ಹೈದರಾಬಾದ್ ನಿಜಾಮರ ಕದ್ದ ಟಿಫನ್ ಬಾಕ್ಸ್ ನಲ್ಲೇ ಊಟ ಮಾಡ್ತಿದ್ದ ಕಳ್ಳ
ಹೈದರಾಬಾದ್, ಸೆಪ್ಟೆಂಬರ್ 11: ಹೈದರಾಬಾದ್ ನಲ್ಲಿ ಕೆಲ ದಿನದ ಹಿಂದಷ್ಟೇ ನಿಜಾಮರ ಕಾಲದ ಚಿನ್ನದ ಟಿಫನ್ ಬಾಕ್ಸ್ ಕಳವಾಗಿತ್ತು. ಎಂಥ ಬಿಗಿ ಭದ್ರತೆ ಮಧ್ಯೆಯೂ ಚಾಲಾಕಿ ಕಳ್ಳ ಅದನ್ನು ಎಗರಿಸಿದ್ದ. ಮೂರ್ಮೂರು ಡಬ್ಬಿ ಒಳಗೊಂಡಂಥ ಕೇಜಿಗಟ್ಟಲೆ ತೂಗುವ ಚಿನ್ನದ ಟಿಫನ್ ಬಾಕ್ಸ್ ಅನ್ನು ಅಂತೂ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ವಾರದ ಹಿಂದಷ್ಟೇ ಹೈದರಾಬಾದ್ ನ ನಿಜಾಮ್ ವಸ್ತು ಸಂಗ್ರಹಾಲಯದಲ್ಲಿ ನಡೆದಿತ್ತು. ಇಲ್ಲಿ ಇಂಥ ದೊಡ್ಡ ಕಳವು ಮಾಡಿದ್ದ ಇಬ್ಬರು ಮುಂಬೈಗೆ ಪರಾರಿಯಾಗಿ, ದುಬಾರಿ ಹೋಟೆಲ್ ನಲ್ಲಿ ದಿನ ಕಳೆಯುತ್ತಿದ್ದರು.
ಆ ಟಿಫನ್ ಬಾಕ್ಸ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ನಾಲ್ಕು ಕೇಜಿಯ ಚಿನ್ನದ ಟಿಫನ್ ಬಾಕ್ಸ್ ಗೆ ವಜ್ರ, ರೂಬಿ ಮತ್ತು ಪಚ್ಚೆ ಜೋಡಿಸಲಾಗಿತ್ತು. ಇದರ ಜತೆಗೆ ರೂಬಿ-ಪಚ್ಚೆ ಒಳಗೊಂಡ ಚಿನ್ನದ ಲೋಟ, ಸಾಸರ್, ಚಮಚ ಹಾಗೂ ಟ್ರೇ ಕೂಡ ಈ ಇಬ್ಬರು ಕಳ್ಳರಿಂದ ವಶಪಡಿಸಿಕೊಳ್ಳಲಾಗಿದೆ.
ಜಗಳದ ಸಿಟ್ಟಲ್ಲಿ ತಿಂಗಳ ಮಗುವನ್ನು ನೆಲಕ್ಕೆ ಅಪ್ಪಳಿಸಿದ 'ಮಹಾತಾಯಿ'
ಮೂರ್ಮೂರು ಡಬ್ಬಿ ಒಳಗೊಂಡ ಟಿಫಿನ್ ಬಾಕ್ಸ್ ಅನ್ನು ನಿಜಾಮರು ಬಳಸಿದ್ದರೋ ಇಲ್ಲವೋ ಆದರೆ ಈ ಇಬ್ಬರು ಕಳ್ಳರ ಪೈಕಿ ಒಬ್ಬ ದಿನವೂ ಅದರಲ್ಲೇ ಊಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನೀವು ಕನ್ನಡದಲ್ಲಿ ದರ್ಶನ್ ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ ನವಗ್ರಹ ನೋಡಿದ್ದರೆ ಅದೇ ಥರದ ಕಳವು ಪ್ರಕರಣ ಇಲ್ಲಿದೆ. ಕ್ಲೈಮಾಕ್ಸ್ ಏನೇ ಇರಲಿ, ಆದರೆ ಸಾಮ್ಯತೆ ಕೆಲವಷ್ಟಿವೆ.
