಲಾಗಿದೆ. 'ಆಪರೇಷನ್ ಕಾವೇರಿ' ಹೆಸರಲ್ಲಿ ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಸುಡಾನ್ ನೆಲದಲ್ಲಿ ಪರದಾಡಿದ್ದ ಹಕ್ಕಿಪಿಕ್ಕಿ ಜನರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಬಹುತೇಕ ವಿದೇಶಿಗರು ಸುಡಾನ್ ನೆಲದಿಂದ ಹೊರಟಿದ್ದಾರೆ. ಆದರೆ ಸುಡಾನ್ ಹಿಂಸಾಚಾರಕ್ಕೆ ರಕ್ತದಾಹ ಮಾತ್ರ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಕದನ ವಿರಾಮ ಇದ್ದರೂ ಗುಂಡು, ಬಾಂಬ್ ಎಸೆಯುತ್ತಾ ಹಿಂಸೆಗೆ ಇಳಿದಿದ್ದಾರೆ ಎರಡೂ ಪಡೆಗಳ ಸೈನಿಕರು.
ಒಟ್ನಲ್ಲಿ ಸುಡಾನ್ ನೆಲದಲ್ಲಿ ಸದ್ಯಕ್ಕೆ ಶಾಂತಿ ನೆಲೆಸುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಈ ನಡುವೆ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘನೆ ಆಗುತ್ತಿದ್ದು, 75 ಸಾವಿರ ಜನ ಸುಡಾನ್ ತೊರೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಭೀಕರ ಸಮಸ್ಯೆ ಎದುರಾಗಬಹುದು. ಈ ಹೊತ್ತಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಯ ಮುಖ್ಯಸ್ಥರನ್ನ ಮಾತುಕತೆಗೆ ಕರೆದಿದೆ. ಮುಂದೆ ಏನಾಗಲಿದೆ ಎಂಬ ಬಗ್ಗೆ ಸಭೆಯೇ ನಿರ್ಧಾರ ಮಾಡಲಿದೆ. ಹೀಗಾಗಿ ಈ ಸಭೆ 50 ಲಕ್ಷ ಜನರ ಜೀವನ ನಿರ್ಧರಿಸಲಿದೆ.












Click it and Unblock the Notifications