ಪ್ರೇಮಿಗಳ ದಿನದಂದು ಹೊಸ ಬದುಕಿಗೆ ಕಾಲಿಟ್ಟ 15 ಶರಣಾಗತ ನಕ್ಸಲರು: ಸಾಮೂಹಿಕ ವಿವಾಹ
ದಾಂತೇವಾಡ, ಫೆಬ್ರವರಿ 15: ಛತ್ತೀಸಗಡದ ದಾಂತೇವಾಡದಲ್ಲಿ ಶರಣಾಗತರಾಗಿದ್ದ 15 ನಕ್ಸಲರಿಗೆ ಪೊಲೀಸರು ಪ್ರೇಮಿಗಳ ದಿನದಂದು ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಿದ್ದರು.
'ಶರಣಾಗಿದ್ದ 15 ನಕ್ಸಲರು ಇಂದು ಇಲ್ಲಿ ಸಾಂಸಾರಿಕ ಬಂಧನಕ್ಕೆ ಒಳಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ನಕ್ಸಲ್ ಸಂಘಟನೆಯ ಚಟುವಟಿಕೆಯಲ್ಲಿ ತೊಡಗಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಆಗ ಅವರಿಗೆ ಮದುವೆಯಾಗಲು ಅನುಮತಿ ಸಿಕ್ಕಿರಲಿಲ್ಲ' ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ನಕ್ಸಲರಿಂದ ಸುಧಾರಿತ ಬಾಂಬ್ ಸ್ಫೋಟ, ಕೋಬ್ರಾ ಅಧಿಕಾರಿ ಹುತಾತ್ಮ
'ದಾಂತೇವಾಡ ಪೊಲೀಸರು ನಕ್ಸಲರನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಉದ್ದೇಶದೊಂದಿಗೆ 'ಘರ್ ವಾಪಸಿ' ಆಂದೋಲನ ನಡೆಸುತ್ತಿದ್ದಾರೆ. ಇದರಲ್ಲಿ ಆರು ತಿಂಗಳ ಅವಧಿಯಲ್ಲಿಯೇ ಸುಮಾರು 300 ನಕ್ಸಲರು ಶರಣಾಗತಿಯಾಗಿದ್ದಾರೆ. ಅವರ ಬುಡಕಟ್ಟು ಸಮುದಾಯಗಳ ಸಂಪ್ರದಾಯ ಮತ್ತು ಸಂಸ್ಕೃತಿಗಳಿಗೆ ಅನುಗುಣವಾಗಿ ವಿವಾಹ ಮಹೋತ್ಸವ ಸಮಾರಂಭ ಏರ್ಪಡಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
'ಪ್ರೇಮಿಗಳ ದಿನವಾದ ಇಂದು ಹಿಂಸಾಚಾರ ಮತ್ತು ಭಯದ ಮೇಲಿನ ಪ್ರೀತಿಯ ಗೆಲುವಿನ ಸಂಭ್ರಮವನ್ನಾಗಿ ಈ ಮದುವೆ ಸಮಾರಂಭವನ್ನು ಆಚರಿಸಲಾಗಿದೆ' ಎಂದು ಅವರು ವ್ಯಾಖ್ಯಾನಿಸಿದ್ದಾರೆ.
'ನಾವಿಬ್ಬರೂ ನಕ್ಸಲರಾಗಿ ಕೆಲಸ ಮಾಡುತ್ತಿದ್ದಾಗ ಒಂದು ವರ್ಷದ ಹಿಂದೆ ನಮ್ಮ ನಡುವೆ ಪ್ರೀತಿ ಮೂಡಿತ್ತು. ನನ್ನ ತಲೆಯ ಮೇಲೆ 5 ಲಕ್ಷ ರೂ ಮತ್ತು ಆಕೆಯ ತಲೆಗೆ 1 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು. ನಾವು ಆಗಲೇ ಮದುವೆಯಾಗಲು ನಿರ್ಧರಿಸಿದ್ದೆವು. ಆದರೆ ನಮಗೆ ಅವಕಾಶ ನೀಡಿರಲಿಲ್ಲ. ನಮಗೆ ಅಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಸಹ ಅನುಮತಿ ಇಲ್ಲ. ಅವರು ಅಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಹ ನಡೆಸಿದ್ದರು' ಎಂದು ಹಸೆಮಣೆ ಏರಿದ ಮಾಜಿ ನಕ್ಸಲ್ ಒಬ್ಬ ತಿಳಿಸಿದ್ದಾನೆ.
ಛತ್ತೀಸ್ಗಢದಲ್ಲಿ ತಮ್ಮ ಮುಖಂಡನನ್ನೇ ಹತ್ಯೆ ಮಾಡಿದ ನಕ್ಸಲರು
ಶರಣಾಗಿದ್ದ ನಕ್ಸಲರ ಕುಟುಂಬದವರು, ಪೊಲೀಸ್ ಅಧಿಕಾರಿಗಳು, ಸೈನಿಕರು ಮತ್ತು ಇತರೆ ಮಾಜಿ ನಕ್ಸಲರ ಸಮ್ಮುಖದಲ್ಲಿ ಈ ಮದುವೆಗಳನ್ನು ನಡೆಸಲಾಯಿತು.