'ಕಮಿಷನ್' ಎಂದ ರಾಹುಲ್ ಗಾಂಧಿಗೆ ಕೆಸಿಆರ್ ಖಡಕ್ ಪ್ರತಿಕ್ರಿಯೆ
ಹೈದರಾಬಾದ್, ಡಿಸೆಂಬರ್ 01: ''ರಾಹುಲ್ ಗಾಂಧಿ ಒಬ್ಬ ಜೋಕರ್ ಥರ ಮಾತನಾಡುತ್ತಾರೆ" ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದರು.
ತೆಲಂಗಾಣದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲೆಂಡು ನಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಅವರು ಶುಕ್ರವಾರ ಮಾತನಾಡುತ್ತಿದ್ದರು. ಕೆಸಿಆರ್ ಅಂದರೆ 'ಖಾವೋ ಕಮಿಷನ್ ರಾವ್' ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಜೋಕರ್ ಎಂದರು.
"ರಾಹುಲ್ ಗಾಂಧಿ ಅವರಿಗೆ ಬುದ್ಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ದೇವರು ಅವರಿಗೆ ಬುದ್ಧಿ ಕೊಟ್ಟಿದ್ದಾನಾ? ಅವರು ಜೋಕರ್ ರೀತಿ ಮಾತನಾಡುತ್ತಾರೆ. ನಾವು ಕೆಲವು ನೀರಾವರಿ ಯೋಜನೆಗಳನ್ನು ಪುನರ್ವಿನ್ಯಾಸಗೊಳಿಸಿದ್ದು ಕಮಿಷನ್ ಆಸೆಗೆ ಎನ್ನುತ್ತೀರಿ. ರುದ್ರಮಕೋಟಕ್ಕೆ ಬರುವ ಧೈರ್ಯ ನಿಮಗಿದೆಯೇ? ನಿಮ್ಮ ತಂದೆಯವರ ಹೆಸರಿನ ರಾಜೀವ್ ಸಾಗರ, ನಿಮ್ಮ ಅಜ್ಜಿಯವರ ಹೆಸರಿನ ಇಂದಿರಾ ಸಾಗರಗಳು ಅಲ್ಲಿವೆ. ನಾನು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ. ಸುಮ್ಮನೆ ಅರ್ಥವಿಲ್ಲದ ಆರೋಪ ಮಾಡಬೇಡಿ" ಎಂದು ಅವರು ಉತ್ತರಿಸಿದರು.

"ನಾನೂ ಗಾಂಧಿ ಕುಟುಂಬದಂತೆಯೇ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ನಮ್ಮ ರಾಜ್ಯಕ್ಕೆ ಯಾವ ಯೋಜನೆ ಬೇಕೋ ಅದನ್ನು ನಾವು ನಿರ್ಮಿಸುತ್ತೇವೆ. ನಮಗೆ ಕಮಿಷನ್ ಯಾಕೆ ಬೇಕು? ನಿಮಗೆ ಕಮಿಷನ್ ಬೇಕಾದರೆ ನಾನೇ ಕೊಡುತ್ತೇನೆ. ನಿಮ್ ರೀತಿ ಕಮಿಷನ್ ಜೀವನ ನಮ್ಮದಲ್ಲ. ನಮ್ಮ ಬದುಕು ಹೋರಾಟದ್ದು" ಎಂದು ಖಡಕ್ ಪ್ರತಿಕ್ರಿಯೆ ನೀಡಿದರು.
ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications