ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?
ಈ ಅನಿಷ್ಟ ನೀತಿಯಿಂದಾಗಿಯೇ ಅಮೆರಿಕದಲ್ಲಿ ಜನಾಂಗೀಯ ನಿಂದನೆ ಶುರುವಾಗಿದ್ದು, ತನ್ನ ಮಗನ ಹತ್ಯೆಗೆ ಕೂಡ ಟ್ರಂಪ್ ಅವರ ವಲಸೆ ನೀತಿಯೇ ಕಾರಣ ಎಂದಿದ್ದಾರೆ ಮಗನನ್ನು ಕಳೆದುಕೊಂಡಿರುವ ತಾಯಿ.
ಹೈದರಾಬಾದ್, ಫೆಬ್ರವರಿ 28 : "ಇಡೀ ಅಮೆರಿಕಾನೇ ವಲಸೆಗಾರರ ದೇಶ. ಪ್ರಪಂಚದ ಎಲ್ಲ ರಾಷ್ಟ್ರಗಳಿಂದ ಜನ ಅಲ್ಲಿಗೆ ವಲಸೆ ಹೋಗುತ್ತಾರೆ. ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?"
ಇವು ಅಮೆರಿಕಾದಲ್ಲಿ ಕಳೆದವಾರ ಹತ್ಯೆಗೀಡಾದ ಹೈದರಾಬಾದ್ನ ಸಾಫ್ಟ್ ವೇರ್ ಇಂಜಿನಿಯರ್ ಶ್ರೀನಿವಾಸ ಕುಚಿಭೋತ್ಲಾನ ತಾಯಿ ಪಾರ್ವತಾ ವರ್ಧಿನಿ ಅವರು ಆಕ್ರೋಶದ ಮಾತುಗಳು. ವಲಸೆ ನೀತಿಯನ್ನು ಅಮೆರಿಕ ಸಡಲಿಸಿದರೂ ಮತ್ತೊಬ್ಬ ಮಗನನ್ನು ಅಮೆರಿಕಕ್ಕೆ ಮತ್ತೆ ಕಳಿಸಿಕೊಡಲು ಆ ತಾಯಿ ಸಿದ್ಧವಿಲ್ಲ.
ಅವರು ನೇರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯನ್ನು ಪ್ರಶ್ನಿಸಿದ್ದಾರೆ. ಈ ಅನಿಷ್ಟ ನೀತಿಯಿಂದಾಗಿಯೇ ಅಮೆರಿಕದಲ್ಲಿ ಜನಾಂಗೀಯ ನಿಂದನೆ ಶುರುವಾಗಿದ್ದು, ತನ್ನ ಮಗನ ಹತ್ಯೆಗೆ ಕೂಡ ಟ್ರಂಪ್ ಅವರ ವಲಸೆ ನೀತಿಯೇ ಕಾರಣ ಎಂದಿದ್ದಾರೆ ಮಗನನ್ನು ಕಳೆದುಕೊಂಡಿರುವ ತಾಯಿ. [ಅಮೆರಿಕಾ ಶೂಟೌಟ್: ಶ್ರೀನಿವಾಸ್ ಕುಚಿಭೋತ್ಲಾಗೆ ಅಂತಿಮ ವಿದಾಯ]
ಅಮೆರಿಕಾದ ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಕುಚಿಭೋತ್ಲಾ ಮತ್ತು ಅವರ ಸ್ನೇಹಿತ ಅಲೋಕ್ ಮದಸಾನಿಯ ಮೇಲೆ ಆ್ಯಡಂ ಪ್ಯೂರಿಟನ್ ಎಂಬಾತ, ಆಸ್ಟಿನ್ ಬಾರ್ ಅಂಡ್ ಗ್ರಿಲ್ಸ್ ನಲ್ಲಿ ಜನಾಂಗೀಯ ನಿಂದನೆ ಮಾಡಿ ಕಳೆದ ಬುಧವಾರ ಗುಂಡು ಹಾರಿಸಿದ್ದ. ಶ್ರೀನಿವಾಸ ಸಾವಿಗೀಡಾದರೆ, ಅಲೋಕ್ ಚೇತರಿಸಿಕೊಳ್ಳುತ್ತಿದ್ದಾರೆ. ['ನನಗೆ ಉತ್ತರ ಬೇಕು' ಟ್ರಂಪ್ ಗೆ ಶ್ರೀನಿವಾಸ್ ಪತ್ನಿಯ ಬೇಡಿಕೆ]
ಮಕ್ಕಳನ್ನು ಕಳೆದುಕೊಂಡ ಪಾಲಕರ ಗತಿಯೇನಾಗುತ್ತದೆ
"ಜನರ ಬಣ್ಣ ಮತ್ತು ದೇಶದ ಆಧಾರದ ಮೇಲೆ ಜನರನ್ನು ಕೊಲ್ಲುತ್ತ ಹೋದರೆ, ಮಕ್ಕಳನ್ನು ಕಳೆದುಕೊಂಡ ಪಾಲಕರ ಗತಿಯೇನಾಗುತ್ತದೆ ಎಂಬುದನ್ನು ಚಿಂತಿಸಿದ್ದೀರಾ? ಆ ಮಕ್ಕಳನ್ನು ನೀವು ಹುಟ್ಟಿಸಿದ್ದೀರಾ, ನೀವು ಬೆಳೆಸಿದ್ದೀರಾ, ನೀವು ಶಿಕ್ಷಣ ನೀಡಿದ್ದೀರಾ?" ಎಂದು ಪಾರ್ವತಾ ವರ್ಧಿನಿ ಕೆಂಡ ಕಾರಿದ್ದಾರೆ.
