ಡ್ರಗ್ಸ್ ಜಾಲ: ಈವರೆಗೆ ವಿಚಾರಣೆಗೆ ಒಳಪಟ್ಟ ತೆಲುಗು ಸಿನಿ ತಾರೆಗಳು
ತಮ್ಮ ವಿರುದ್ಧ ಡ್ರಗ್ಸ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಶೇಷ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ತೆಲುಗು ಚಿತ್ರರಂಗದ ಗಣ್ಯರು. ನಿರ್ದೇಶಕ ಪೂರಿ ಜಗನ್ನಾಥ್, ನಟ ತರುಣ್ ಮತ್ತಿತರರು ಹಾಜರು.
ಹೈದರಾಬಾದ್, ಜುಲೈ 25: ತೆಲುಗು ಚಿತ್ರರಂಗವನ್ನಾವರಿಸಿರುವ ಡ್ರಗ್ಸ್ ಪೆಡಂಭೂತದ ಜಾಲದಲ್ಲಿ ತಮ್ಮನ್ನೂ ಹೆಸರಿಸಿರುವ ತನಿಖಾಧಿಕಾರಿಗಳ ವಿರುದ್ಧ ತೆಲುಗು ಚಿತ್ರ ನಟಿ ಚಾರ್ಮಿ ಕೌರ್, ಹೈದರಾಬಾದ್ ಹೈಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಡ್ರಗ್ಸ್ ಜಾಲದಲ್ಲಿ ತಮ್ಮ ವಿರುದ್ಧ ಆರೋಪ ಹೊರಿಸಿರುವುದರಿಂದ ತಮ್ಮ ಇಮೇಜ್ ಗೆ ಧಕ್ಕೆಯಾಗಿದೆ ಎಂದು ಅವರು ದೂರಿತ್ತಿದ್ದಾರೆ.
ಅಲ್ಲದೆ, ತಮ್ಮಿಂದ ಈ ಹಿಂದೆ ಪಡೆಯಲಾಗಿದ್ದ ರಕ್ತ ಮತ್ತು ಉಗುರುಗಳ ಪರೀಕ್ಷಾ ವರದಿಯಲ್ಲಿ ತಾವು ಡ್ರಗ್ಸ್ ತೆಗೆದುಕೊಂಡಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಪರೀಕ್ಷಾ ವರದಿಯು ನೈತಿಕತೆಯಿಂದ ಕೂಡಿದೆ ಎಂಬುದರ ಬಗ್ಗೆಯೇ ಅನುಮಾನಗಳಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಂದಹಾಗೆ, ಕೇವಲ ಚಾರ್ಮಿ ಮಾತ್ರ ಈ ಜಾಲದಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಹಲವಾರು ಖ್ಯಾತ ನಾಮರೂ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿದ್ದಾರೆ. ಕ್ಯಾಲ್ವಿನ್ ಮಾಸ್ಕರೆನ್ಹಾಸ್ ಎಂಬ ವ್ಯಕ್ತಿಯೇ ಈ ಎಲ್ಲಾ ಡ್ರಗ್ಸ್ ಜಾಲದ ರೂವಾರಿಯೆಂದು ಪೊಲೀಸರು ತಿಳಿಸಿದ್ದಾರೆ. ಆ ಖ್ಯಾತ ನಾಮರು ಯಾರು, ಅವರ ಹಿನ್ನೆಲೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಾದಕ ವಸ್ತು ಬಳಕೆ ಮಾಡಿಲ್ಲ ಎಂದ ನಿರ್ದೇಶಕ
ತೆಲುಗು ಚಿತ್ರರಂಗ ಕಂಡ ಸ್ಟೈಲಿಷ್ ನಿರ್ದೇಶಕ. ಇದೀಗ, ಡ್ರಗ್ಸ್ ಮಾಫಿಯಾ ಸುಳಿಯಲ್ಲಿ ಸಿಲುಕಿರುವ ಅವರು, ಇತ್ತೀಚೆಗೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದರು. ಸುಮಾರು 10 ಗಂಟೆಗಳ ಕಾಲ ಅವರ ವಿಚಾರಣೆ ನಡೆಸಲಾಯಿತು. ಆ ಸಂದರ್ಭದಲ್ಲಿ ಅವರು, ಕ್ಯಾಲ್ವಿನ್ ನನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಾವು ಮಾದಕ ವಸ್ತುಗಳನ್ನು ಬಳಸಿಲ್ಲ ಎಂದೂ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಸ್ಪಷ್ಟವಾಗಿ ಏನನ್ನೂ ಹೇಳದ ಸಿನಿಮಾಟೋಗ್ರಾಫರ್
ಇತ್ತೀಚೆಗೆ, ಅಂದರೆ ಜೂನ್ 20ರಂದು ಸಿನಿಮಾಟ್ರೋಗ್ರಾಫರ್ ಶ್ಯಾಮ್ ಕೆ. ನಾಯ್ಡು ಅವರು, ಎಸ್ಐಟಿ ಮುಂದೆ ಹಾಜರಾಗಿದ್ದಾರೆ. ತಮ್ಮೊಂದಿಗೆ ತಮ್ಮ ಆಪ್ತ ಸಹಾಯಕ ಹಾಗೂ ಸಂಬಂಧಿಯೊಬ್ಬರನ್ನೂ ಅವರು ಕರೆದುಕೊಂಡು ವಿಚಾರಣೆಗೆ ಬಂದಿದ್ದರು. ಆದರೆ, ತನಿಖಾಧಿಕಾರಿಗಳ ಮುಂದೆ ಅವರು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲವಂತೆ.

