ರೈಲು ನಿಲ್ದಾಣದ ಪ್ಲಾಟ್ ಫಾರಂ ದರ ಮತ್ತೆ ಹೆಚ್ಚಳ
ಹೈದರಾಬಾದ್, ಜನವರಿ 11; ಹಬ್ಬದ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನಸಂದಣಿ ಸೇರುವುದನ್ನು ತಡೆಯಲು ನೈಋತ್ಯ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಇದು ತಾತ್ಕಾಲಿಕ ಏರಿಕೆಯಾಗಿದ್ದು, ಜನವರಿ 20ರ ತನಕ ಜಾರಿಯಲ್ಲಿರುತ್ತದೆ.
ರೈಲು ನಿಲ್ದಾಣದಲ್ಲಿ ಹೆಚ್ಚು ಜನರು ಸೇರಿದರೆ ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟವಾಗಲಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಮಾಡಿದಂತೆ ಪ್ಲಾಟ್ ಫಾರಂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.
ವಿವಿಧ ರೈಲು ನಿಲ್ದಾಣದಲ್ಲಿ 10 ರೂ. ಇದ್ದ ಪ್ಲಾಟ್ ಫಾರಂ ದರವನ್ನು 20 ರಿಂದ 50 ರೂ.ಗಳ ತನಕ ಏರಿಕೆ ಮಾಡಲಾಗಿದೆ. ಸಂಕ್ರಾಂತಿ ಹಬ್ಬಕ್ಕಾಗಿ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸುತ್ತಿದ್ದು ಈ ಸಂದರ್ಭದಲ್ಲಿ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ.

ಜನವರಿ 14 ಮತ್ತು 15ರಂದು ದೇಶದಲ್ಲಿ ಮಕರ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಹ ಪಾಲನೆ ಮಾಡುವುದು ಅನಿವಾರ್ಯವಾಗಿದೆ.
ವಿವಿಧ ರಾಜ್ಯಗಳು ಕೋವಿಡ್ ಹರಡುವಿಕೆ ತಡೆಯಲು ಈಗಾಗಲೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿವೆ. ವಿವಿಧ ರಾಜ್ಯಗಳ ರೈಲು ಪ್ರಯಾಣಿಕರಿಗೆ ಲಸಿಕೆ ಪಡೆದ ಪ್ರಮಾಣ ಪತ್ರ, ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆ ವರದಿ ಕಡ್ಡಾಯಗೊಳಿಸಲಾಗಿದೆ.
ಯಾವ-ಯಾವ ನಿಲ್ದಾಣಗಳು?; ಸಿಕಂದರಾಬಾದ್ 50 ರೂ., ಹೈದರಾಬಾದ್ 20 ರೂ., ವಾರಂಗಲ್ 20 ರೂ., ಖುಮ್ಮುಂ 20 ರೂ., ಲಿಂಗಂಪಲ್ಲಿ 20, ಕಾಜಿಪೇಟೆ 20, ಮಹಬೂಬಾಬಾದ್ 20, ರಾಮಗುಂಡಂ 20, ಮಂಚಿರ್ಯಾಲ್ 20, ಭದ್ರಾಚಲಂ ರಸ್ತೆ 20, ವಿಕಾರಾಬಾದ್ 20, ತಾಂಡೂರು 20, ಬೀದರ್ 20, ಪಾರ್ಲಿ ವೈಜನಾಥ್ 20, ಬೇಗಂಪೇಟೆ 20 ರೂ. ಗೆ ಏರಿಕೆ ಮಾಡಲಾಗಿದೆ.
ಹಬ್ಬದ ಸಂದರ್ಭಕ್ಕೆ ಮಾತ್ರ ಅನ್ವಯವಾಗುವಂತೆ ಪ್ಲಾಟ್ ಫಾರಂ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ. ಜನವರಿ 20ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಮಂಗಳವಾರದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 1,68,063 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 24 ಗಂಟೆಯಲ್ಲಿ 69,959 ಜನರು ಗುಣಮುಖಗೊಂಡಿದ್ದಾರೆ. 277 ಜನರು ಮೃತಪಟ್ಟಿದ್ದಾರೆ.
ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 8,21,446 ಆಗಿದೆ. ಪ್ರತಿದಿನದ ಪಾಸಿಟಿವಿಟಿ ದರ ಶೇ 10.64 ಆಗಿದೆ. ದೇಶದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 4,461. ಈ ಹಿನ್ನಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲೇಬೇಕಿದೆ.
ಹಿಂದೆಯೂ ಏರಿಕೆಯಾಗಿತ್ತು; ಕೋವಿಡ್ ಮೊದಲ ಮತ್ತು 2ನೇ ಅಲೆ ಸಂದರ್ಭದಲ್ಲಿಯೂ ಭಾರತೀಯ ರೈಲ್ವೆ ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ದರವನ್ನು ಏರಿಕೆ ಮಾಡಿತ್ತು. 10 ರೂ. ಇದ್ದ ದರವನ್ನು 50 ರೂ.ಗೆ ಏರಿಕೆ ಮಾಡಿತ್ತು. ಇದರಿಂದಾಗಿ ರೈಲು ನಿಲ್ದಾಣಕ್ಕೆ ಆಗಮಿಸುವ ಜನರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು. ಪ್ಲಾಟ್ ಫಾರಂ ಟಿಕೆಟ್ ದರ ಏರಿಕೆಗೆ ಜನರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ಬಿಡಲು ಮತ್ತು ಕರೆದುಕೊಂಡು ಹೋಗಲು ನೂರಾರು ಜನರು ಆಗಮಿಸಲಿದ್ದಾರೆ. ಆದ್ದರಿಂದ ಜನಸಂದಣಿ ಉಂಟಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟವಾಗಲಿದೆ. ಹೀಗಾಗಿ ಮತ್ತೆ ಪ್ಲಾಟ್ ಫಾರಂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.
ಕೋವಿಡ್ ಪರಿಸ್ಥಿತಿಯಲ್ಲಿ ರದ್ದುಗೊಳಿಸಿದ್ದ ಹಲವಾರು ರೈಲುಗಳ ಸಂಚಾರವನ್ನು ಈಗ ಮತ್ತೆ ಆರಂಭಿಸಲಾಗಿದೆ. ಅಲ್ಲದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಜನ ಸಂದಣಿ ತಡೆಯಲು ಹಲವಾರು ವಿಶೇಷ ರೈಲುಗಳನ್ನು ಓಡಿಸುತ್ತಿದೆ.












Click it and Unblock the Notifications