ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್
ಹೈದರಾಬಾದ್, ಮಾರ್ಚ್ 19 : ಕೊರೊನಾ ಹರಡದಂತೆ ತಡೆಯಲು ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಆಂಧ್ರಪ್ರದೇಶದಲ್ಲಿ 1, ತೆಲಂಗಾಣದಲ್ಲಿ 6 ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿದೆ.
ಗುರುವಾರ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಮುಖ್ಯಸ್ಥ ವೈ. ವಿ. ಸುಬ್ಬಾ ರೆಡ್ಡಿ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ದೇವಾಲಯಕ್ಕೆ ಮಹಾರಾಷ್ಟ್ರದಿಂದ ಬಂದಿದ್ದ ಭಕ್ತರೊಬ್ಬರು ಜ್ವರ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯವನ್ನು ಮುಚ್ಚಲಾಗುತ್ತಿದೆ.

ಒಂದು ವಾರದ ತನಕ ದೇವಾಲಯವನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಪ್ರತಿ ದಿನ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತದೆ. ಪ್ರತಿದಿನ ದೇವಾಲಯಕ್ಕೆ 70 ರಿಂದ 90 ಸಾವಿರ ಭಕ್ತರು ಬರುತ್ತಾರೆ. ದೇವಾಲಯದ ಆಡಳಿತ ಮಂಡಳಿ ಬಳಿಕವೂ 30 ಸಾವಿರ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
"ನಿತ್ಯದ ಪೂಜಾ ಕಾರ್ಯಗಳನ್ನು ಅರ್ಚಕರು ನೆರವೇರಿಸಲಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ದೇವಾಲಯವನ್ನು ಮುಚ್ಚುವುದು ಅನಿವಾರ್ಯವಾಗಿದೆ" ಎಂದು ವೈ. ವಿ. ಸುಬ್ಬಾ ರೆಡ್ಡಿ ಹೇಳಿದ್ದಾರೆ.
ಮಹಾರಾಷ್ಟ್ರದ ಭಕ್ತ ಸುಮಾರು 100 ಯಾತ್ರಾರ್ಥಿ ಜೊತೆ ದೇವಾಲಯಕ್ಕೆ ಆಗಮಿಸಿದ್ದ. ಶ್ರೀ ವೆಂಕಟೇಶ್ವರ ರಾಮ ನಾರಾಯಣ ರುಯಾ ಆಸ್ಪತ್ರೆಯಲ್ಲಿ ಭಕ್ತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ.
ಜನಸಂದಣಿ ತಡೆಯಲು ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಮಾಲ್, ಚಿತ್ರಮಂದಿರಗಳನ್ನು ಮಾರ್ಚ್ 31ರ ತನಕ ಬಂದ್ ಮಾಡುವಂತೆ ಆದೇಶ ನೀಡಿದೆ.












Click it and Unblock the Notifications