ಚಿನ್ನದ ಹೊದಿಕೆ ಕುರ್ ಆನ್ ಕದಿಯಲು ಬಂದಿದ್ದವರು
ಆ ವಸ್ತು ಸಂಗ್ರಹಾಲಯಕ್ಕೆ ಚಿನ್ನದ ಹೊದಿಕೆ ಇರುವ ಕುರ್ ಆನ್ ಕದಿಯಲು ಈ ಇಬ್ಬರು ನುಗ್ಗಿದ್ದಾರೆ. ಆದರೆ ಬೆಳಗಿನ ಆಜಾನ್ (ಮುಸ್ಲಿಮರ ಪ್ರಾರ್ಥನೆ) ಕೇಳಿಸಿದ್ದರಿಂದ ಭಾವನಾತ್ಮಕ ಕಾರಣಕ್ಕೋ ಅಥವಾ ಹೆದರಿಯೋ ಅದನ್ನು ಕದಿಯದೆ ಬೇರೆ ವಸ್ತುಗಳ ಮೇಲೆ ಕೈ ಇರಿಸಿದ್ದಾರೆ. ಈಗ ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳ ಚಿನ್ನದ ತೂಕದ ಮೌಲ್ಯವೇ 1 ಕೋಟಿ ಆಗುತ್ತದೆ. ಆದರೆ ಇದಕ್ಕೆ ಇರುವ ಅಂತರರಾಷ್ಟ್ರೀಯ ಮೌಲ್ಯ 30ರಿಂದ 40 ಕೋಟಿ ರುಪಾಯಿ ಎಂದು ಹೈದರಾಬಾದ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
32 ತಂಡಗಳನ್ನು ರಚಿಸಲಾಗಿತ್ತು
ವಸ್ತುಸಂಗ್ರಹಾಲಯದ ಯಾವುದೇ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಗುರುತು ದಾಖಲಾಗಿರಲಿಲ್ಲ. ಆದರೆ ಒಂದು ಕಡೆ ಇಬ್ಬರು ಬೈಕ್ ನಲ್ಲಿ ತೆರಳುವುದು ಸೆರೆಯಾಗಿತ್ತು. ಆ ಚಿತ್ರದಲ್ಲಿ ಮುಖ ಸ್ಪಷ್ಟವಾಗಿ ಗೋಚರ ಆಗದಿದ್ದರೂ ಹಿಂಬದಿ ಸವಾರ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿರುವಂತೆ ದೃಶ್ಯ ಕಂಡುಬಂದಿತ್ತು. ಆ ನಂತರ 32 ತಂಡಗಳನ್ನು ರಚಿಸಿ, ಸುತ್ತಮುತ್ತಲ ಮುನ್ನೂರು ಮೊಬೈಲ್ ಟವರ್ ಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಆದರೆ ತಮಾಷೆ ಏನೆಂದರೆ ಸಿಮ್ ಇಲ್ಲದ ಫೋನ್ ನಲ್ಲಿ ಮಾತನಾಡುವ ನಟನೆ ಮಾಡಿದ್ದ ಕಳ್ಳ ಆ ಮೂಲಕ ಪೊಲೀಸರ ದಾರಿ ತಪ್ಪಿಸಿದ್ದ. ಯಾವ ಕಳ್ಳರು ಈ ರೀತಿಯ ತಂತ್ರ ಬಳಸಿ ಕಳವು ಮಾಡುತ್ತಾರೆ ಎಂದು ಮೂವತ್ತು-ನಲವತ್ತು ಪ್ರಕರಣಗಳ ಪರಿಶೀಲನೆ ನಡೆಸಿ, ವೆಂಟಿಲೇಟರ್ ಮೂಲಕ ಒಳ ನುಗ್ಗಬಹುದಾದಷ್ಟು ಸಣ್ಣ ದೇಹದ ಮನುಷ್ಯ ಯಾರು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ಚಾರ್ ಮಿನಾರ್ ಪ್ರದೇಶದಲ್ಲಿ ದೃಶ್ಯ ಸೆರೆಯಾಗಿತ್ತು
