ಅಂಧ ಮಕ್ಕಳನ್ನು ಬೆತ್ತದಿಂದ ನಿರ್ದಯವಾಗಿ ಬಾರಿಸಿದ ಶಿಕ್ಷಕ

ಹತ್ತು ವರ್ಷಕ್ಕಿಂತ ಕೆಳಗಿನ ಮೂವರು ಅಂಧ ಮಕ್ಕಳ ಬೆನ್ನಿನ ಮೇಲೆ ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ ವ್ಯಕ್ತಿ ಹಿಗ್ಗಾಮುಗ್ಗಾ ಬಾರಿಸುತ್ತಿರುವ ಮೂರು ನಿಮಿಷಗಳ ವಿಡಿಯೋ ಹೃದಯ ಹಿಂಡುವಂತಿದೆ. ಈ ವಿಡಿಯೋ ತುಣುಕನ್ನು ಮೊಬೈಲ್ ಬಳಸಿ ಚಿತ್ರೀಕರಿಸಲಾಗಿದೆ.
ಆ ಬಾಲಕನನ್ನು ಥಳಿಸಲು ಅನುಕೂಲವಾಗಲೆಂದು ಮತ್ತೊಬ್ಬ ವ್ಯಕ್ತಿ ಬಾಲಕನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಕಪ್ಪು ಕನ್ನಡಕ ಧರಿಸಿದ್ದ ವ್ಯಕ್ತಿ ಬೆತ್ತ ಹಿಡಿದುಕೊಂಡು ಬಾರಿಸುತ್ತಿರುವ ದೃಶ್ಯ ಎಂಥವರನ್ನೂ ಮನಕಲಕುವಂತೆ ಮಾಡುತ್ತದೆ. ಈ ರೀತಿ ನಿರ್ದಯವಾಗಿ ಥಳಿಸಲು ಕಾರಣವಾದರೂ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಬಾಲಕನ ಶರ್ಟನ್ನು ಹಿಡಿದು ಎಳೆದಾಡಿದ (ಅ)ಶಿಕ್ಷಕ ಆತನ ತಲೆಯನ್ನು ಗೋಡೆಗೆ ಘಟ್ಟಿಸಿದ್ದಾನೆ. ನೋವನ್ನು ತಡೆಯಲಾರದೆ ಬಾಲಕ ಬೆತ್ತವನ್ನು ಹಿಡಿದು, ಹೊಡೆಯಬೇಡಿರೆಂದು ಗೋಗರೆಯುತ್ತಿದ್ದರೂ ಕೇಳದ ಶಿಕ್ಷಕ ಬೆತ್ತವನ್ನು ಕಸಿದುಕೊಂಡು ಮನಸೋಯಿಚ್ಛೆ ಹೊಡೆದಿದ್ದಾನೆ. [ವಿಬ್ ಗಯಾರ್ ಪ್ರಕರಣ : ಆರೋಪಿ ಮುಸ್ತಫಾ ಬಂಧನ]
ಕಾಕಿನಾಡದ ಪೊಲೀಸರ ಪ್ರಕಾರ, ಈ ಘಟನೆ ಗ್ರೀನ್ಫೀಲ್ಡ್ ವಸತಿ ಶಾಲೆಯಲ್ಲಿ ನಡೆದಿದ್ದು, ಮಕ್ಕಳನ್ನು ಮನಬಂದಂತೆ ಥಳಿಸಿದ ವ್ಯಕ್ತಿ ಮತ್ತು ಶಾಲೆಯ ಪ್ರಿನ್ಸಿಪಾಲ್ರನ್ನು ಬಂಧಿಸಲಾಗಿದೆ. ರಾಜ್ಯದ ಮಕ್ಕಳ ಹಕ್ಕು ಸಮಿತಿ ಈ ಘಟನೆಯ ತನಿಖೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದೆ. ವಸತಿ ಶಾಲೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.
ಶಿಕ್ಷಕನನ್ನು ಥಳಿಸಿದ ಪೋಷಕರು : ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಶಾಲೆಗೆ ನುಗ್ಗಿದ ಮಕ್ಕಳ ಪೋಷಕರು ಶಿಕ್ಷಕನನ್ನು ಮತ್ತು ಮ್ಯಾನೇಜರನ್ನು ಹಿಡಿದು ಯದ್ವಾತದ್ವಾ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications