ರಾಜ್ಯಸಭೆಗೆ ಚುನಾವಣೆ ನಾಮಪತ್ರ ಸಲ್ಲಿಸಿದ TRS ಅಭ್ಯರ್ಥಿಗಳು
ಹೈದರಾಬಾದ್, ಮೇ 25: ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(TRS) ಅಭ್ಯರ್ಥಿಗಳು ಬುಧವಾರ(ಮೇ 25) ದಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಟಿಆರ್ಎಸ್ ನ ಮೂವರು ಅಭ್ಯರ್ಥಿಗಳು ರಾಜ್ಯಸಭೆ ಆಯ್ಕೆ ಬಯಸಿದ್ದು, ಮೂವರು ಸುಲಭವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ.
ಡಿ ದಾಮೋದರ್ ರಾವ್, ಬಿ ಪಾರ್ಥಸಾರಥಿ ರೆಡ್ಡಿ ಇಂದು ನಾಮಪತ್ರ ಸಲ್ಲಿಸಿದ್ದು, ದ್ವೈವಾರ್ಷಿಕ ಚುನಾವಣೆ ಜೂನ್ 10ರಂದು ನಿಗದಿಯಾಗಿದೆ. ವಿ ಲಕ್ಷ್ಮಿಕಾಂತ ರಾವ್ ಹಾಗೂ ಡಿ ಶ್ರೀನಿವಾಸ್ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
ಕ್ಯಾಪ್ಟನ್ ವಿ ಲಕ್ಷ್ಮಿಕಾಂತ್ ರಾವ್, ಡಿ ಶ್ರೀನಿವಾಸ್ ನಿವೃತ್ತಿ, ಬಂಡಾ ಪ್ರಕಾಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ. 119 ಸ್ಥಾನಗಳ ತೆಲಂಗಾಣ ವಿಧಾನಸಭೆಯಲ್ಲಿ ತೆಲಂಗಾಣ ರಾಷ್ಟ್ರಸಮಿತಿ 102 ಸ್ಥಾನ ಹೊಂದಿದ್ದು, ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳಲಿದೆ.
ತೆಲಂಗಾಣದಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಮೇ 17ರಂದು ತೆಲಂಗಾಣ ರಾಷ್ಟ್ರಸಮಿತಿ(ಟಿಆರ್ಎಸ್) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಕಟಿಸಿದ್ದರು.
ಪಾರ್ಥಸಾರಥಿ ರೆಡ್ಡಿ ಹೆಟೆರೋ ಸಮೂಹ ಸಂಸ್ಥೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಿಂಥೆಟೆಕ್ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಪಾರ್ಥಸಾರಥಿ ಅವರು Anti retroviral ಔಷಧ ಉತ್ಪಾದನೆಯಲ್ಲಿ ವಿಶ್ವದ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
ತೆಲಂಗಾಣ ರಾಜ್ಯ ಕ್ವಾರಿ, ಗ್ರಾನೈಟ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಗಾಯತ್ರಿ ರವಿ ಅಲಿಯಾಸ್ ವಡ್ಡಿರಾಜು ರವಿಚಂದ್ರ ಅವರು ಮೂಲತಃ ಮೆಹಬೂಬಾಬಾದ್ ಜಿಲ್ಲೆಯವರಾಗಿದ್ದು, ಖಮ್ಮಂನಲ್ಲಿ ನೆಲೆಸಿದ್ದಾರೆ. ಹಿಂದುಳಿದ ವರ್ಗ, ಮುನ್ನುರು ಕಾಪು ಸಮುದಾಯದ ಗೌರವಾಧ್ಯಕ್ಷರಾಗಿದ್ದಾರೆ. 2018ರಲ್ಲಿ ವಾರಂಗಲ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ರಾಜು ಗೆಲುವು ಸಾಧಿಸಿರಲಿಲ್ಲ, 2019ರ ಏಪ್ರಿಲ್ ತಿಂಗಳಲ್ಲಿ ತೆಲಂಗಾಣ ರಾಷ್ಟ್ರಸಮಿತಿ ಸೇರ್ಪಡೆಗೊಂಡರು.
ಮಾಧ್ಯಮ ಕ್ಷೇತ್ರದಿಂದ ಬಂದು ತೆಲಂಗಾಣ ರಾಷ್ಟ್ರಸಮಿತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ದಾಮೋದರ್ ರಾವ್ ಇನ್ನೊಬ್ಬ ಅಭ್ಯರ್ಥಿಯಾಗಿದ್ದಾರೆ.ದಾಮೋದರ್ ರಾವ್ ಅವರು ತೆಲಂಗಾಣ ಪಬ್ಲಿಕೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪಕ್ಷದ ಮುಖವಾಣಿ ಎನಿಸಿರುವ ಟಿ ನ್ಯೂಸ್, ನಮಸ್ತೆ ತೆಲಂಗಾಣ ಪತ್ರಿಕೆ, ತೆಲಂಗಾಣ ಟುಡೇ ಮುಖ್ಯಸ್ಥರಾಗಿದ್ದಾರೆ.