Breaking: ಜಾರ್ಖಂಡ್ನ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ದುರಂತ- 14 ಮಂದಿ ಸಜೀವ ದಹನ
ಧನ್ಬಾದ್, ಜನವರಿ 31: ಜಾರ್ಖಂಡ್ನ ಧನ್ಬಾದ್ ನಗರದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಕನಿಷ್ಠ 14 ಜನರು ಸಜೀವ ದಹನಗೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
'ದೊಡ್ಡ ಪ್ರಮಾಣದ ಬೆಂಕಿಯಲ್ಲಿ 10 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ' ಎಂದು ಧನ್ಬಾದ್ ಡೆಪ್ಯುಟಿ ಕಮಿಷನರ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಜಾರ್ಖಂಡ್ನ ನಟಿ ಹತ್ಯೆ ಪ್ರಕರಣದಲ್ಲಿ ತಿರುವು: ಪತಿಯನ್ನು ಬಂಧಿಸಿದ್ದೇಕೆ ಪೊಲೀಸರು?
'ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಪಾರ್ಟ್ಮೆಂಟ್ನಲ್ಲಿ ಹಲವರು ಸೇರಿದ್ದರು. ಬೆಂಕಿ ಅವಘಡಕ್ಕೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ನಾವು ರಕ್ಷಣೆಯತ್ತ ಗಮನ ಹರಿಸುತ್ತೇವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂದು ಧನ್ಬಾದ್ ಎಸ್ಎಸ್ಪಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 160 ಕಿಮೀ ದೂರದಲ್ಲಿರುವ ಧನ್ಬಾದ್ನ ಜೋರಾಫಟಕ್ ಪ್ರದೇಶದ ಆಶೀರ್ವಾದ್ ಟವರ್ನಲ್ಲಿ ಸಂಜೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಧನ್ಬಾದ್ ಉಪ ಆಯುಕ್ತ ಸಂದೀಪ್ ಸಿಂಗ್, ಸಾವನ್ನಪ್ಪಿದ ಮತ್ತು ಗಾಯಗೊಂಡವರ ನಿಖರ ಸಂಖ್ಯೆಯನ್ನು ಇನ್ನೂ ಕಂಡುಹಿಡಿಯಬೇಕಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
'ಹಲವು ಜನರು ಕಟ್ಟಡದೊಳಗೆ ಇನ್ನೂ ಸಿಕ್ಕಿಬಿದ್ದಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಧನ್ಬಾದ್ನ ಆಶೀರ್ವಾದ್ ಟವರ್ ಅಪಾರ್ಟ್ಮೆಂಟ್ ಬೆಂಕಿಯಲ್ಲಿನ ಪ್ರಾಣಹಾನಿ ತೀವ್ರ ದುಃಖಕರವಾಗಿದೆ. ಆಡಳಿತವು ತ್ವರಿತವಾಗಿ ಸ್ಪಂದಿಸುತ್ತಿದೆ ಮತ್ತು ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡುತ್ತಿದೆ. ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ' ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಟ್ವೀಟ್ ಮಾಡಿದ್ದಾರೆ.