ನೇರ ಸಂಪರ್ಕ ಇವರಿಗೆ ಇಲ್ಲವಂತೆ!
ಇನ್ನು, ಬಾಹುಬಲಿ ಚಿತ್ರದಲ್ಲಿ ನಟಿಸಿರುವ ಹೆಗ್ಗಳಿಕೆ ಹೊಂದಿರುವ ಪಿ. ಸುಬ್ಬರಾಜು ಅವರು, ಜೂನ್ 21ರಂದು ವಿಚಾರಣೆಗೆ ಹಾಜರಾಗಿದ್ದರು. ಇವರ ವಿಚಾರಣೆ 12 ಗಂಟೆ ನಡೆದಿದೆ. ಆದರೆ, ಇವರು ಕ್ಯಾಲ್ವಿನ್ ಜತೆ ತಮಗೆ ನೇರ ಸಂಪರ್ಕ ಇಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

ಪಬ್ ಹೆಸರು ಪ್ರಸ್ತಾಪ
ನಟ ತರುಣ್ ಅವರನ್ನು ತನಿಖಾಧಿಕಾರಿಗಳು ಜೂನ್ 22ರಂದು ಸುಮಾರು 13 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. 2009ರಲ್ಲಿ ಪ್ರತಿಷ್ಠಿತರು ಇರುವ ಬಂಜಾರಾ ಹಿಲ್ಸ್ ನಲ್ಲಿ ಪಬ್ ಆರಂಭಿಸಿದ್ದರು. ಆ ಪಬ್ ಇದೀಗ ಡ್ರಗ್ಸ್ ಜಾಲದಲ್ಲಿ ಕಾಣಿಸಿಕೊಂಡಿರುವುದರಿಂದ ತರುಣ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸ್ವಲ್ಪ ಡಿಫರೆಂಟ್ ಉತ್ತರ ಕೊಟ್ಟ ನಟ
ಜುಲೈ 24ರಂದು ಪಲ್ಲಪೊಲ್ಲು ನವದೀಪ್ ಅವರ ವಿಚಾರಣೆ ನಡೆದಿದೆ. ಡ್ರಗ್ಸ್ ಪ್ರಕರಣದ ಸ್ಫೋಟಗೊಳ್ಳುತ್ತಲೇ ತಮ್ಮನ್ನು ವಿಚಾರಣೆಗೆ ಆಹ್ವಾನಿಸುತ್ತಾರೆಂದು ಅವರಿಗೆ ಮೊದಲೇ ಗೊತ್ತಿತ್ತಂತೆ! ಕ್ಯಾಲ್ವಿನ್ ಬಂಧನವಾದ ಕೂಡಲೇ ತನ್ನನ್ನು ವಿಚಾರಣೆಗೆ ಕರೆಯಬಹುದು ಎಂದು ಅವರಿಗೆ ಅನ್ನಿಸಿತ್ತಂತೆ. ಆದರೆ, ಕ್ಯಾಲ್ವಿನ್ ಅವರನ್ನು ತಾವು ಕೇವಲ ಇವೆಂಟ್ ಮ್ಯಾನೇಜರ್ ಆಗಿ ಬಲ್ಲೆ. ಅವರು ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರೆಂಬುದು ತಮಗೆ ಗೊತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications