ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿತ: ಮಿಜೋರಾಂನಲ್ಲಿ ಕನಿಷ್ಠ 17 ಮಂದಿ ಸಾವು- ಹಲವರು ಸಿಲುಕಿರುವ ಶಂಕೆ
ಮಿಜೋರಾಂ, ಆಗಸ್ಟ್ 23: ರಾಜ್ಯ ರಾಜಧಾನಿ ಐಜ್ವಾಲ್ನಿಂದ ಸುಮಾರು 21 ಕಿಮೀ ದೂರದಲ್ಲಿರುವ ಸೈರಾಂಗ್ ಪ್ರದೇಶದ ಬಳಿ ನಿರ್ಮಾಣ ಹಂತದ ರೈಲ್ವೆ ಸೇತುವೆಯೊಂದು ಕುಸಿದು ಬಿದ್ದಿದೆ. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದ ದುರಂತದಲ್ಲಿ ಕನಿಷ್ಠ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯ ವೇಳೆ ಸೇತುವೆ ಮೇಲೆ 40 ಮಂದಿ ಕಟ್ಟಡ ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಇದುವರೆಗೆ ಹದಿನೇಳು ಶವಗಳನ್ನು ಅವಶೇಷಗಳಿಂದ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಂಗ್ ಮಿಜೋ ಅಸೋಸಿಯೇಶನ್ನ ಸೈರಾಂಗ್ ಶಾಖೆಯು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
'ಈಶಾನ್ಯ ಪ್ರದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಭಾರತೀಯ ರೈಲ್ವೆ ಯೋಜನೆಯ ಭಾಗವಾಗಿ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಇದು ಕೆಲ ವರ್ಷಗಳಿಂದ ನಿರ್ಮಾಣ ಹಂತದಲ್ಲಿತ್ತು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದ ಹಿಂದಿನ ಕಾರಣ ಮತ್ತು ಅದು ಸಂಭವಿಸಿದಾಗ ಎಷ್ಟು ಜನರು ಅದರಲ್ಲಿದ್ದರು ಎಂದು ನಾವು ಇನ್ನೂ ಖಚಿತಪಡಿಸಿಲ್ಲ' ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ (ಎನ್ಎಫ್ಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡಿ ಹೇಳಿದ್ದಾರೆ.

ಕುರುಂಗ್ ನದಿಯ ಮೇಲೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದು ಬೈರಾಬಿ ಮತ್ತು ಸೈರಾಂಗ್ ರೈಲು ನಿಲ್ದಾಣಗಳ ನಡುವೆ ಇದೆ. ಸೇತುವೆಯ ಪಿಯರ್ ಎತ್ತರ 104 ಮೀ ಆಗಿದೆ. ಮಿಜೋರಾಂನ ರಾಜಧಾನಿಯನ್ನು ತಲುಪುವ ಮೊದಲು ಸಾಯಿರಂಗ್ ರೈಲು ನಿಲ್ದಾಣವು ಕೊನೆಯ ರೈಲು ನಿಲ್ದಾಣವಾಗಿದೆ. ಒಮ್ಮೆ ಪೂರ್ಣಗೊಂಡ ನಂತರ, ಯೋಜನೆಯು ಐಜ್ವಾಲ್ ಅನ್ನು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಪರ್ಕಿಸುತ್ತದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ (ಹಿಂದಿನ ಟ್ವಿಟ್ಟರ್) ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
Major accident due to bridge collapse in Mizoram, 17 killed, 30 injured due to collapse of railway bridge. #Aizawl #Mizoram #BridgeCollapsed#MoonLanding #Chandrayaan3 #TeJran pic.twitter.com/AvMHqfYKPt
— Neha Yadav (@NehaYad1) August 23, 2023
'ಐಜ್ವಾಲ್ ಬಳಿಯ ಸೈರಾಂಗ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಮೇಲ್ಸೇತುವೆ ಇಂದು ಕುಸಿದಿದೆ. ಕನಿಷ್ಠ 15 ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ದುರಂತದಿಂದ ತೀವ್ರವಾಗಿ ದುಃಖಿತನಾಗಿದ್ದೇನೆ. ಎಲ್ಲಾ ದುಃಖಿತ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆಯನ್ನು ಹೇಳುತ್ತೇನೆ' ಎಂದು ತಿಳಿಸಿದ್ದಾರೆ.












Click it and Unblock the Notifications