ರಜನಿಕಾಂತ್ ಅಧಿಕ ರಕ್ತದೊತ್ತಡ ಮುಂದುವರಿಕೆ: ಯಾರ ಭೇಟಿಗೂ ಅವಕಾಶವಿಲ್ಲ
ಹೈದರಾಬಾದ್, ಡಿಸೆಂಬರ್ 26: ರಕ್ತದೊತ್ತಡದಲ್ಲಿ ಏರಿಳಿತವಾದ ಕಾರಣ ಶುಕ್ರವಾರ ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿರುವ ನಟ ರಜನಿಕಾಂತ್ ಅವರ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗುತ್ತಿದೆ. ಅವರು ಈಗಿನ ಆರೋಗ್ಯ ಸ್ಥಿತಿಯನ್ನು ವಿವರಿಸಿ ಆಸ್ಪತ್ರೆಯು ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ಅವರ ರಕ್ತದೊತ್ತಡದ ಸ್ಥಿತಿಯ ಮೇಲೆ ಈಗಲೂ ವೈದ್ಯರು ನಿಗಾವಹಿಸುತ್ತಿದ್ದಾರೆ. ಪ್ರಸ್ತುತ ಅವರ ರಕ್ತದೊತ್ತಡ ಅಧಿಕ ಮಟ್ಟದಲ್ಲಿಯೇ ಇದೆ. ಹೀಗಾಗಿ ಅವರನ್ನು ಇಂದು ಬಿಡುಗಡೆ ಮಾಡಬೇಕೋ ಬೇಡವೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಆಸ್ಪತ್ರೆ ತಿಳಿಸಿದೆ.
'ನಿನ್ನೆ ಆಸ್ಪತ್ರೆಗೆ ದಾಖಲಾಗಿರುವ ರಜನಿಕಾಂತ್ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ರಾತ್ರಿ ಅವರ ಆರೋಗ್ಯದಲ್ಲಿ ಅಷ್ಟೇನೂ ತೊಂದರೆಗಳಾಗಿಲ್ಲ. ಅವರ ರಕ್ತದೊತ್ತಡ ಅಧಿಕಮಟ್ಟದಲ್ಲಿಯೇ ಇದೆ. ಆದರೆ ನಿನ್ನೆಗಿಂತಲೂ ಉತ್ತಮ ನಿಯಂತ್ರಣದ ಸ್ಥಿತಿಯಲ್ಲಿದೆ. ಅವರ ಆರೋಗ್ಯದ ಮೇಲೆ ಇಂದು ಮತ್ತಷ್ಟು ತಪಾಸಣೆ ನಡೆಸಲಾಗುವುದು. ಸಂಜೆ ವೇಳೆಗೆ ವರದಿ ಬರಲಿದೆ' ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

'ಅವರ ರಕ್ತದೊತ್ತಡದ ಚಿಕಿತ್ಸೆಯನ್ನು ಬಹಳ ಎಚ್ಚರಿಕೆಯಿಂದ ನಡೆಸಲಾಗುತ್ತಿದೆ. ಅವರನ್ನು ತೀವ್ರ ನಿಗಾದಲ್ಲಿರಿಸುವುದನ್ನು ಮುಂದುವರಿಸಲಾಗುತ್ತದೆ. ರಕ್ತದೊತ್ತಡದಲ್ಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಸಂಪೂರ್ಣ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಹೀಗಾಗಿ ಅವರ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಅವರ ತಪಾಸಣೆ ಮತ್ತು ರಕ್ತದೊತ್ತಡದ ನಿಯಂತ್ರಣವನ್ನು ಗಮನಿಸಿ ಸಂಜೆ ವೇಳೆ ಬಿಡುಗಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ತಿಳಿಸಿದೆ.
'ಅಣ್ಣಾತೆ' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿರುವ ರಜನಿಕಾಂತ್ ಅವರಲ್ಲಿ ರಕ್ತದೊತ್ತಡದ ಏರಿಳಿತ ಮತ್ತು ಬಳಲಿಕೆ ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಕೋವಿಡ್ ವರದಿಯಲ್ಲಿ ನೆಗೆಟಿವ್ ಬಂದಿದೆ.












Click it and Unblock the Notifications