ತೆಲಂಗಾಣದಲ್ಲಿ ಮಹತ್ವದ ಸಭೆ: ವಿಧಾನಸಭೆ ವಿಸರ್ಜನೆ ಸಾಧ್ಯತೆ
ಹೈದರಾಬಾದ್, ಆಗಸ್ಟ್ 06: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇಂದು ಮಹತ್ವದ ಸಭೆ ಕರೆದಿದ್ದು, ನಂತರ ತೆಲಂಗಾಣ ವಿಧಾನಸಭೆ ಅವಧಿಗೂ ಮುನ್ನವೇ ವಿಸರ್ಜನೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸಂಖ್ಯೆ '6' ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡ ಕೆಸಿಆರ್ ಅವರ ಅದೃಷ್ಟ ಸಂಖ್ಯೆಯಾಗಿದ್ದು ಸೆಪ್ಟೆಂಬರ್ 6 (ಇಂದು) ಈ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ತೆಲಂಗಾಣ ವಿಧಾನಸಭೆಯ ಕಾಲಾವಧಿ 2019 ರ ಮೇ ತಿಂಗಳಿನಲ್ಲಿ ಅಂತ್ಯವಾಗುತ್ತಿತ್ತು.
ಸೆ. 2ಕ್ಕೆ ಕೆಸಿಆರ್ ರಿಂದ ತೆಲಂಗಾಣ ವಿಧಾನಸಭೆ ವಿಸರ್ಜನೆ ಘೋಷಣೆ?
ವಿಧಾನಸಭೆ ವಿಸರ್ಜನೆಯಾದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ಈ ಮೂರು ರಾಜ್ಯಗಳ ಚುನಾವಣೆಯೊಟ್ಟಿಗೆ ಈ ರಾಜ್ಯದಲ್ಲೂ ಚುನಾವಣೆ ನಡೆಸುವ ಸಾಧ್ಯತೆ ಇದೆ.
ಕಳೆದ ಭಾನುವಾರ ಅಂದರೆ ಸೆಪ್ಟೆಂಬರ್ 02 ರಂದೇ ಕೆಸಿಆರ್ ಈ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿತ್ತು. ಕಳೆದ ವಾರವಷ್ಟೇ ಕೆಸಿಆರ್ ಅವರು ದೆಹಲಿ ಪ್ರವಾಸ ಕೈಗೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಸಹ ಭೇಟಿಯಾಗಿದ್ದರು. ಈ ಬೆಳವಣಿಗೆಯ ನಂತರ ವಿಧಾನಸಭೆ ವಿಸರ್ಜನೆಯ ಅನುಮಾನ ದಟ್ಟವಾಗಿತ್ತು.