ಹೈದರಾಬಾದ್: ಒಂದೇ ಕುಟುಂಬದ 7 ಜನ ಅನುಮಾನಾಸ್ಪದ ಸಾವು
ಹೈದರಾಬಾದ್, ಡಿಸೆಂಬರ್ 23 : ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಾಜ್ ಪೇಟೆ ಸಮೀದ ಪಮುಕುಂಟಾ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಬಾಲನರಸಯ್ಯ(70), ಪತ್ನಿ ಭರತಮ್ಮ(65), ಮಗಳು ದುಬಾಶಿ ತಿರುಮಲ(35), ಅವರ ಗಂಡ ಬಾಲರಾಜು(38), ಮಕ್ಕಳಾದ ಶ್ರಾವಣಿ(13), ರಾಜೇಶ್ (11) ಹಾಗೂ ರಾಕೇಶ್(8) ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಕ್ರಿಮಿನಾಶಕ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಕೋಳಿ ಫಾರ್ಮ್ ಮಾಲೀಕರೊಬ್ಬರು ರೂಮಿನಲ್ಲಿ ಮೃತರನ್ನು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರಾಜ್ ಪೇಟ್ ಪೊಲೀಸ್ ಪರಿಶೀಲನೆ ನಡೆಸಿದರು.
ಮೃತದೇಹಗಳು ಇದ್ದ ರೂಮಿನಲ್ಲಿ ಒಂದು ಮದ್ಯದ ಬಾಟಲಿ, ಚಿಕನ್ ಅಡುಗೆ ಪತ್ತೆಯಾಗಿದೆ. ಪಕ್ಕದ ರೂಮಿನಲ್ಲಿ 3 ಕ್ರಿಮಿನಾಶಕ ಬಾಟಲಿಗಳು ಪತ್ತೆಯಾಗಿವೆ ಎಂದು ಡಿಸಿಪಿ ರಾಮಚಂದ್ರ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ರಾಜ್ ಪೇಟ್ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications