ಆಂಬ್ಯುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯ; ರಸ್ತೆಯಲ್ಲಿ ವ್ಯಕ್ತಿ ಸಾವು
ಹೈದರಾಬಾದ್, ಜೂನ್ 12 : ಅಸ್ತಮಾದಿಂದ ಬಳಲುತ್ತಿದ್ದ ರೋಗಿಯೊಬ್ಬರು ರಸ್ತೆ ಮೇಲೆಯೇ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆಂಬ್ಯುಲೆನ್ಸ್ ಸಿಬ್ಬಂದಿ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದರು.
Recommended Video
ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ 52 ವರ್ಷದ ವ್ಯಕ್ತಿ ಆರ್. ಶ್ರೀನಿವಾಸ ಬಾಬು ರಸ್ತೆಯಲ್ಲಿ ಮರದ ಕೆಳಗೆ ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿ ಸಹಕಾರ ನೀಡಿದ್ದರೆ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತಿತ್ತು.
ಸಿಕಂದರಾಬಾದ್ನಿಂದ ಮೇದಕ್ಗೆ ಬಸ್ನಲ್ಲಿ ಆಗಮಿಸಿದ್ದ ಆರ್. ಶ್ರೀನಿವಾಸ ಬಾಬು ಅವರಿಗೆ ರಸ್ತೆಯಲ್ಲಿ ಹೋಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರು ಅಲ್ಲಿಯೇ ಇದ್ದ ಮರದ ಕೆಳಗೆ ಮಲಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಒಂದು ಗಂಟೆ ಬಳಿಕ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದಿತ್ತು. ಆದರೆ, ಉಸಿರಾಟದ ತೊಂದರೆ ಕೊರೊನಾ ವೈರಸ್ ಸೋಂಕಿನಿಂದ ಬಂದಿರಬಹುದು ಎಂದು ಸಿಬ್ಬಂದಿ ಹೇಳಿದರು. ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರಾಕರಿಸಿದರು.
ತಮ್ಮ ಬಳಿ ಪಿಪಿಇ ಕಿಟ್ ಇಲ್ಲ, ವ್ಯಕ್ತಿಗೆ ಕೊರೊನಾ ಸೋಂಕು ಇದ್ದರೆ ನಮಗೂ ತಗುಲುತ್ತದೆ ಎಂದು ಅಲ್ಲಿಂದ ವಾಪಸ್ ಆದರು. ಪೊಲೀಸರು ಮತ್ತೊಂದು ಆಂಬ್ಯುಲೆನ್ಸ್ಗೆ ಕರೆ ಮಾಡಿದರು. 45 ನಿಮಿಷದ ಬಳಿಕ ಅದು ಸ್ಥಳಕ್ಕೆ ಬಂದಿತು.
2ನೇ ಆಂಬ್ಯುಲೆನ್ಸ್ ಬರುವ ಹೊತ್ತಿಗೆ ಉಸಿರಾಟದ ತೊಂದರೆಯಿಂದಾಗಿ ಆರ್. ಶ್ರೀನಿವಾಸ ಬಾಬು ಮೃತಪಟ್ಟಿದ್ದರು. ಆಂಬ್ಯುಲೆನ್ಸ್ ಪಕ್ಕದಲ್ಲಿ ಬಂದು ನಿಂತಿದ್ದರೂ ಶ್ರೀನಿವಾಸ ಬಾಬು ಅವರು ಒದ್ದಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications