ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ
Recommended Video

ಹೈದರಾಬಾದ್, ಡಿಸೆಂಬರ್ 11: ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರವನ್ನೂ ಮೀರಿ ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಭಾರಿ ಜಯಭೇರಿ ಭಾರಿಸಿದೆ.
ಈ ಮೂಲಕ ಸತತ ಎರಡನೆಯ ಬಾರಿ ಟಿಆರ್ ಎಸ್ ಅಧಿಕಾರಕ್ಕೆ ಬಂದಿದೆ. ಹಾಗೆಯೆ ಕೆ. ಚಂದ್ರಶೇಖರ್ ರಾವ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಗದ್ದುಗೆ ಏರಲಿದ್ದಾರೆ.
ನಿಚ್ಚಳ ಬಹುಮತ ಪಡೆದುಕೊಂಡಿರುವುದರಿಂದ ಕೆ. ಚಂದ್ರಶೇಖರ್ ರಾವ್ ಅವರಿಗೆ ಸರ್ಕಾರ ರಚನೆ ಹಾದಿ ಸುಗಮವಾಗಿದೆ. ಗೆದ್ದ ಹುಮ್ಮಸ್ಸಿನಲ್ಲಿರುವ ಅವರು, ಇಂದೇ ರಾಜ್ಯಪಾಲರನ್ನು ಭೇಟಿ ಮಾಡಿ ಬುಧವಾರವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದಾಗಿ ಘೋಷಿಸಿದ್ದಾರೆ.

ಸರ್ಕಾರ ರಚನೆ ಸಂಬಂಧ ಸಂಜೆ ನಾಲ್ಕು ಗಂಟೆ ಸುಮಾರಿಗೆ ಟಿಆರ್ ಎಸ್ ಪಕ್ಷದ ಸಭೆ ಕರೆದಿರುವ ಚಂದ್ರಶೇಖರ್ ರಾವ್, ಪಕ್ಷದ ಶಾಸಕರು ಮತ್ತು ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
119 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಹುಮತ ಗಳಿಸಲು 60 ಸೀಟುಗಳು ಬೇಕು. ತೆಲಂಗಾಣ ರಾಜ್ಯ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ 63 ಸೀಟುಗಳಲ್ಲಿ ಗೆದ್ದಿದ್ದ ಟಿಆರ್ ಎಸ್ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.
ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿದ್ದ ಕೆಸಿಆರ್, ಬೇಗನೆ ಚುನಾವಣೆಗೆ ಮುಂದಾಗಿದ್ದರು.
ಈ ಬಾರಿ ಕಾಂಗ್ರೆಸ್ ಮತ್ತು ಟಿಡಿಪಿ ಹಾಗೂ ಇತರೆ ಕೆಲವು ಪಕ್ಷಗಳು ಜೊತೆಗೂಡಿ ಟಿಆರ್ ಎಸ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದವು. ಆದರೆ, ತೆಲಂಗಾಣದ ಮತದಾರರು ಕೆಸಿಆರ್ ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಟಿಆರ್ ಎಸ್ ವಿರುದ್ಧದ ಮಹಾಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದೆ.












Click it and Unblock the Notifications