200 ಕೋಟಿ ಮದುವೆ ಮಾಡಿ, ತ್ಯಾಜ್ಯ ವಿಲೇವಾರಿಗೆ 54,000 ಪಾವತಿ
ಔಲಿ (ಉತ್ತರಾಖಂಡ್), ಜೂನ್ 25: ದಕ್ಷಿಣ ಆಫ್ರಿಕಾದಲ್ಲಿ ಇರುವ ಅಜಯ್ ಗುಪ್ತಾ, ಅತುಲ್ ಗುಪ್ತಾ ಸೋದರರ ಮಕ್ಕಳ ಮದುವೆಯನ್ನು ಉತ್ತರಾಖಂಡ್ ನಲ್ಲಿರುವ ಔಲಿಯಲ್ಲಿ ಅದ್ಧೂರಿಯಾಗಿ ಮಾಡಲಾಯಿತು. ಅದು ಯಾವ ಪರಿಯ ವಿಜೃಂಭಣೆಯ ಮದುವೆ ಅಂದರೆ, 200 ಕೋಟಿ ರುಪಾಯಿ ಅಂದಾಜು ವೆಚ್ಚ್ ಮದುವೆಗಾಗಿ ಆಗಿದೆ. ಇಷ್ಟು ದೊಡ್ಡ ಮಟ್ಟದ ಮದುವೆ ಮಾಡಿ, ಕಸ ವಿಲೇವಾರಿಗೆ ಪಾವತಿಸಿರುವುದು 54,000 ಮಾತ್ರ.
ಮದುವೆ ನಡೆದ ಜಾಗದಲ್ಲಿ ಬಿದ್ದಿದ್ದ ಕಸ ವಿಲೇವಾರಿಗೆ ಅಂತಲೇ ಮುನ್ಸಿಪಾಲಿಟಿಯಿಂದ ಇಪ್ಪತ್ತು ಕಾರ್ಮಿಕರನ್ನು ನಿಯೋಜಿಸಲಾಗಿದೆ. ಈ ತ್ಯಾಜ್ಯದ ಪರಿಸರದ ಮೇಲೆ ಆಗಿರುವ ಪರಿಣಾಮದ ಬಗ್ಗೆ ಜುಲೈ ಏಳನೇ ತಾರೀಕಿನೊಳಗೆ ವರದಿ ನೀಡುವಂತೆ ಹೈ ಕೋರ್ಟ್ ನಿಂದ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗಿದೆ. ಇದೇ ವಿಚಾರದ ಬಗ್ಗೆ ಜುಲೈ ಎಂಟನೇ ತಾರೀಕು ವಿಚಾರಣೆ ನಿಗದಿ ಆಗಿದೆ.
ಎರಡು ವಾರದ ಹಿಂದೆ ಮದುವೆ ಮಾಡಿಸಿದ್ದ ಪುರೋಹಿತನ ಜತೆಗೆ ನವವಿವಾಹಿತೆ ಪರಾರಿ!
ಗುಪ್ತಾ ಕುಟುಂಬವು 54,000 ರುಪಾಯಿಯನ್ನು ಬಳಕೆದಾರರ ಶುಲ್ಕ ಎಂದು ಪಾವತಿಸಿತ್ತು. ಈ ವರೆಗೆ ನೂರೈವತ್ತು ಕ್ವಿಂಟಲ್ ಗೂ ಹೆಚ್ಚು ತ್ಯಾಜ್ಯವನ್ನು ಸ್ವಚ್ಛ ಮಾಡಲಾಗಿದೆ. ಸ್ವಚ್ಛತಾ ಕಾರ್ಯ ಪೂರ್ಣಗೊಂಡ ಮೇಲೆ ಕಾರ್ಮಿಕರು, ವಾಹನ ಹೀಗೆ ಒಟ್ಟು ವೆಚ್ಚದ ಬಿಲ್ ಅನ್ನು ಅವರಿಗೆ ಕಳುಹಿಸಲಾಗುವುದು. ಒಟ್ಟಾರೆ ಬಿಲ್ ಪಾವತಿಸಲು ಅವರು ಒಪ್ಪಿದ್ದಾರೆ. ಜತೆಗೆ ಮುನ್ಸಿಪಾಲಿಟಿಗೆ ವಾಹನ ಒದಗಿಸುವುದಾಗಿ ಹೇಳಿದ್ದಾರೆ ಎಂದು ಸ್ಥಳೀಯ ಪಾಲಿಕೆ ಅಧ್ಯಕ್ಷರು ಹೇಳಿದ್ದಾರೆ.
ಜೂನ್ 18ರಿಂದ 20ರ ತನಕ ಅಜಯ್ ಗುಪ್ತಾ ಅವರ ಮಗ ಸೂರ್ಯಕಾಂತ್ ಹಾಗೂ ಜೂನ್ 20ರಿಂದ 22ರ ತನಕ ಅತುಲ್ ಗುಪ್ತಾ ಅವರ ಮಗ ಶಶಾಂಕ್ ಮದುವೆ ಔಲಿಯಲ್ಲಿ ಆಗಿತ್ತು. ಅದ್ಧೂರಿ ಮದುವೆಗೆ ಸಿದ್ಧತೆ ಕಾರ್ಯ ನಡೆಯುವಾಗಲೇ ಪ್ರಕೃತಿಗೆ ಹಾನಿ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು.
ಮುಖ್ಯಮಂತ್ರಿಗಳು, ಕತ್ರಿನಾ ಕೈಫ್ ರಂಥ ಸಿನಿಮಾ ತಾರೆಯರು, ಯೋಗ ಗುರು ಬಾಬಾ ರಾಮ್ ದೇವ್ ಮದುವೆಯಲ್ಲಿ ಭಾಗವಹಿಸಿದ್ದರು. ಮದುವೆಯಲ್ಲೇ ಎರಡು ಗಂಟೆಗಳ ಕಾಲ ಯೋಗ ಸೆಷನ್ ಕೂಡ ಬಾಬಾ ರಾಮ್ ದೇವ್ ಮಾಡಿದ್ದರು. ಅತಿಥಿಗಳಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು.
ಈ ಎರಡು ಹೈ ಪ್ರೊಫೈಲ್ ಮದುವೆಗಾಗಿ ಸ್ವಿಟ್ಜರ್ ಲೆಂಡ್ ನಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಎಲ್ಲ ಹೋಟೆಲ್, ರೆಸಾರ್ಟ್ ಗಳನ್ನು ವಾಸ್ತವ್ಯಕ್ಕಾಗಿ ಬುಕ್ ಮಾಡಲಾಗಿತ್ತು.