ತೆಲಂಗಾಣ: ದುಬ್ಬಾಕದಲ್ಲಿ ಬಿಜೆಪಿಗೆ ಅಚ್ಚರಿಯ ಗೆಲುವು ಸಿಗಬಹುದು ಎಂದ ರಾಮ್ ಮಾಧವ್
ಹೈದರಾಬಾದ್, ನವೆಂಬರ್ 10: ತೆಲಂಗಾಣದ ದುಬ್ಬಾಕ ಉಪ ಚುನಾವಣೆಯ ಮತ ಎಣಿಕೆಯ ಆರಂಭಿಕ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕೇಸರಿ ಪಕ್ಷಕ್ಕೆ ಅಚ್ಚರಿಯ ಫಲಿತಾಂಶ ಸಿಗಲಿದೆ ಎಂದು ಬಿಜೆಪಿ ಮುಖಂಡ ರಾಮ್ ಮಾಧವ್ ಭರವಸೆ ವ್ಯಕ್ತಪಡಿಸಿದ್ದಾರೆ.
'ತೆಲಂಗಾಣದಲ್ಲಿ ಬಿಜೆಪಿ ಮತ್ತು ಟಿಆರ್ಎಸ್ ಅಭ್ಯರ್ಥಿ ನಡುವೆ ದುಬ್ಬಾಕ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಸಕ್ತಿಕರ ಜಿದ್ದಾಜಿದ್ದಿ ನಡೆಯುತ್ತಿದೆ. ಬಿಜೆಪಿ ಪ್ರಸ್ತುತ ಮುನ್ನಡೆ ಸಾಧಿಸಿದೆ. ಇದು ಬಿಜೆಪಿಗೆ ಅಚ್ಚರಿಯ ಗೆಲುವಾಗಬಹುದು' ಎಂದು ರಾಮ್ ಮಾಧವ್ ಹೇಳಿದ್ದಾರೆ.
ದುಬ್ಬಾಕ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯು ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಚುನಾವಣೆಯ ಮಹತ್ವದ್ದೆನಿಸದೆ ಇದ್ದರೂ ಅದರ ಸುತ್ತಲಿನ ಸಂಗತಿಗಳು ಕುತೂಹಲಕ್ಕೆ ಕಾರಣವಾಗಿವೆ. ಆಡಳಿತಾರೂಢ ಟಿಆರ್ಎಸ್ಗೆ ದುಬ್ಬಾಕ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಧಿಕಾರ ವಿರೋಧಿ ಅಲೆಯು ಇಲ್ಲಿ ಗೆದ್ದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದು ನೆರೆಯ ಪ್ರಮುಖ ಕ್ಷೇತ್ರಗಳನ್ನೂ ಆವರಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಹಣಕಾಸು ಸಚಿವ ಮತ್ತು ಟಿಆರ್ಎಸ್ನ ಚುನಾವಣಾ ಪ್ರಚಾರ ಪರಿಣತ ಹರೀಶ್ ರಾವ್ ಸ್ವತಃ ಅಭ್ಯರ್ಥಿ ಸೊಲಿಪೆಟಾ ಸುಜಾತಾ ಪರ ಪ್ರಚಾರದ ನೇತೃತ್ವ ವಹಿಸಿದ್ದರು.

ಕಳೆದ ಮೂರು ತಿಂಗಳಿನಿಂದ ಈ ಕ್ಷೇತ್ರವು ತೀವ್ರ ಕುತೂಹಲದ ಕದನಕ್ಕೆ ಸಾಕ್ಷಿಯಾಗಿದೆ. ಅಷ್ಟೇನೂ ಪ್ರಮುಖವಲ್ಲದ ಸಾಮಾನ್ಯ ಕ್ಷೇತ್ರವಾಗಿದ್ದರೂ ಟಿಆರ್ಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ತ್ರಿಕೋನ ಸ್ಪರ್ಧೆ ಇದೆ.
ದುಬ್ಬಾಕ ಕ್ಷೇತ್ರವು ಗಜ್ವೆಲ್ ಕ್ಷೇತ್ರದ ಪಕ್ಕದಲ್ಲಿದೆ. ಗಜ್ವೆಲ್ ಮುಖ್ಯಮಂತ್ರಿ ಸಿ ಚಂದ್ರಶೇಖರ್ ರಾವ್ ಅವರ ಕ್ಷೇತ್ರ. ಉತ್ತರ ಭಾಗದಲ್ಲಿ ಮುಖ್ಯಮಂತ್ರಿಯ ಮಗ, ಐಟಿ ಸಚಿವ ಕೆಟಿ ರಾಮ ರಾವ್ ಅವರ ಸಿರ್ಕಿಲಾ ಕ್ಷೇತ್ರವಿದೆ. ಅದರ ಪೂರ್ವದ ಸಿದ್ದಿಪೇಟ್, ಮುಖ್ಯಮಂತ್ರಿಯ ಸೋದರಳಿಯ ಹರೀಶ್ ರಾವ್ ಅವರ ಪ್ರಾಬಲ್ಯ ಇರುವ ಕ್ಷೇತ್ರ. ಹೀಗಾಗಿ ಈ ಮೂವರಿಗೂ ದುಬ್ಬಾಕ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸುವುದು ಅನಿವಾರ್ಯವಾಗಿದೆ. ಆದರೆ ಬಿಜೆಪಿ ಮುನ್ನಡೆ ಸಾಧಿಸಿದೆ.












Click it and Unblock the Notifications