ತಮ್ಮನನ್ನು ಚಿರತೆಯಿಂದ ಕಾಪಾಡಿದ 11 ವರ್ಷದ ಬಾಲಕಿ
ಪೌರಿ, ಅಕ್ಟೋಬರ್ 9: ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆ ತೋರಿದ ಬಾಲಕಿಯೊಬ್ಬಳು ತನ್ನ ನಾಲ್ಕು ವರ್ಷದ ತಮ್ಮನನ್ನು ತಬ್ಬಿ ಮಲಗಿ ಚಿರತೆ ಬಾಯಿಯಿಂದ ರಕ್ಷಿಸಿದ ಮೈನವಿರೇಳಿಸುವ ಸಾಹಸ ಪ್ರದರ್ಶಿಸಿದ್ದಾಳೆ.
ಉತ್ತರಾಖಂಡದ ಪೌರಿ ಜಿಲ್ಲೆಯ ದೇವಕುಂಡೈ ತಲ್ಲಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಹೋದರನನ್ನು ಚಿರತೆ ಬಾಯಿಯಿಂದ ರಕ್ಷಿಸುವ ಹೋರಾಟದಲ್ಲಿ ಬಾಲಕಿಗೆ ತೀವ್ರ ಗಾಯವಾಗಿದ್ದು, ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಅ.4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆಯ ಹೊರಗೆ ಬಾಲಕಿ ರಾಖಿ ತನ್ನ ನಾಲ್ಕು ವರ್ಷದ ತಮ್ಮನೊಂದಿಗೆ ಆಟವಾಡುತ್ತಿದ್ದಳು. ಆಗ ಚಿರತೆಯೊಂದು ಬಾಲಕನ ಮೇಲೆ ದಾಳಿ ಮಾಡಿದೆ. ಭಯದಿಂದ ಓಡುವ ಬದಲು ಆ ಬಾಲಕಿ ಧೈರ್ಯ ತೋರಿಸಿ ತಮ್ಮನನ್ನು ಅವುಚಿಕೊಂಡು ಮಲಗಿದ್ದಾಳೆ. ಬಾಲಕನ ಮೇಲೆ ದಾಳಿ ನಡೆಸಿದ ಚಿರತೆ ಅಡ್ಡ ಬಂದ ಬಾಲಕಿಯ ಕುತ್ತಿಗೆಗೆ ಬಾಯಿ ಹಾಕಿತ್ತು. ಕೂಡಲೇ ಅಲ್ಲಿ ನೆರೆದ ಗ್ರಾಮಸ್ಥರು ಗದ್ದಲ ಮಾಡಿ ಚಿರತೆಯನ್ನು ಬೆದರಿಸಿದ್ದರಿಂದ ಅದು ಕಾಡಿಗೆ ಓಡಿಹೋಯಿತು.

ದಾಳಿಯಿಂದ ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆಕೆಗೆ ಉನ್ನತ ಮಟ್ಟದ ಚಿಕಿತ್ಸೆಗೆ ಅಗತ್ಯವಿದ್ದರಿಂದ ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು.
ಕೊನೆಗೆ ಕುಟುಂಬ ಹಲವು ಬಾರಿ ಬೇಡಿಕೊಂಡ ನಂತರ ಮಧ್ಯಪ್ರವೇಶಿಸಿದ ಉತ್ತರಾಖಂಡ ಸಚಿವ ಸತ್ಪಲ್ ಮಹಾಜನ್ ಅವರ ಸೂಚನೆ ಬಳಿಕ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಅ.7ರಂದು ದಾಖಲಿಸಲಾಯಿತು. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ರಾಖಿಯ ಚಿಕಿತ್ಸೆಗೆ ಸಚಿವರು ಒಂದು ಲಕ್ಷ ರೂ. ಸಹಾಯ ನೀಡಿದ್ದು, ಉಳಿದ ಹಣಕಾಸಿನ ನೆರವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.












Click it and Unblock the Notifications