ಮಾರುತಿರಾವ್ ಡೆತ್ ನೋಟ್; ಅಮೃತಾಗೆ ಭಾವನಾತ್ಮಕ ಸಂದೇಶ!
ಹೈದರಾಬಾದ್, ಮಾರ್ಚ್ 09 : ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ದಲಿತ ಯುವಕನನ್ನು ಪ್ರೀತಿಸಿ ವಿವಾಹವಾದ ಕಾರಣ ಅಳಿಯನ್ನು ಕೊಲ್ಲಿಸಿದ್ದ ಅವರು, ಕೊನೆಯಲ್ಲಿ ಮಗಳಿಗೆ ಭಾವನಾತ್ಮಕ ಸಂದೇಶ ಬರೆದಿಟ್ಟು ಹೋಗಿದ್ದಾರೆ.
ಕೊನೆ ಬಾರಿ ಅಪ್ಪನ ಮುಖ ಕಾಣದೆ ಕಣ್ಣೀರಿಟ್ಟ ಅಮೃತಾ
ಹೈದರಾಬಾದ್ನ ಖೈರತಾಬಾದ್ ಆರ್ಯವೈಶ್ಯ ಭವನದಲ್ಲಿ ವಿಷ ಸೇವಿಸಿ ಶನಿವಾರ ಅಮೃತಾ ತಂದೆ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಮಾರುತಿರಾವ್ ಶವ ಸಿಕ್ಕ ಕೊಠಡಿಯಲ್ಲಿ ಪೊಲೀಸರಿಗೆ ಡೆತ್ ನೋಟ್ ಸಹ ಸಿಕ್ಕಿದೆ.
ಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆ
ಮಾರುತಿರಾವ್ ಆತ್ಮಹತ್ಯೆ ಪ್ರಕರಣದ ಬಳಿಕ ಪ್ರತಿಕ್ರಿಯೆ ನೀಡಿದ್ದ ಪುತ್ರಿ ಅಮೃತಾ, "ಅವರೊಂದಿಗೆ ನಾನು ಯಾವುದೇ ಸಂಪರ್ಕ ಹೊಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದರೂ ಮಾಡಿಕೊಂಡಿರಬಹುದು" ಎಂದು ಹೇಳಿಕೆ ನೀಡಿದ್ದರು.
ಪತಿಯನ್ನು ಕೊಂದಿದ್ದು ಜಾತಿಪದ್ಧತಿ: ಅಮೃತಾ
ಆಂಧ್ರಪ್ರದೇಶದ ನಲ್ಗೋಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿ ಮಾರುತಿರಾವ್ ರಿಯಲ್ ಎಸ್ಟೇಟ್ ಉದ್ಯಮಿ. 2018ರ ಸೆಪ್ಟೆಂಬರ್ 15ರಂದು ಪುತ್ರಿ ಅಮೃತಾ ಪತಿ ಪ್ರಣಯ್ ಪೆರುಮಲ್ಲಾರನ್ನು ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಅವರು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದರು.
ಪ್ರಣಯ್ ಹತ್ಯೆಗೆ 1 ಕೋಟಿ ರೂ. ಸುಪಾರಿ
ಕೊಠಡಿಯಲ್ಲಿ ಡೆತ್ ನೋಟ್ ಪತ್ತೆ
ಮಾರುತಿರಾವ್ ಇದ್ದ ಕೊಠಡಿಯಲ್ಲಿ ಪೊಲೀಸರಿಗೆ ಚಿಕ್ಕ ಡೆತ್ ನೋಟ್ ಸಿಕ್ಕಿದೆ. "ಗಿರಿಜಾ ನನ್ನನ್ನು ಕ್ಷಮಿಸು, ಅಮೃತಾ ಅಮ್ಮನ ಬಳಿ ಹೋಗು" ಎಂದು ಬರೆಯಲಾಗಿದೆ. ಪೊಲೀಸರು ಇದು ಮಾರುತಿರಾವ್ ಅವರ ಕೈ ಬರಹವೇ? ಎಂದು ಪರಿಶೀಲನೆ ನಡೆಸುತ್ತಿದ್ದಾರೆ.
ಅಮೃತಾ ತಾಯಿ ಜೊತೆಗಿಲ್ಲ
ಪ್ರಣಯ್ ಪೆರುಮಲ್ಲಾ ಹತ್ಯೆಯ ಬಳಿಕ ಪ್ರಣಯ್ ತಾಯಿ ಅಮೃತಾ ಮತ್ತು ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತಾಯಿ ಮನೆ ಜೊತೆ ಯಾವುದೇ ಸಂಬಂಧವನ್ನು ಆಕೆ ಹೊಂದಿಲ್ಲ. ಆದ್ದರಿಂದ, ಡೆತ್ ನೋಟ್ನಲ್ಲಿ ಮಾರುತಿರಾವ್ ತಾಯಿ ಜೊತೆ ಇರುವಂತೆ ಮಗಳಿಗೆ ಸಂದೇಶ ನೀಡಿದ್ದಾರೆ.
ಹೈದರಾಬಾದ್ನಲ್ಲಿ ಕೆಲಸವಿದೆ
ಶನಿವಾರ ಪತ್ನಿ ಗಿರಿಜಾ ಬಳಿ ಹೈದರಾಬಾದ್ನಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ಮಾರುತಿರಾವ್ ನಲ್ಗೋಂಡ ಜಿಲ್ಲೆಯ ತಮ್ಮ ಮನೆಯಿಂದ ಕಾರಿನಲ್ಲಿ ಹೊರಟಿದ್ದರು. ಡ್ರೈವರ್ ರಾಜೇಶ್ ಮಾತ್ರ ಮಾರುತಿರಾವ್ ಜೊತೆಗಿದ್ದರು. ಏನು ಕೆಲಸವಿದೆ ಎಂದು ಪತ್ನಿಗಾಗಲಿ, ರಾಜೇಶ್ಗಾಗಲಿ ಮಾರುತಿರಾವ್ ಸ್ಪಷ್ಟವಾಗಿ ಹೇಳಿರಲಿಲ್ಲ.
ಹೈದರಾಬಾದ್ಗೆ ಬಂದರು
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಖೈರತಾಬಾದ್ನಲ್ಲಿರುವ ಆರ್ಯವೈಶ್ಯ ಭವನಕ್ಕೆ ಮಾರುತಿರಾವ್ ಆಗಮಿಸಿ ಕೊಠಡಿ ಪಡೆದರು. ಡ್ರೈವರ್ ರಾಜೇಶ್ ಕಾರಿನಲ್ಲಿಯೇ ಮಲಗಿದ್ದರು. ರಾತ್ರಿ ಇಡ್ಲಿ, ಉದ್ದಿನ ವಡೆಯನ್ನು ತರಿಸಿಕೊಂಡು ತಿಂದಿದ್ದರು. ಬಳಿಕ ಡ್ರೈವರ್ ಅವರ ಜೊತೆ ಮಾತುಕತೆ ನಡೆಸಿಲ್ಲ.
ಸಿಬ್ಬಂದಿಯಿಂದ ಕರೆ
ಆರ್ಯವೈಶ್ಯ ಭವನದ ಸಿಬ್ಬಂದಿ ಭಾನುವಾರ ಕೊಠಡಿ ಸ್ವಚ್ಛ ಮಾಡಲು ಬೆಲ್ ಮಾಡಿದ್ದರು. ಆದರೆ, ಎಷ್ಟು ಕರೆದರೂ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಕಾರಿನಲ್ಲಿದ್ದ ಡ್ರೈವರ್ ರಾಜೇಶ್ಗೆ ಮಾಹಿತಿ ನೀಡಿದ್ದರು. ಆಗ ಎಲ್ಲರೂ ಆಗಮಿಸಿ ಕೊಠಡಿ ಬಾಗಿಲು ಒಡೆದಾಗ ಹಾಸಿಗೆ ಮೇಲೆ ಮಾರುತಿರಾವ್ ಶವ ಪತ್ತೆಯಾಗಿತ್ತು. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.