ತಾರಕಕ್ಕೇರಿದ ಟಿಡಿಪಿ-ಬಿಜೆಪಿ ಸಮರ; ಕೇಂದ್ರ ಸಂಪುಟದಿಂದ ಟಿಡಿಪಿ ಹೊರಕ್ಕೆ
ಅಮರಾವತಿ, ಮಾರ್ಚ್ 8: ಬುಧವಾರ ಸಂಜೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿ ನಡೆಸಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಿಗೆ ಟಿಡಿಪಿ ಮತ್ತು ಬಿಜೆಪಿ ನಡುವಿನ ಕಿತ್ತಾಟ ತಾರಕ್ಕೇರಿದೆ.
ಟಿಡಿಪಿ ಎನ್.ಡಿ.ಎ ಮೈತ್ರಿಕೂಟದಿಂದ ಹೊರ ನಡೆಯುವ ಗಂಭೀರ ಬೆದರಿಕೆ ಹಾಕಿದ್ದು ಇದರ ಮೊದಲ ಯತ್ನವಾಗಿ ಇಬ್ಬರು ಟಿಡಿಪಿ ಸಂಸದರು ಕೇಂದ್ರ ಸಂಪುಟಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ. ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈಎಸ್ ಚೌಧರಿ ರಾಜೀನಾಮೆ ನೀಡಿಲಿದ್ದಾರೆ.
ಇದಾದ ಬೆನ್ನಿಗೆ ಇಂದು ಆಂಧ್ರ ಪ್ರದೇಶದ ಟಿಡಿಪಿ ಸಂಪುಟದಲ್ಲಿದ್ದ ಬಿಜೆಪಿ ಶಾಸಕರಾದ ಡಾ. ಕಾಮಿನೇನಿ ಶ್ರೀನಿವಾಸ್ ಮತ್ತು ಪೈದಿಕೊಂಡಲ ಮಾಣಿಕ್ಯಲ ರಾವ್ ರಾಜೀನಾಮೆ ನೀಡಿದ್ದಾರೆ.

ಬುಧವಾರ ಸಂಜೆ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿ ಬೆನ್ನಿಗೆ ತನ್ನ ಸಂಸದರ ಜತೆ ಚಂದ್ರಬಾಬು ನಾಯ್ಡು ಸಭೆ ನಡೆಸಿದ್ದರು. ಬಳಿಕ ಕೇಂದ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಚಂದ್ರಬಾಬು ನಾಯ್ಡು,"ನಮ್ಮ ನಿರ್ಧಾರದ ಬಗ್ಗೆ ಕನಿಷ್ಠ ಮಾಹಿತಿ ನೀಡೋಣ ಎಂದು ಪ್ರಧಾನಿಯವರ ಬಳಿ ಮಾತನಾಡಲು ಯತ್ನಿಸಿದೆ. ಆದರೆ ಅವರು ಕರೆಗೆ ಸಿಗಲಿಲ್ಲ. ನಾನು ಏನು ತಪ್ಪು ಮಾಡಿದೆ ಎಂದು ನನಗೆ ಗೊತ್ತಿಲ್ಲ," ಎಂಬುದಾಗಿ ಹೇಳಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಸಂಬಂಧವನ್ನು ಕೇಂದ್ರ ಸರಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ ನಾಯ್ಡು, "ಕೇಂದ್ರ ಸಮಸ್ಯೆಯನ್ನು ಸೃಷ್ಟಿಸಬಹುದು. ಆದರೆ, ನಮಗೆ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಕಟು ಶಬ್ದಗಳ್ಲಲಿ ಹೇಳಿದ್ದಾರೆ.
"ಇಬ್ಬರು ಸಚಿವರು ರಾಜೀನಾಮೆ ನೀಡಿದ್ದು ಮೊದಲ ಹೆಜ್ಜೆ. ನಾವು ಇತರ ಕ್ರಮಗಳನ್ನು ಸದ್ಯದಲ್ಲೇ ತೆಗೆದುಕೊಳ್ಳಲಿದ್ದೇವೆ," ಎಂದು ಚಂದ್ರಬಾಬು ನಾಯ್ಡು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಇನ್ನು ಇಂದು ಸದನದಲ್ಲಿ ಮಾತನಾಡಿರುವ ನಾಯ್ಡು, "ನಿನ್ನೆ ಅರುಣ್ ಜೇಟ್ಲಿ ಮಾತನಾಡಿದ್ದ ಸರಿ ಇರಲಿಲ್ಲ. ನೀವು ಈಶಾನ್ಯ ಭಾರತದ ರಾಜ್ಯಗಳ ಕೈ ಹಿಡಿಯುತ್ತೀರಿ, ಆದರೆ ಆಂಧ್ರ ಪ್ರದೇಶದ ಸಹಾಯಕ್ಕೆ ಬರುವುದಿಲ್ಲ. ಅವರಿಗೆ ಕೈಗಾರಿಕಾ ಉತ್ತೇಜನ ನೀಡುತ್ತೀರಿ. ಆದರೆ, ಆಂಧ್ರಕ್ಕೆ ನೀಡುವುದಿಲ್ಲ. ಯಾಕೆ ಈ ತಾರತಮ್ಯ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications