ತಿರುಪತಿ ತಿಮ್ಮಪ್ಪ 5 ಸಾವಿರ ಕೆಜಿ ಚಿನ್ನದೊಡೆಯ
ತಿರುಮಲ, ಆ.3: ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಒಂದೇ ದಿನದಲ್ಲಿ ಸುಮಾರು 1,500 ಕೆ.ಜಿ ಮೌಲ್ಯದ ಚಿನ್ನಾಭರಣವನ್ನು ಭಕ್ತಾದಿಗಳು ಏಳು ಬೆಟ್ಟದ ಒಡೆಯನಿಗೆ ಅರ್ಪಿಸಿದ್ದಾರೆ. ಈ ಆಭರಣಗಳು ಈಗ ಎಸ್ ಬಿಐನಲ್ಲಿ ಜಮೆಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ ಟಿಟಿಡಿ ಇಟ್ಟಿರುವ ಠೇವಣಿ ಮೊತ್ತ ಬಹಿರಂಗವಾಗಿದೆ. ತಿರುಪತಿ ತಿಮ್ಮಪ್ಪ ಈಗ ಸುಮಾರು 5,000 ಕೆಜಿ ಚಿನ್ನದ ಒಡೆಯ ಎನಿಸಿದ್ದಾನೆ.
ಕಳೆದ ಎರಡು ವರ್ಷಗಳಿಂದ ಸಂಗ್ರಹವಾದ ಚಿನ್ನಾಭರಣವನ್ನು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎಂಜಿ ಗೋಪಾಲ್ ಅವರು ಶನಿವಾರ ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರಿಗೆ ಹಸ್ತಾಂತರಿಸಿದ್ದಾರೆ. ಇದನ್ನು ಮುಂಬೈನ ಸರ್ಕಾರಿ ಟಂಕಸಾಲೆ ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಗುವುದು ಎಂದು ಅರುಂಧತಿ ಅವರು ಹೇಳಿದ್ದಾರೆ.

ಎಸ್ ಬಿಐ ಚಿನ್ನದ ಯೋಜನೆ ಅಡಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯಿಂದ 5 ವರ್ಷಗಳ ಅವಧಿಗೆ 1800 ಕೆಜಿ ಚಿನ್ನ ಠೇವಣಿ ಪಡೆಯಲಾಗಿದೆ. ಇದಕ್ಕೆ ವಾರ್ಷಿಕ 1 % ಬಡ್ಡಿದರ ನಿಗದಿ ಪಡಿಸಲಾಗಿದ್ದು, ವಾರ್ಷಿಕ 12 ಕೆಜಿ ಚಿನ್ನ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿದೆ.
ಆರ್ ಬಿಐ ನಿರ್ಬಂಧವಿದ್ದ ಕಾರಣ ಕಳೆದ ಎರಡು ವರ್ಷಗಳ ಕಾಲ ಚಿನ್ನದ ಠೇವಣಿ ಮಾಡಲಾಗಿರಲಿಲ್ಲ. ಎಸ್ ಬಿಐನಿಂದ ಮೊದಲು ಯೋಜನೆಯ ಭಾಗವಾಗಲು ಆಹ್ವಾನ ಬಂದ ಕಾರಣ ಒಪ್ಪಿಕೊಂಡೆವು ಎಂದು ಟಿಟಿಡಿ ಅಧಿಕಾರಿ ಗೋಪಾಲ್ ಹೇಳಿದ್ದಾರೆ.
ಎಸ್ ಬಿಐ, ಕಾರ್ಪೊರೇಷನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳಲ್ಲಿಟ್ಟಿರುವ ಚಿನ್ನದ ಹೂಡಿಕೆ ಸುಮಾರು 5,000 ಕೆಜಿ ಸಮೀಪವಿದ್ದು, ವಾರ್ಷಿಕ 70 ಕೆಜಿ ಮೌಲ್ಯ ಬಡ್ಡಿ ರೂಪದಲ್ಲಿ ಸಿಗಲಿದೆ. (ಪಿಟಿಐ)












Click it and Unblock the Notifications