ಆಖಾಡಕ್ಕಿಳಿದ ಸೋನಿಯಾ ಗಾಂಧಿ: ಫುಲ್ ಲೆಫ್ಟ್ & ರೈಟ್ ವಾಗ್ದಾಳಿ
ಹೈದರಾಬಾದ್, ನ 23: ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖ ಸ್ಟಾರ್ ಪ್ರಚಾರಕರೊಲ್ಲಬ್ಬರಾದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಶುಕ್ರವಾರ (ನ 23) ರಾಜ್ಯದ ಮೇಡ್ಚಲ್ ನಲ್ಲಿ ನಡೆದ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ರಾಹುಲ್ ಗಾಂಧಿ ಕೂಡಾ ಸಭೆಯಲ್ಲಿ ಭಾಗವಹಿಸಿದ್ದು, ನಿರೀಕ್ಷೆಯಂತೆ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಸರಕಾರದ ಕಾರ್ಯಶೈಲಿಯ ವಿರುದ್ದ ಹರಿಹಾಯ್ಡಿದ್ದಾರೆ.
ಅಖಂಡ ಆಂಧ್ರವನ್ನು ವಿಭಜಿಸಿ, ತೆಲಂಗಾಣ ರಾಜ್ಯದ ಘೋಷಣೆ ಮಾಡಿದಾಗ, ಇಲ್ಲಿನ ಜನತೆ ಎದುರಿಸಿದ ಕಷ್ಟದ ಬಗ್ಗೆ ನಮಗೆ ಅರಿವಿದೆ, ನಾವೂ ತುಂಬಾ ತೊಂದರೆಯನ್ನು ಎದುರಿಸಿದ್ದೇವೆ. ಆದರೆ ಟಿ ಆರ್ ಎಸ್ ಸರಕಾರ, ಇಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸದೆ ಐದು ವರ್ಷದ ದುರಾಡಳಿತವನ್ನು ನೀಡಿತು ಎಂದು ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯ ನಂತರ, ನಿಮ್ಮ ಆಶೀರ್ವಾದದಿಂದ, ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದೆ. ರೈತರ ಸಮಸ್ಯೆ, ನಿರುದ್ಯೋಗ ಮುಂತಾದ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆಯಿಂದ ಕೆಲಸ ಮಾಡಲಿದ್ದೇವೆ ಎಂದು ಸೋನಿಯಾ ಹೇಳಿದ್ದಾರೆ.
ಟಿ ಅರ್ ಎಸ್ ನೀಡಿದ ಯಾವ ಭರವಸೆಯನ್ನು ಈಡೇರಿಸಿದೆ ಎಂದು ಪ್ರಶ್ನಿಸಿದ ಸೋನಿಯಾ ಅವರ ಹಿಂದಿ ಭಾಷಣವನ್ನು ತೆಲುಗಿಗೆ ಭಾಷಾಂತರ ಮಾಡಲಾಗುತ್ತಿತ್ತು. ಸಾರ್ವಜನಿಕ ಸಭೆಗೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದು, ಕಾಂಗ್ರೆಸ್ಸಿಗೆ ಹೊಸ ರಣೋತ್ಸಾಹವನ್ನು ನೀಡಿದೆ.

ಯುಪಿಎ ಸರಕಾರ ಚಾಲನೆಗೆ ತಂದಿದ್ದ, ಭೂಸ್ವಾಧೀನ ಮುಂತಾದ ಪ್ರಕ್ರಿಯೆಗಳನ್ನು ಉದ್ದೇಶಪೂರ್ವಕವಾಗಿ ಕೆಸಿಆರ್ ಸರಕಾರ ಜಾರಿಗೆ ತರಲಿಲ್ಲ. ಇದರಿಂದ ಅರ್ಥವಾಗುತ್ತದೆ, ಈಗಿನ ಸರಕಾರಕ್ಕೆ ರೈತರ ಮೇಲೆ ಯಾವ ಕಾಳಜಿಯೂ ಇಲ್ಲ ಎಂದು ಸೋನಿಯಾ ಹೇಳಿದ್ದಾರೆ.












Click it and Unblock the Notifications