ಅಘ್ಫಾನ್ನಲ್ಲಿ ರಕ್ಷಿಸಿದ 78 ಭಾರತೀಯರಲ್ಲಿ 16 ಮಂದಿಗೆ ಕೋವಿಡ್
ನವದೆಹಲಿ, ಆಗಸ್ಟ್ 25; ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ 78 ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು. ವಿಶೇಷ ವಿಮಾನದಲ್ಲಿ ಎಲ್ಲರೂ ಮಂಗಳವಾರ ದೆಹಲಿ ತಲುಪಿದ್ದರು. ಇವರಲ್ಲಿ 16 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಅಲ್ಲಿನ ಪರಿಸ್ಥಿತಿ ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು ವಾಯುಪಡೆಯ ವಿಶೇಷ ವಿಮಾನಗಳ ಮೂಲಕ ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ.
78 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಎಲ್ಲರೂ ಮಂಗಳವಾರ ನವದೆಹಲಿ ತಲುಪಿದ್ದರು. ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 16 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ 78 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಇಲ್ಲಿಯ ತನಕ 228 ಭಾರತೀಯರು ಸೇರಿದಂತೆ 626 ಜನರನ್ನು ಅಫ್ಘಾನಿಸ್ತಾನದಿಂದ ರಕ್ಷಣೆ ಮಾಡಲಾಗಿದೆ. 228 ಜನರಲ್ಲಿ ಅಲ್ಲಿನ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಸೇರಿಸಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಫ್ಘಾನ್ ಪ್ರಜೆಗಳನ್ನು ಯಾವುದೇ ದೇಶವೂ ರಕ್ಷಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ವಿದೇಶಿಯರು ಆಗಸ್ಟ್ 31ರೊಳಗೆ ದೇಶವನ್ನು ತೊರೆಯಬೇಕು. ದೇಶ ತೊರೆಯಲು ಇರುವ ಗಡುವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಮಂಗಳವಾರ ತಾಲಿಬಾನಿಗಳು ಮತ್ತೆ ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 31ರೊಳಗೆ ನಾಗರಿಕರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಆದರೆ ಬಳಿಕವೂ ಅಲ್ಲಿ ಅಮೆರಿಕದ ಸೈನ್ಯ ಇರಲಿದೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ.
ಅಫ್ಘಾನಿಸ್ತಾನದಲ್ಲಿರುವ ವಿದೇಶಿಯರಲ್ಲಿ ಅಮೆರಿಕದವರೇ ಹೆಚ್ಚು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಹಾಗೆಯೇ ಮುಂದುವರೆದಿದೆ. ಜನರು ಭಯಪಡುವ ಅಗತ್ಯವಿಲ್ಲ. ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಹೇಳಿದ್ದಾರೆ.
"ಅಫ್ಘಾನಿಸ್ತಾನದಲ್ಲಿ ಇರುವ ನಾಗರಿಕರನ್ನು ಗಡುವಿನೊಳಗೆ ನಾವು ರಕ್ಷಣೆ ಮಾಡುತ್ತೇವೆ. ಇದಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಆದರೆ ಕೆಲವು ಯುರೋಪಿನ್ ರಾಷ್ಟ್ರಗಳ ನಾಯಕರು ಗಡುವು ವಿಸ್ತರಣೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ" ಎಂದು ಜೋ ಬೈಡನ್ ತಿಳಿಸಿದ್ದಾರೆ.
ಆಗಸ್ಟ್ 14ರ ಬಳಿಕ ಅಮೆರಿಕ 70,700 ಜನರನ್ನು ರಕ್ಷಣೆ ಮಾಡಿದೆ. ಕಳೆದ 12 ಗಂಟೆಗಳ ಅವಧಿಯಲ್ಲಿ 6,400 ಜನರನ್ನು ರಕ್ಷಿಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ. ಜರ್ಮನಿ ಮತ್ತು ಯುರೋಪಿಯನ್ ರಾಷ್ಟ್ರದ ಹಲವು ಜನರನ್ನು ಸಹ ರಕ್ಷಣೆ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ.
ಅಮೆರಿಕ ತನ್ನ ಜನರನ್ನು ಸ್ಥಳಾಂತರ ಮಾಡಲು ಜಂಬೋ ವಿಮಾನಗಳಾದ ಬೋಯಿಂಗ್ ಸಿ 17 ಅನ್ನು ಬಳಕೆ ಮಾಡುತ್ತಿದೆ. ಈ ಬೃಹತ್ ವಿಮಾನಗಳು ಹಲವರ ಗಮನ ಸೆಳೆಯುತ್ತಿವೆ. ಆಗಸ್ಟ್ 16ರಂದು ಈ ವಿಮಾನದ ಮೂಲಕ ಒಂದೇ ಬಾರಿಗೆ 823 ಜನರನ್ನು ಸ್ಥಳಾಂತರ ಮಾಡಿತ್ತು.
ಭಾರತ ಅಫ್ಘಾನಿಸ್ತಾನದಿಂದ ಪ್ರಜೆಗಳನ್ನು ರಕ್ಷಣೆ ಮಾಡುವ ಕಾರ್ಯಾಚರಣೆಗೆ 'ಆಪರೇಷನ್ ದೇವಿ ಶಕ್ತಿ' ಎಂದು ಹೆಸರಿಟ್ಟಿದೆ. ದೇಶದಲ್ಲಿ ಸಿಲುಕಿರುವ ಅಫ್ಘನ್ ಸಿಖ್ಖರನ್ನು ಮತ್ತು ಹಿಂದೂಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಇದುವರೆಗೂ 77 ಸಿಖ್ಖರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಆಪರೇಷನ್ ದೇವಿ ಶಕ್ತಿ' ಯಡಿ ಕಾಬೂಲ್ ವಿಮಾನ ನಿಲ್ದಾಣರಿಂದ 78 ಜನರನ್ನು ರಕ್ಷಣೆ ಮಾಡಿ ದುಶಾಂಬೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮಂಗಳವಾರ ನವದೆಹಲಿಗೆ ಕರೆದುಕೊಂಡು ಬರಲಾಗಿತ್ತು. ಭಾರತಕ್ಕೆ ಕರೆತರುವ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.












Click it and Unblock the Notifications