ಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾ
Recommended Video

ಹೈದರಾಬಾದ್, ಜುಲೈ 14: 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ನಡೆಯಬಹುದು ಎಂಬ ಅನುಮಾನ ಹಲವು ದಿನಗಳಿಂದ ಭಾರತೀಯರನ್ನು ಆವರಿಸಿದೆ. ಬಿಜೆಪಿ ನಾಯಕರ ನಡೆಯೂ ಅದಕ್ಕೆ ಪುಷ್ಠಿ ನೀಡುವಂತೆಯೇ ಇದೆ!
'ಆದರೆ ಲೋಕಸಭಾ ಚುನಾವಣೆ ಅವಧಿಗೂ ಮುನ್ನ ನಡೆಯುವುದಿಲ್ಲ. ನಿರೀಕ್ಷಿಸಿದಂತೆ ಏಪ್ರಿಲ್/ಮೇ ತಿಂಗಳಿನಲ್ಲಿಯೇ ನಡೆಯಲಿದೆ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ತೆಲಂಗಾಣದಲ್ಲಿ ನಿನ್ನೆ(ಜುಲೈ 14) ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ಅಮಿತ್ ಶಾ, 'ಟೆನ್ಷನ್ ಬಿಟ್ಬಿಡಿ, ಲೋಕಸಭೆ ಚುನಾವಣೆಗೆ ಇನ್ನೂ ಸಮಯವಿದೆ, ಪಕ್ಷ ಕಟ್ಟುವ, ಬೆಳೆಸುವ ಕೆಲಸ ಮಾಡಿ' ಎಂದು ಕಿವಿಮಾತು ಹೇಳಿದ್ದಾರೆ!

ಲೋಕಸಭಾ ಚುನಾವಣೆ ಯಾವಾಗ?
ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಪ್ರಚಾರದ ಅಖಾಡಕ್ಕೆ ಇಳಿದಿರುವುದನ್ನು ನೋಡಿದರೆ ಬಹುಶಃ ಜನವರಿಯಲ್ಲೇ ಲೋಕಸಭಾ ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಅಮಿತ್ ಶಾ ಅವರೇ ಹೇಳಿರುವುದರಿಂದ ಅವಧಿಗೂ ಮುನ್ನ ಚುನಾವಣೆ ನಡೆಯುತ್ತದೆ ಎಂಬ ವದಂತಿ ಸುಳ್ಳು ಎಂದಂತಾಗಿದೆ. 'ಲೋಕಸಭಾ ಚುನಾವಣೆಗೆ ಇನ್ನೂ ಸಮಯವಿದೆ. ಭ್ರಷ್ಟ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಡಿ' ಎಂದು ಶಾ, ತೆಲಂಗಾಣ ಬಿಜೆಪಿ ಮುಖಂಡರಿಗೆ ಕರೆನೀಡಿದ್ದಾರೆ.

ಒನ್ ನೇಶನ್ ಒನ್ ಇಲೆಕ್ಷನ್
ಅವಧಿಗೂ ಮುನ್ನವೇ ಲೋಕಸಭಾ ಚುನಾವಣೆ ನಡೆದೀತು ಎಂಬ ಅನುಮಾನ ಹುಟ್ಟುವುದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿಯವರು 'ಒನ್ ನೇಶನ್, ಒನ್ ಇಲೆಕ್ಷನ್' ಪರಿಕಲ್ಪನೆಯ ಬಗ್ಗೆ ಇತ್ತೀಚೆಗೆ ಮಾತನಾಡಿದ್ದು. ಈ ವರ್ಷದ ಡಿಸೆಂಬರ್ ನಲ್ಲಿ ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳಲ್ಲಿ ನಡೆಯಲಿರುವ ಚುನಾವಣೆಯ ನಂತರ ಲೋಕಸಭಾ ಚುನಾವಣೆಯೂ ನಡೆಯುತ್ತದೆ. ಈ ಮೂಲಕ ಒನ್ ನೇಶನ್, ಒನ್ ಇಲೆಕ್ಷನ್ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ ಅಮಿತ್ ಶಾ ಮಾತು ಈ ಊಹೆಯನ್ನು ಸುಳ್ಳು ಮಾಡಿದೆ.

