ಬೋಫೋರ್ಸ್ ಆಯ್ತು, ಈಗ 1984ರ ಸಿಖ್ ಗಲಭೆ ಕೇಸ್ ರಿ- ಓಪನ್
ಸುಪ್ರೀಂ ಕೋರ್ಟ್ ನಿಂದ 1984ರ ಸಿಖ್ ದಂಗೆಗೆ ಸಂಬಂಧಿಸಿದ 199 ಪ್ರಕರಣಗಳ ಮರು ಪರಿಶೀಲನೆ. ಈ ಹಿಂದೆ, ಎಸ್ಐಟಿ ಕೈಬಿಡಲು ಉದ್ದೇಶಿಸಿದ್ದ 199 ಪ್ರಕರಣಗಳನ್ನು ಪುನರ್ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್.
ನವದೆಹಲಿ, ಆಗಸ್ಟ್ 16: 1984ರಲ್ಲಿ ನಡೆದಿದ್ದ ಸಿಖ್ ದಂಗೆಗೆ ಸಂಬಂಧಿಸಿದ 199 ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ನಿರ್ಧಾರವನ್ನು ಮರು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಇದಕ್ಕಾಗಿ, ಸುಪ್ರೀಂ ಕೋರ್ಟ್ ನ ಇಬ್ಬರು ನ್ಯಾಯಾಧೀಶರುಳ್ಳ ಸಮಿತಿಯನೊಂದನ್ನು ರಚಿಸಲು ನಿರ್ಧರಿಸಿರುವ ಸುಪ್ರೀಂ ಕೋರ್ಟ್, ಯಾವ ಆಧಾರದ ಮೇಲೆ ಎಸ್ಐಟಿಯು 199 ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಿತು ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದೆ.

ಇತ್ತೀಚೆಗಷ್ಟೇ, ಬೋಫೋರ್ಸ್ ಫಿರಂಗಿ ಹಗರಣವನ್ನು ಪುನಃ ತನಿಖೆಗೆ ಒಳಪಡಿಸುವುದಾಗಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹೇಳಿತ್ತು. ಇದೀಗ, ಸಿಖ್ ಗಲಭೆಯ ಪ್ರಕರಣಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಸಂಕಷ್ಟ ಎದುರಾದಂತಾಗಿದೆ ಎಂದು ಹೇಳಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಕಾಂಗ್ರೆಸ್ ಪ್ರಮುಖ ಆರೋಪಿ ಸ್ಥಾನದಲ್ಲಿದೆ.
1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ನಡೆದ ನಂತರ, ಸಿಖ್ಖರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇಂದಿರಾ ಗಾಂಧಿಯವರನ್ನು ಕೊಂದಿದ್ದ ಅಂಗರಕ್ಷಕರು ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ದೇಶದ ಮೂಲೆಮೂಲೆಗಳಲ್ಲಿರುವ ಸಿಖ್ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಹಲವಾರು ಸಿಖ್ ಜನರ ಮಾರಣ ಹೋಮವಾಗಿತ್ತು. ಆಗ, ದೆಹಲಿಯೊಂದರಲ್ಲೇ, 2,733 ಸಿಖ್ ಜನರು ಹತ್ಯೆಯಾಗಿದ್ದರು.
ಈ ಪ್ರಕರಣಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ), ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ್ದ 199 ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಿತ್ತು. ಇದನ್ನು ಪುನಃ ಪ್ರಸ್ತಾಪಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳನ್ನು ತಾನು ಪುನಃ ಪರಿಶೀಲಿಸುವುದಾಗಿ ತಿಳಿಸಿದೆ.












Click it and Unblock the Notifications