ನಿರ್ಭೀತ ವಾತಾವರಣದ ಸೃಷ್ಟಿ ಅನುಮಾನ
ಇಂಥ ಘಟನೆ ಘಟಿಸದಂತೆ ಅಮೆರಿಕ ಸರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಲಸಿಗರು ಭಯವಿಲ್ಲದೆ ಜೀವಿಸುವಂತಾಗಬೇಕು. ಆದರೆ, ಅಮೆರಿಕದಲ್ಲಿ ಎಲ್ಲ ವಲಸೆಗಾರರಿಗೆ ನಿರ್ಭಯದ ವಾತಾವರಣ ಸೃಷ್ಟಿಸಲು ಅಮೆರಿಕ ಯಶಸ್ವಿಯಾಗುತ್ತೆ ಎಂಬ ಬಗ್ಗೆ ಶ್ರೀನಿವಾಸ ಅವರ ತಾಯಿಗೆ ಅನುಮಾನವಿದೆ. [ಟ್ರಂಪ್ ವಲಸೆ ನೀತಿ : 3 ಲಕ್ಷ ಭಾರತೀಯ ಅಮೆರಿಕನ್ನರಿಗೆ ಕುತ್ತು]
ಗಂಡನ ದೇಹದೊಂದಿಗೆ ಬಂದ ಸುನೈನಾ
ಶ್ರೀನಿವಾಸ ಅವರ ದೇಹವನ್ನು ಸೋಮವಾರ ಹೈದರಾಬಾದಿಗೆ ತರಲಾಯಿತು. ಕನ್ಸಾಸ್ ನಲ್ಲಿ ವಾಸಿಸುತ್ತಿದ್ದ ಅವರ ಹೆಂಡತಿ ಸುನೈನಾ ದಾಮಲಾ, ಶ್ರೀನಿವಾಸದ ಸಹೋದರ ಸಾಯಿ ಕಿಶೋರ್ ಅವರು ಶ್ರೀನಿವಾಸನ ದೇಹದೊಂದಿಗೆ ಭಾರತಕ್ಕೆ ಬಂದಿದ್ದರು. ಮಂಗಳವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮಗನನ್ನು ಎಂದೂ ಅಮೆರಿಕಕ್ಕೆ ಕಳಿಸುವುದಿಲ್ಲ
ನನ್ನ ಮಕ್ಕಳಿಗೆ ಅಮೆರಿಕದಲ್ಲಿ ವಾಸಿಸುತ್ತಿರುವ ಹಲವಾರು ಭಾರತೀಯರ ಮಕ್ಕಳಂತೆ ಉತ್ತಮ ಶಿಕ್ಷಣವನ್ನು ನೀಡಿದ್ದೇವೆ. ಭಾರತದಲ್ಲಿಯೇ ಆತನಿಗೆ ಬೇಕಾದಂಥ ಉದ್ಯೋಗ ಸಿಗುತ್ತದೆ. ನಾನು ಆತನನ್ನು ಅಮೆರಿಕಕ್ಕೆ ಮತ್ತೆ ಕಳಿಸಿ ಆತನನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ಫುಟ್ಬಾಲ್ ನೋಡಲೆಂದು ಹೋಗಿದ್ದರು
ಅಮೆರಿಕದಲ್ಲಿರುವ ಬಹುರಾಷ್ಟ್ರೀಯ ಕಂಪನಿ ಜರ್ಮಿನ್ ನಲ್ಲಿ ಏವಿಯೇಷನ್ ಪ್ರೋಗ್ರಾಂ ಮ್ಯಾನೇಜರ್ ಆಗಿ ಇವರಿಬ್ಬರೂ ಕೆಲಸ ಮಾಡುತ್ತಿದ್ದರು. ಫುಟ್ಬಾಲ್ ಪಂದ್ಯವನ್ನು ದೊಡ್ಡ ಪರದೆಯ ಮೇಲೆ ನೋಡುವ ಉತ್ಸುಕತೆಯಿಂದ ಅವರಿಬ್ಬರೂ ಆಸ್ಟಿನ್ ಬಾರ್ ಅಂಡ್ ಗ್ರಿಲ್ಸ್ ಗೆ ಹೋಗಿದ್ದರು.