ಒಂದು ದೇಶ, ಒಂದು ಚುನಾವಣೆ ಲಾಭವೇನು?
ನಮ್ಮ ದೇಶದಲ್ಲಿ ವರ್ಷದಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಚುನಾವಣೆಗಳು ಇದ್ದೇ ಇರುತ್ತವೆ. ಇದರಿಂದಾಗಿ ಸರ್ಕಾರದ ಅಧಿಕಾರಿಗಳಿಗೆ ವರ್ಷಂಪ್ರತಿ ಚುನಾವಣೆಯ ಕೆಲಸವೇ ಆಗುತ್ತದೆ. ಬೇರೆ ಅಭಿವೃದ್ಧಿ ಪರ ಕೆಲಸಗಳಿಗೆ ತಮ್ಮನ್ನು ವಿನಿಯೋಗಿಸಿಕೊಳ್ಳಲು ಸಮಯ ಸಿಕ್ಕೋಲ್ಲ. ಜೊತೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಿರುವುದಿಲ್ಲ!
ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ಒಂದರ ನಂತರ ಒಂದು ನಡೆಯುವುದರಿಂದ ಖರ್ಚನ್ನೂ ಕಡಿಮೆ ಮಾಡಬಹುದು, ಜೊತೆಗೆ ವರ್ಷದ 365 ದಿನವೂ ಒಂದಿಲ್ಲೊಂದು ಕಡೆ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಮೇಯ ಬರುವುದಿಲ್ಲ. ಪ್ರಧಾನಿ ಮೋದಿಯವರ ಈ ಪರಿಕ್ಲಪನೆಯನ್ನು ಬಿಜೆಡಿ, ವೈಎಸ್ಆರ್, ಎಸ್ಪಿ ಮುಂತಾದ ಪಕ್ಷಗಳು ಬೆಂಬಲಿಸಿದ್ದರೆ ಕಾಂಗ್ರೆಸ್, ಟಿಡಿಪಿ ಮುಂತಾದ ಪಕ್ಷಗಳು ವಿರೋಧಿಸಿವೆ. ಇದೊಂದು ಅವೈಜ್ಞಾನಿಕ ಪದ್ಧತಿ ಎಂದು ಕರೆದಿವೆ.

ಮೋದಿ ಈಗಲೇ ಅಖಾಡಕ್ಕಿಳಿದಿರುವುದೇಕೆ?
ಸರಿ, ಅಮಿತ್ ಶಾ ಅವರು ಹೇಳಿದಂತೆ ಮುಂದಿನ ವರ್ಷ ಏಪ್ರಿಲ್/ಮೇ ತಿಂಗಳಲ್ಲಿ ಚುನಾವಣೆ ಅಂದುಕೊಳ್ಳೋಣ. ಹಾಗಾದರೆ ಪ್ರಧಾನಿ ಮೋದಿ ಈಗಲೇ ಅಖಾಡಕ್ಕಿಳಿದಿರುವುದೇಕೆ? ಮಧ್ಯಪ್ರದೇಶ, ರಾಜಸ್ಥಾನಗಳಿಗೆ ಪ್ರಚಾರಕ್ಕೆ ತೆರಳಿದರೆ ಬೇರೆ ಮಾತು. ಅಲ್ಲಿ ಈ ವರ್ಷವೇ ಚುನಾವಣೆ ಇದೆ. ಆದರೆ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಮೋದಿ rally ಯೊಂದರಲ್ಲಿ ಭಾಗವಹಿಸಿ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಳೆದ ಚುನಾವಣೆಯಂತೆಯೇ ಅಮೋಘ ಪ್ರದರ್ಶನ ತೋರಲು ಮೋದಿ ಈಗಿನಿಂದಲೇ ಸಿದ್ಧತೆ ನಡೆಸುತ್ತಿರುವುದರಿಂದ ಲೋಕಸಭಾ ಚುನಾವಣೆ ಬೇಗ ನಡೆಯಬಹುದು ಎಂದು ಅಂದಾಜಿಸಲಾಗಿತ್ತು.












Click it and Unblock the Notifications