ಕೊನೆಗೆ ಚಾರ್ ಮಿನಾರ್ ಪ್ರದೇಶದಲ್ಲಿ ಸರ್ವೇಲನ್ಸ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯದಲ್ಲಿ ಬೈಕ್ ನ ರೇಡಿಯೇಟರ್ ಕಲ್ಲಿಗೆ ಬಡಿದು ನಿಂತಿದ್ದು ಕಂಡುಬಂದಿದೆ. ಅದೇ ರೀತಿ ಬೈಕ್ ರೇಡಿಯೇಟರ್ ಸಮಸ್ಯೆಯೊಂದಿಗೆ ಜಹೀರಾಬಾದ್ ಜಿಲ್ಲೆಯಲ್ಲಿ ಪೊಲೀಸರಿಗೆ ತಗಲ್ಹಾಕಿಕೊಂಡಿದೆ. ಸರ್ವೇಲನ್ಸ್ ನಲ್ಲಿ ಸೆರೆಯಾಗಿದ್ದ ಬೈಕ್ ಹಾಗೂ ಈಗ ಸಿಕ್ಕಿದ್ದು ಎರಡೂ ಒಂದೇ ಎಂಬುದು ಗೊತ್ತಾಗಿದೆ.
ಮುಂಬೈನಲ್ಲಿ ಖರೀದಿದಾರರು ಸಿಕ್ಕಿಲ್ಲ
ಮುಂಬೈಗೆ ಪರಾರಿಯಾಗಿದ್ದ ಕಳ್ಳರು ಅಲ್ಲಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕೆಲ ದಿನ ಮಜವಾಗಿ ಕಳೆದಿದ್ದಾರೆ. ಅವರಿಗೆ ಅಲ್ಲಿ ಕದ್ದ ಮಾಲಿಗೆ ಖರೀದಿದಾರರು ಸಿಕ್ಕಿಲ್ಲ. ಬೇರೆ ದಾರಿ ಇಲ್ಲದೆ ವಾಪಸಾಗಿದ್ದಾರೆ. ಆ ನಂತರ ಅವರಿಬ್ಬರು ಸಿಕ್ಕಿಬಿದ್ದಿದ್ದು, ವಿಚಾರಣೆ ಮಾಡಲಾಗಿದೆ. ಮುಖ್ಯ ಆರೋಪಿ ಘೌಸ್ ಗೆ ಇಪ್ಪತ್ತೈದು ವರ್ಷ. ವೃತ್ತಿಪರ ಕಬ್ಬಿಣದ ಕೆಲಸಗಾರ. ಅನೇಕ ದರೋಡೆಗಳನ್ನು ಮಾಡಿದ್ದಾನೆ. ಇಪ್ಪತ್ತಾರು ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾದವನು. ಆತನಿಗೆ ತಾನು ಬಹಳ ಹೆಸರು ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಕೂಡ ಇತ್ತು. ಮ್ಯೂಸಿಯಂ ಗೋಡೆಯ ಮೇಲೆ ಇದ್ದ ಎರಡು ಗುರುತುಗಳ ಸಹಾಯದಿಂದ ಇದನ್ನು ವೃತ್ತಿಪರ ಕಬ್ಬಿಣದ ಕೆಲಸಗಾರನೇ ಮಾಡಿರಬೇಕು ಎಂದು ಪೊಲೀಸರು ನಿರ್ಧರಿಸಿದ್ದರು. ಈತನ ಸಹಚರ ಸಣ್ಣ ವಯಸ್ಸಿನವನು. ಆದರೆ ಅವನೇ ಮಾಸ್ಟರ್ ಮೈಂಡ್. ಕೆಲವು ತಿಂಗಳ ಹಿಂದೆ ಪ್ರವಾಸಿಯಂತೆ ನಿಜಾಮ್ ಮ್ಯೂಸಿಯಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವನಿಗೆ ಈ ಆಲೋಚನೆ ಬಂದಿತ್ತು. ಇವರಿಬ್ಬರು ಕೃತ್ಯ ಎಸಗುವ ಮುಂಚೆ ಐದರಿಂದ ಆರು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.